Mysore
27
haze

Social Media

ಮಂಗಳವಾರ, 24 ಫೆಬ್ರವರಿ 2026
Light
Dark

ಯುಜಿಡಿ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ

ಕೆ.ಬಿ.ರಮೇಶ ನಾಯಕ

ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಹಲವು ಯೋಜನೆಗಳನ್ನು ಪ್ರಸ್ತಾಪಿಸಿದ ಡಿಸಿ

ಮೈಸೂರು: ಬೆಂಗಳೂರು ಬಳಿಕ ವೇಗವಾಗಿ ಬೆಳೆಯುತ್ತಿರುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂದಿನ ೩೦-೫೦ ವರ್ಷಗಳ ಹೊತ್ತಿಗೆ ಯುಜಿಡಿ ಸಮಸ್ಯೆ ತಲೆದೋರುವುದನ್ನು ತಡೆದು ಶಾಶ್ವತ ಪರಿಹಾರ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಿದೆ.

ಬೃಹತ್ ಮೈಸೂರು ಮಹಾನಗರಪಾಲಿಕೆಯಾಗಿ ರಚನೆಯಾದ ನಂತರ ತನ್ನ ಭೌಗೋಳಿಕ ಪ್ರದೇಶವನ್ನು ವಿಸ್ತರಿಸಿಕೊಳ್ಳುವ ಕಾರಣ ಬಜೆಟ್‌ನಲ್ಲಿ ಯುಜಿಡಿ ಯೋಜನೆಗೆ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾಪನೆ ಸಲ್ಲಿಸಲಾಗಿದೆ.

ಮೈಸೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶ, ಬಡಾವಣೆಗಳು ಸೇರಿದಂತೆ ಯುಜಿಡಿ ಶಾಶ್ವತ ಪರಿಹಾರಕ್ಕೆ ಅಂದಾಜು ೬೦೦ ಕೋಟಿ ರೂ. ಮೊತ್ತದ ಪ್ರಸ್ತಾವನೆಗೆ ಸಿಎಂ ಸಕಾ ರಾತ್ಮಕವಾಗಿ ಸ್ಪಂದಿಸಿದ್ದು, ಮಾ.೬ರಂದು ಮಂಡಿಸಲಿರುವ ಆಯ ವ್ಯಯದಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ಮೈಸೂರಿಗೆ ವರ್ಷಪೂರ್ತಿ ಪ್ರವಾಸಿಗರು ಆಗಮಿಸುತ್ತಾರೆ. ಅದೇ ರೀತಿ ವರ್ಷದಿಂದ ವರ್ಷಕ್ಕೆ ಮೈಸೂರು ತನ್ನ ಪ್ರದೇಶವನ್ನು ನಾಲ್ಕು ದಿಕ್ಕುಗಳಲ್ಲೂ ವಿಸ್ತರಿಸಿಕೊಳ್ಳುತ್ತಿದೆ. ಮೈಸೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ೨ ಸಾವಿರ ಕೋಟಿ ರೂ. ವೆಚ್ಚದಲ್ಲಿ ಪೈಪ್‌ಲೈನ್ ಕಾಮಗಾರಿ ಕೈಗೆತ್ತಿಕೊಂಡರೆ, ಎಡಿಬಿ ಸಾಲದಿಂದ ಮಳೆನೀರು ಚರಂಡಿಗಳನ್ನು ನಿರ್ಮಾಣ ಮಾಡಲಾಗಿತ್ತು. ಒಂದು ದಶಕದ ಹಿಂದೆ ಮೈಸೂರು ನಗರದ ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಕ್ಷೇತ್ರಗಳಲ್ಲಿ ಹಾದು ಹೋಗುವ ಯುಜಿಡಿ ಲೈನ್ ಕೆಸರೆ ಮತ್ತು ವಿದ್ಯಾರಣ್ಯಪುರಂ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಹೋಗುವಂತೆ ಮಾಡಿದ್ದರೂ ಅಲ್ಲಲ್ಲಿ ಲಿಂಕ್ ಕೈತಪ್ಪಿ ಮಳೆ ನೀರು ಚರಂಡಿಗೆ ಸೇರುತ್ತಿದೆ. ಅದರಲ್ಲೂ ಕೆಆರ್‌ಎಸ್ ರಸ್ತೆಯ ರಾಯಲ್ ಇನ್ ಜಂಕ್ಷನ್ ಬಳಿ, ಕೆಸರೆ ಸಮೀಪವಿರುವ ಲೈನ್ ಮಿಸ್ಸಿಂಗ್ ಆಗಿರುವ ಕಾರಣ ಶ್ರೀರಂಗಪಟ್ಟಣದ ಮೇಳಾಪುರದಲ್ಲಿ ಹಾದು ಹೋಗುವ ಕಾವೇರಿ ನದಿ ಸೇರುತ್ತಿದೆ. ಅಲ್ಲದೆ, ಮಳೆ ಬಂದಾಗ ಯುಜಿಡಿ ಸಮಸ್ಯೆ ಅಗಾಧವಾಗಿ ಕಾಡುವುದರಿಂದ ಇದರ ಶಾಶ್ವತ ಪರಿಹಾರಕ್ಕೆ ಸರ್ಕಾರದ ಮೊರೆ ಹೋಗಿದೆ.

