ಇತ್ತೀಚೆಗೆ ರಿಷಭ್ ಶೆಟ್ಟಿ ನಿರ್ದೇಶಿಸಿ, ಅಭಿನಯಿಸಿರುವ ಕಾಂತಾರ ಚಾಪ್ಟರ್ ೧ ಚಲನಚಿತ್ರ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಆದರೆ ಕೆಲವು ಅಭಿಮಾನಿಗಳು ಸಿನಿಮಾದಲ್ಲಿ ಬರುವ ದೈವದ ವೇಷಭೂಷಣ ಧರಿಸಿಕೊಂಡು ಬಂದು ಚಿತ್ರ ಮಂದಿರದ ಒಳಗೆ ಓಡಾಡುವುದು, ಕಿರುಚಾಡುವುದು ಹಾಗೂ ಮೈಮೇಲೆ ದೈವ ಬಂದಂತೆ ವರ್ತಿಸುತ್ತಿರುವುದರಿಂದ ಪ್ರೇಕ್ಷಕರು ತೊಂದರೆ ಅನುಭವಿಸುವಂತಾಗಿದೆ.
ಪ್ರತಿಯೊಬ್ಬರಿಗೂ ತಮಗೆ ಇಷ್ಟವಾದ ದೈವಗಳ ಬಗ್ಗೆ ಅಪಾರವಾದ ನಂಬಿಕೆ, ಪ್ರೀತಿ, ಕಾಳಜಿ ಇರುತ್ತದೆ. ಆದರೆ ಸಿನಿಮಾವನ್ನು ಸಿನಿಮಾವಾಗಿ ನೋಡಿ ಆನಂದಿಸಬೇಕೇ ಹೊರತು, ವಿನಾಕಾರಣ ದೈವ ಬಂದಂತೆ ವರ್ತಿಸಿ ಸಿನಿಮಾ ನೋಡುಗರಿಗೂ ತೊಂದರೆ ಕೊಡುವುದು ಸರಿಯಾದ ಕ್ರಮವಲ್ಲ. ಆದ್ದರಿಂದ ಚಿತ್ರಮಂದಿರಗಳಲ್ಲಿ ಶಿಸ್ತು ಬದ್ಧತೆಯಿಂದ ಸಿನಿಮಾ ನೋಡಿ ಕಣ್ತುಂಬಿಕೊಳ್ಳಬೇಕು. ಸಿನಿ ಪ್ರೇಕ್ಷಕರಿಗೆ ತೊಂದರೆ ಉಂಟಾಗುವಂತೆ ವರ್ತಿಸುವವರನ್ನು ಚಿತ್ರಮಂದಿರದಿಂದ ಹೊರಕ್ಕೆ ಕಳುಹಿಸಿ ಇವರಿಂದ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಾಗಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು





