ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ‘ಯುವದಸರಾ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸಿದ್ದ ಸುಮಾರು 500 ಕಾಲೇಜುಗಳ ನೃತ್ಯ ತಂಡಗಳ ಪೈಕಿ ಕೇವಲ 12 ನೃತ್ಯ ತಂಡಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಈ ತಂಡಗಳನ್ನು ಯಾವ ಆಧಾರದ ಮೇಲೆ ಆಯ್ಕೆ ಮಾಡಲಾಯಿತು. ಎಂಬುದರ ಬಗ್ಗೆ ಯುವ ದಸರಾ ಆಯೋಜಕರು ತಿಳಿಸಬೇಕು. ಶೇ.5ರಷ್ಟೂ ಕಾಲೇಜುಗಳನ್ನು ಆಯ್ಕೆ ಮಾಡಿಲ್ಲ ಎಂದರೆ ಆಯ್ಕೆಯ ಮಾನದಂಡ ಏನು? ಆಯ್ಕೆ ಸಮಿತಿಯ ಈ ನಿರ್ಧಾರದಿಂದಾಗಿ ಯುವ ದಸರಾದಂತಹ ದೊಡ್ಡ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂಬ ಆಸೆ ಹೊಂದಿದ್ದ ನೂರಾರು ಗ್ರಾಮೀಣ ಪ್ರತಿಭೆಗಳಿಗೆ ನಿರಾಸೆಯಾಗಿದೆ. ಅದರಲ್ಲಿ ನಾನೂ ಒಬ್ಬಳು. ನನ್ನಂತಹ ಅನೇಕ ಕಲಾವಿದರಿಗೆ ಯುವ ಸಂಭ್ರಮ,, ಯುವ ದಸರಾದಂತಹ ಕಾರ್ಯಕ್ರಮಗಳ ವೇದಿಕೆ ಹತ್ತಬೇಕು ಎಂಬ ದೊಡ್ಡ ಕನಸಿರುತ್ತದೆ. ಆದರೆ ಆಯೋಜಕರು ಇದ್ಯಾವುದಕ್ಕೂ ಮಣೆಹಾಕದ ತಮ್ಮಿಚ್ಛೆಯಂತೆ ಆಯ್ಕೆ ಮಾಡುತ್ತಿದ್ದಾರೆ. ದೊಡ್ಡ ಕಾರ್ಯಕ್ರಮ ಆದ್ದರಿಂದ ದೊಡ್ಡ ದೊಡ್ಡ ಕಲಾವಿದರಿಗೆ ಲಕ್ಷಾಂತರ ರೂ ನೀಡಿ ಅವರನ್ನು ಆಹ್ವಾನಿಸಬೇಕು ನಿಜ. ಆದರೆ ಇದರ ಜತೆಗೆ ಶೇ.10ರಷ್ಟು ಕಾರ್ಯಕ್ರಮಗಳನ್ನು ಸ್ಥಳೀಯ ಪ್ರತಿಭೆಗಳಿಗೆ ನೀಡಬೇಕಲ್ಲವೇ? ಒಟ್ಟಾರೆ ಈ ಬಾರಿಯ ಯುವ ಸಂಭ್ರಮ ಹಾಗೂ ಯುವ ದಸರಾ ಕಾರ್ಯಕ್ರಮಗಳು ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುವಲ್ಲಿ ವಿಫಲವಾಗಿದೆ ಅನಿಸುತ್ತದೆ.
-ಟಿ.ಎನ್.ಶ್ರುತಿ, ಅವಕಾಶ ವಂಚಿತ ಕಲಾವಿದೆ, ಮೈಸೂರು,