೬೦೦ ಕೋಟಿ ರೂ. ಯೋಜನೆ: ಮೈಸೂರು ನಗರ ಮತ್ತು ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಗೆ ಸೇರುವ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಯುಜಿಡಿ ಹೊಸ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಅಂದಾಜು ೬೦೦ ಕೋಟಿ ರೂ. ಕ್ರಿಯಾಯೋ ಜನೆ ರೂಪಿಸಿ, ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ.

ಕಳೆದ ವಾರವಷ್ಟೇ ಮೈಸೂರು ನಗರ ಮತ್ತು ಜಿಲ್ಲೆಗೆ ಸಂಬಂಧಿಸಿದ ಯೋಜನೆಗಳ ಕುರಿತು ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತವರಿಗೆ ಬಂಪರ್ ಕೊಡುಗೆ ನೀಡುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ. ಚಾಮರಾಜ, ನರಸಿಂಹರಾಜ ಕ್ಷೇತ್ರಗಳಲ್ಲಿ ಮಳೆ ಬಂದಾಗ ಯುಜಿಡಿ ಸಮಸ್ಯೆ ಉಂಟಾಗದಂತೆ ಪ್ರತಿಯೊಂದು ಬೀದಿಗಳಲ್ಲೂ ಯುಜಿಡಿ ಮಾರ್ಗ ಅಳವಡಿಸಿ, ಹೊಸದಾಗಿ ಮ್ಯಾನ್‌ಹೋಲ್‌ಗಳನ್ನು ಹಾಕಲಾಗುತ್ತದೆ.

ಜೋರು ಮಳೆ ಬಂದರೂ ರಸ್ತೆ ಬದಿಯಲ್ಲಿ ಮಲೀನ ನೀರು ಉಕ್ಕಿ ಹರಿಯದಂತೆ ಮಾಡಲು ಯೋಜನೆ ಮಾಡ ಲಾಗಿದೆ. ಅದೇ ರೀತಿ ಕೆಸರೆ ಮತ್ತು ವಿದ್ಯಾರಣ್ಯಪುರಂ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಸಾಮರ್ಥ್ಯವನ್ನು ಹೆಚ್ಚಿಸಲು, ಮರು ಬಳಕೆ ಮಾಡಿ ಕೃಷಿ ಮೊದಲಾದ ಚಟುವಟಿಕೆಗಳಿಗೆ ಬಳಸುವಂತಹ ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲು ಈ ಯೋಜನೆಯಲ್ಲಿ ಸೇರಿಸಲಾಗಿದೆ. ಈ ಯೋಜನೆ ಕುರಿತು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಅವರು ಸಿಎಂಗೆ ವಿವರಣೆ ನೀಡಿದ್ದು, ಮಾಡೋಣ ಎನ್ನುವ ಮಾತನ್ನಾಡಿರುವುದು ಅಧಿಕಾರಿಗಳಲ್ಲಿ ವಿಶ್ವಾಸ ಮೂಡಿಸಿದೆ.

” ಮೈಸೂರು ನಗರಕ್ಕೆ ಪ್ರಮುಖವಾಗಿ ಯುಜಿಡಿ ಸಮಸ್ಯೆ ಪರಿಹಾರದ ಬಗ್ಗೆ ಕೇಳಿಕೊಂಡಿದ್ದೇವೆ. ಕಳೆದ ಬಾರಿ ಘೋಷಣೆ ಮಾಡಿರುವುದನ್ನು ಅನುಷ್ಠಾನಕ್ಕೆ ತರಬೇಕು. ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲವು ಯೋಜನೆಗಳಿಗೆ ಒಪ್ಪಿಗೆ ಸಿಕ್ಕಿದೆ. ನಗರ ಪ್ರದೇಶದಲ್ಲಿ ಯುಜಿಡಿ ಕಾಮಗಾರಿಗಳು ಮುಖ್ಯವಾಗಿದ್ದು, ಗ್ರಾಮಾಂತರ ಪ್ರದೇಶಕ್ಕೆ ಸಂಬಂಧಿಸಿದಂತೆ ಆಯಾಯ ಇಲಾಖೆಗಳು ರೂಪಿಸಿರುವ ಪ್ರಸ್ತಾವನೆಗಳನ್ನು ಸಿಎಂ ಅವರ ಗಮನಕ್ಕೆ ತರಲಾಗಿದೆ.”

-ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾಧಿಕಾರಿ

ಮತ್ತೊಂದು ಹೊರ ರೋಗಿ ವಿಭಾಗದ ಕಟ್ಟಡಕ್ಕೆ ಪ್ರಸ್ತಾವನೆ: 

ನಗರದ ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡ ಪುನರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಘೋಷಣೆ ಮಾಡಿರುವ ಅನುದಾನವನ್ನು ಹೆಚ್ಚಿಸುವುದು, ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡವನ್ನು ಮ್ಯೂಸಿಯಂ ಮಾಡಲು ಅನುದಾನ ಮೀಸಲಿಡಲಾಗುತ್ತದೆ. ಕೆ.ಆರ್. ಆಸ್ಪತ್ರೆಯಲ್ಲಿ ಮತ್ತೊಂದು ಹೊರ ರೋಗಿ ವಿಭಾಗದ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಕಾಂತರಾಜ್ ಬಿಲ್ಡಿಂಗ್ ಸಮೀಪವಿರುವ ಜಾಗದಲ್ಲೇ ನಿರ್ಮಾಣಕ್ಕೆ ಅನುದಾನದ ಪ್ರಸ್ತಾವನೆ ಇಡಲಾಗಿದೆ ಎಂದು ತಿಳಿದುಬಂದಿದೆ.

 

 

Tags:
error: Content is protected !!