ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಯ ಪ್ರಕರಣಗಳು ಹೆಚ್ಚಾಗು ತ್ತಿದ್ದು, ವಿದ್ಯಾವಂತರೇ ವಂಚಕರ ಜಾಲಕ್ಕೆ ಸಿಲುಕಿ ಲಕ್ಷಾಂತರ ರೂ. ಹಣ ವನ್ನು ಕಳೆದುಕೊಳ್ಳುತ್ತಿದ್ದಾರೆ.
ನೀವು ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದೀರಿ, ಅದಕ್ಕಾಗಿ ನಿಮ್ಮನ್ನು ‘ಡಿಜಿಟಲ್ ಅರೆಸ್ಟ್’ ಮಾಡಲಾಗಿದೆ ಎಂದು ಪೊಲೀಸ್ ಅಥವಾ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡುವ ವಂಚಕರು, ಅಮಾಯಕರನ್ನು ತಮ್ಮ ಜಾಲಕ್ಕೆ ಸಿಲುಕಿಸಿ, ಹಂತ ಹಂತವಾಗಿ ಲಕ್ಷಾಂತರ ರೂಪಾಯಿಗಳನ್ನು ಲಪಟಾಯಿಸುವ ಪ್ರಕರಣಗಳು ನಡೆಯುತ್ತಲೇ ಇವೆ. ಇಂತಹ ಸೈಬರ್ ವಂಚಕರನ್ನು ಸೆರೆ ಹಿಡಿಯಲೆಂದೇ ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲೂ ಸೈಬರ್ ಕ್ರೈಂ ಪೊಲೀಸ್ ಠಾಣೆಗಳು ಕರ್ತವ್ಯ ನಿರ್ವಹಿಸುತ್ತಿವೆ. ಸೈಬರ್ ವಂಚನೆಯ ಬಗ್ಗೆ ಪೊಲೀಸ್ ಇಲಾಖೆ, ಭಾರತೀಯ ರಿಸರ್ವ್ ಬ್ಯಾಂಕ್, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು, ಇನ್ನಿತರ ಸಂಘ ಸಂಸ್ಥೆಗಳು ಸಾಕಷ್ಟು ತಿಳಿವಳಿಕೆ ನೀಡುತ್ತಿದ್ದರೂ ವಂಚನೆ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಾಗಿಲ್ಲ.
ಇನ್ನು ಮುಂದಾದರೂ ನಾಗರಿಕರು ಸೈಬರ್ ವಂಚನೆಯ ಸಣ್ಣ ಸುಳಿವು ಸಿಕ್ಕರೂ, ಎಚ್ಚೆತ್ತುಕೊಂಡು ಸೈಬರ್ ಠಾಣೆ ಅಥವಾ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ಬಹುಮುಖ್ಯವಾಗಿ ಅನಾಮಧೇಯ ಕರೆಗಳನ್ನು ಸ್ವೀಕರಿಸುವಾಗ ಬಹಳಷ್ಟು ಎಚ್ಚರಿಕೆ ವಹಿಸಬೇಕು. ವಂಚನೆಯ ಸುಳಿವು ಸಿಕ್ಕರೆ ಕರೆಯನ್ನು ಸ್ಥಗಿತಗೊಳಿಸಿ, ಆ ನಂಬರ್ಅನ್ನು ತಕ್ಷಣ ಬ್ಲಾಕ್ ಮಾಡುವ ಮೂಲಕ ವಂಚಕರ ಬಲೆಯಿಂದ ತಪ್ಪಿಸಿಕೊಳ್ಳಬಹುದು.
-ಕೆ.ವಿ.ವಾಸು, ವಿವೇಕಾನಂದನಗರ, ಮೈಸೂರು





