ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್ ಮಾಡಿಕೊಂಡಿದ್ದಾರೆ. ಅದರ ಬದಲು ಭಗವಂತನ ಹೆಸರು ಹೇಳಿದ್ದರೆ ಏಳೇಳು ಜನ್ಮಕ್ಕೆ ಸ್ವರ್ಗ ಪ್ರಾಪ್ತಿಯಾಗುತಿತ್ತು ಎಂದು ಹೇಳುವ ಮೂಲಕ ಡಾ. ಬಿ. ಆರ್. ಅಂಬೇಡ್ಕರ್ರವರಿಗೆ ಅಗೌರವ ತೋರಿರುವುದು ಖಂಡನೀಯ. ಅಮಿತ್ ಶಾ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ದೇಶಕ್ಕೆ ಸಂವಿಧಾನವನ್ನು ನೀಡಿದ ಅಂಬೇಡ್ಕರ್ ರವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಅವರ ಅಜ್ಞಾನವನ್ನು ತೋರಿಸುತ್ತದೆ. ಅಷ್ಟಕ್ಕೂ ಅಮಿತ್ ಶಾ ಇಂದು ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ ಎಂದರೆ ಅದಕ್ಕೆ ಅಂಬೇಡ್ಕರ್ರವರು ಬರೆದ ಸಂವಿಧಾನ ಕಾರಣವೇ ಹೊರತು, ಭಗವಂತನಲ್ಲ ಎಂಬುದನ್ನು ಅವರು ಮರೆಯಬಾರದು. ಸದನದಲ್ಲಿ ಮಾತನಾಡುವಾಗ ಭಾಷೆಯ ಮೇಲೆ ಹಿಡಿತವಿರಬೇಕು. ವಿಶ್ವವೇ ಗೌರವಿಸುವ ಅಂಬೇಡ್ಕರ್ ಬಗ್ಗೆ ಗೌರವಯುತವಾಗಿ ಮಾತನಾಡಬೇಕು. ಅದನ್ನು ಬಿಟ್ಟು ಅಗೌರವದಿಂದ ಮಾತನಾಡುವುದು ಸಮಂಜಸವಲ್ಲ. ಸದ್ಯ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದ್ದು, ಅಮಿತ್ ಶಾ ಕೂಡಲೇ ಸದನದಲ್ಲಿಯೇ ಕ್ಷಮೆಯಾಚಿಸಬೇಕು.
-ಎಂ. ಪಿ. ದರ್ಶನ್ ಚಂದ್ರ, ಮುಕ್ಕಡಹಳ್ಳಿ, ಚಾಮರಾಜನಗರ ತಾ.





