ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಬೆಂಕಿ ಅವಘಡ ಸಂಭವಿಸಿ ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ. ಬೇಸಿಗೆಯ ಆರಂಭದಲ್ಲಿಯೇ ಅಗ್ನಿ ಅವಘಡ ಸಂಭವಿಸಿದ್ದು, ಇನ್ನು ಮಾರ್ಚ್, ಏಪ್ರಿಲ್, ಮೇ ತಿಂಗಳಿನಲ್ಲಿ ಮತ್ತಷ್ಟು ಕಠಿಣವಾಗಲಿದೆ. ಅರಣ್ಯ ಇಲಾಖೆಯು ಚಾಮುಂಡಿಬೆಟ್ಟದಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ ಎಚ್ಚತ್ತುಕೊಂಡು, ಉಳಿದ ಭಾಗದ ಅರಣ್ಯ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಡಬೇಕು. ರಾಜ್ಯದಲ್ಲಿ ಬಿಸಿಲಿನ ತಾಪಮಾನ ಮತ್ತಷ್ಟು ಏರಿಕೆಯಾಗಲಿದ್ದು, ಚಾಮರಾಜನಗರ ಜಿಲ್ಲೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ ಅಭಯಾರಣ್ಯ, ಬಿಳಿಗಿರಿರಂಗನ ಬೆಟ್ಟ, ನಾಗರಹೊಳೆ, ಮಲೆ ಮಹದೇಶ್ವರಸ್ವಾಮಿ ಬೆಟ್ಟ ಸೇರಿದಂತೆ ಕೊಡಗು, ಉಡುಪಿ, ಹಾಸನ, ಶಿವಮೊಗ್ಗ, ಉತ್ತರ ಕನ್ನಡ, ಮಂಗಳೂರು ಭಾಗಗಳಲ್ಲಿನ ಅರಣ್ಯ ಪ್ರದೇಶಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಳ್ಳಬೇಕು.
ಅಗ್ನಿ ಅವಘಡ ಆಕಸ್ಮಿಕವಾಗಿ ಸಂಭವಿಸುವುದಕ್ಕಿಂತ ಮಾನವನಿಂದ ಸಂಭವಿಸುವುದೇ ಹೆಚ್ಚು. ಹೀಗಾಗಿ ಅರಣ್ಯ ಪ್ರದೇಶಗಳ ಸಮೀಪ ಬೆಂಕಿ ಹಾಕದಂತೆ, ಯಾರೂ ಧೂಮಪಾನ ಮಾಡದಂತೆ ನೋಡಿಕೊಳ್ಳಬೇಕು. ಜತೆಗೆ ಪ್ಲಾಸ್ಟಿಕ್, ಗಾಜಿನ ಬಾಟಲಿಗಳು ಕಾಡನ್ನು ಸೇರದಂತೆ ಎಚ್ಚರವಹಿಸಬೇಕು. ಸಾರ್ವಜನಿಕರೂ ಕೂಡ ಕಾಡನ್ನು ಬೆಂಕಿಯಿಂದ ರಕ್ಷಿಸುವುದು ಅರಣ್ಯ ಇಲಾಖೆಯ ಜವಾಬ್ದಾರಿ ಎಂದು ಭಾವಿಸದೆ, ಇದು ನಮ್ಮೆಲ್ಲರ ಹೊಣೆ ಎಂದುಕೊಂಡು ಅರಣ್ಯ ಇಲಾಖೆಯ ನಿಯಮಕ್ಕೆ ಬದ್ಧರಾಗಿ ಕಾಡಿನ ರಕ್ಷಣೆಗೆ ಸಹಕರಿಸಬೇಕು.
-ನಾಗೇಶ್, ಮಾನಸ ಗಂಗೋತ್ರಿ, ಮೈಸೂರು.





