Mysore
19
overcast clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ಓದುಗರ ಪತ್ರ: ಕಸದ ರಾಶಿಯನ್ನು ತೆರವುಗೊಳಿಸಿ

ಮೈಸೂರು ದಸರಾ ಮಹೋತ್ಸವದ ಕೇಂದ್ರ ಬಿಂದು ಜಂಬೂ ಸವಾರಿಯ ಮೆರವಣಿಗೆಗೆ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ನಗರದ ನಾನಾ ಭಾಗಗಳಲ್ಲಿ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿದ್ದು, ಜಂಬೂ ಸವಾರಿ ಸಾಗುವ ರಸ್ತೆಯನ್ನೂ ಸ್ವಚ್ಛಗೊಳಿಸಿ ಅಂದವಾಗಿ ಕಂಗೊಳಿಸುವಂತೆ ಮಾಡಿಲಾಗಿದೆ.

ದಸರಾ ಎಂದರೆ ಇಡೀ ಮೈಸೂರಿಗೆ ಹಬ್ಬವಿದ್ದಂತೆ. ನಗರವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಇದರ ಅಂದ ಹೆಚ್ಚಿಸಬೇಕಾದದ್ದು ಜಿಲ್ಲಾಡಳಿತದ ಕರ್ತವ್ಯ. ಆದರೆ ಇಲ್ಲಿ ಜಂಬೂಸವಾರಿ ಸಾಗುವ ಮಾರ್ಗವನ್ನು ಹೊರತುಪಡಿಸಿ ಉಳಿದ ರಸ್ತೆಗಳಲ್ಲಿ ಕಸದ ರಾಶಿಯೇ ಸಂಗ್ರಹವಾಗಿದ್ದರೂ ಅದನ್ನು ತೆರವುಗೊಳಿಸಲು ಸಂಬಂಧಪಟ್ಟವರು ಕ್ರಮಕೈಗೊಳ್ಳುತ್ತಿಲ್ಲ. ಜಂಬೂ ಸವಾರಿ ಸಾಗುವ ಮಾರ್ಗದ ಪಕ್ಕದ ರಸ್ತೆಗಳಾದ ಮಂಡಿ ಮೊಹಲ್ಲಾ, ಚಿಕ್ಕ ಮಾರುಕಟ್ಟೆ, ಸಾಡೆ ರಸ್ತೆ, ಅಕ್ಬರ್ ರಸ್ತೆಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಮಹಾನಗರ ಪಾಲಿಕೆಯವರು ಕಸದ ರಾಶಿಯನ್ನು ತೆರವುಗೊಳಿಸದೆ ದುರ್ವಾಸನೆ ಬೀರಲಾರಂಭಿಸಿದೆ.

ಅಲ್ಲದೆ ಮಳೆ, ಗಾಳಿ ಬೀಸಿದಂತೆಲ್ಲ ಈ ತ್ಯಾಜ್ಯ ರಸ್ತೆಗೆಲ್ಲ ಹರಡುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಇಲ್ಲಿ ಸಂಗ್ರಹವಾಗಿರುವ ಕಸದ ರಾಶಿಯನ್ನು ತೆರವುಗೊಳಿಸಬೇಕಿದೆ. -ಚಂದ್ರಶೇಖರ್, ಸಾಡೆ ರಸ್ತೆ, ಮೈಸೂರು.

 

Tags:
error: Content is protected !!