Mysore
19
scattered clouds

Social Media

ಶನಿವಾರ, 07 ಫೆಬ್ರವರಿ 2026
Light
Dark

ಓದುಗರ ಪತ್ರ: ಬೇಸರ ತರಿಸಿದ ಜನಪ್ರತಿನಿಧಿಗಳ ವರ್ತನೆ

ಓದುಗರ ಪತ್ರ

ಇತ್ತೀಚೆಗೆ ನಡೆದ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಕೆಲವು ಸದಸ್ಯರು ನಡೆದುಕೊಂಡ ರೀತಿ ತಲೆ ತಗ್ಗಿಸುವಂತಿದೆ. ಅವರು ಬಳಸಿದ ಪದ ಪ್ರಯೋಗ ಅತ್ಯಂತ ಕೆಟ್ಟ ರೀತಿಯಲ್ಲಿದ್ದು, ಇಡೀ ಸಂಸದೀಯ ವ್ಯವಸ್ಥೆಗೆ ಅಪಚಾರವಾಗಿತ್ತು. ಓರ್ವ ಹಿರಿಯ ಸದಸ್ಯರು ಬಳಸಿದ ಭಾಷೆ ಅಸಂಸದೀಯವಾಗಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸನ ಸಭೆಗಳಿಗೆ ಅತ್ಯಂತ ಮಹತ್ವದ ಸ್ಥಾನ ನೀಡಲಾಗಿದೆ. ರಾಜ್ಯದ ಜನರ ಕಲ್ಯಾಣಕ್ಕೆ ಪೂರಕವಾದ ಶಾಸನಗಳನ್ನು ರಚಿಸುವ ಮಹತ್ವದ ಜವಾಬ್ದಾರಿ ಕೂಡ ಅವರ ಮೇಲಿದೆ. ಸಭಾ ಕಲಾಪಗಳನ್ನು ದೂರದರ್ಶನ ಸೇರಿದಂತೆ ವಿವಿಧ ದೃಶ್ಯ ಮಾಧ್ಯಮಗಳು ನೇರ ಪ್ರಸಾರ ಮಾಡುತ್ತವೆ. ಪ್ರಮುಖ ಜವಾಬ್ದಾರಿಯನ್ನು ಹೊತ್ತಿರುವ ಜನಪ್ರತಿನಿಧಿಗಳ ನಡವಳಿಕೆಯನ್ನು ಇಡೀ ರಾಜ್ಯದ ಜನರು ಗಮನಿಸುತ್ತಿದ್ದಾರೆ.

ಉಭಯ ಸದನಗಳ ಸದಸ್ಯರು ತಮ್ಮ ಘನತೆಗೆ ತಕ್ಕಂತೆ ಮಾತನಾಡಬೇಕೆ ಹೊರತು, ಬಾಯಿ ಚಪಲಕ್ಕಾಗಲಿ ಅಥವಾ ಪಕ್ಷದ ನಾಯಕರನ್ನು ಓಲೈಸುವುದಕ್ಕಾಗಿ ಆಡುವ ಇಂತಹ ಕೆಳಮಟ್ಟದ, ಸಭ್ಯತೆಯ ಎಲ್ಲೆಯನ್ನು ಮೀರುವ ಮಾತುಗಳು ತೀರಾ ಖಂಡನಾರ್ಹವಾಗಿವೆ. ಅನೇಕ ವೇಳೆ ಸಭಾಧ್ಯಕ್ಷರೇ ಮೂಕ ಪ್ರೇಕ್ಷಕರಾಗಿ ಇರಬೇಕಾದ ಸನ್ನಿವೇಶ ಎದುರಾಗಿದೆ. ಇನ್ನು ಮುಂದಾದರೂ ಜನಪ್ರತಿನಿಧಿಗಳು ಶಾಸನ ಸಭೆಯಲ್ಲಿ ತಮ್ಮ ಘನತೆಗೆ ತಕ್ಕಂತೆ ಮಾತನಾಡುವ ಮೂಲಕ ಶಾಸನಸಭೆಯ ಗೌರವವನ್ನು ಕಾಪಾಡುವುದು ಅಗತ್ಯ.

 -ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು

Tags:
error: Content is protected !!