Mysore
24
clear sky

Social Media

ಶನಿವಾರ, 24 ಜನವರಿ 2026
Light
Dark

ಕಪಿಲೆಯ ಪ್ರವಾಹದ ಅನಾಹುತ ಎದುರಿಸಲು ಸನ್ನದ್ಧ

ಶ್ರೀಧರ್ ಆರ್.ಭಟ್ಟ

ನಂಜನಗೂಡು: ದಿನದ ೨೪ ಗಂಟೆಗಳೂ ಜಾಗೃತವಾಗಿರಲು ಅಧಿಕಾರಿಗಳಿಗೆ ತಹಸಿಲ್ದಾರ್ ತಾಕೀತು

ನಂಜನಗೂಡು: ಪಕ್ಕದ ರಾಜ್ಯ ಕೇರಳದ ವಯನಾಡಿನಲ್ಲಿ ಸುರಿಯುತ್ತಿರುವ ಮುಂಗಾರು ಮಳೆಯಿಂದಾಗಿ ಕಬಿನಿ ಜಲಾಶಯ ಭರ್ತಿಯಾಗುತ್ತಿದ್ದು, ಯಾವುದೇ ಸಮಯದಲ್ಲಿ ಹೆಚ್ಚುವರಿ ನೀರು ಪ್ರವಾಹೋಪಾದಿಯಲ್ಲಿ ಕಪಿಲಾ ನದಿಯಲ್ಲಿ ಹರಿದು ಬರುವುದರಿಂದ ಅದನ್ನು ಎದುರಿಸಲು ತಾಲ್ಲೂಕು ಆಡಳಿತ ಸರ್ವಸನ್ನದ್ಧವಾಗಿದೆ.

ನಂಜನಗೂಡು ಹಾಗೂ ವರುಣ ವಿಧಾನಸಭಾ ಕ್ಷೇತ್ರ ಗಳ ವ್ಯಾಪ್ತಿಯಲ್ಲಿನ ೪೫ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಮಳೆ ಹಾನಿಯಿಂದಾಗುವ ಅನಾಹುತ ಎದುರಿಸಲು ಈಗಾಗಲೇ ೩ ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಮತ್ತು ಕಂದಾಯ ಅಧಿಕಾರಿಗಳ ಸಭೆ ನಡೆಸಿ ಮಳೆ ಹಾನಿ ಹಾಗೂ ಪ್ರವಾಹ ಎದುರಿಸಲು ಸರ್ವಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಹಸಿಲ್ದಾರ್ ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ಅಧಿಕಾರಿಗಳು ದಿನದ ೨೪ ಗಂಟೆಗಳ ಕಾಲವೂ ಜಾಗೃತರಾಗಿದ್ದು, ತಾಲ್ಲೂಕಿನಾದ್ಯಂತ ಯಾವುದೇ ರೀತಿಯಲ್ಲಿ ಪ್ರಕೃತಿ ವಿಕೋಪದ ಅನಾಹುತಗಳಾದರೆ ತಕ್ಷಣ ಸ್ಪಂದಿಸಬೇಕು ಎಂದು ಎಲ್ಲರಿಗೂ ಸೂಚಿಸಲಾಗಿದೆ. ತಾಲ್ಲೂಕು ಕಚೇರಿಯಲ್ಲಿ ಈಗಾಗಲೇ ದಿನವಿಡೀ ಕಾರ್ಯನಿರ್ವಹಿಸುವ ಸಹಾಯವಾಣಿ ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಈ ದೂರವಾಣಿ ಸಂಖ್ಯೆಗೆ ಕರೆ ಮಾಡಲು ಕೋರಲಾಗಿದೆ.

” ಆರೋಗ್ಯ ಇಲಾಖೆಯ ಸಿಬ್ಬಂದಿ ಈಗಾಗಲೇ ಮನೆ ಮನೆಗೆ ತೆರಳಿ ಮನೆಗಳ ಸುತ್ತ ನೀರು ಶೇಖರಣೆಯಾಗದಂತೆ ಜಾಗೃತಿ ಮೂಡಿಸಿ, ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಗ್ರಾಮಗಳಿಗೆ ತೆರಳಿರುವ ಆರೋಗ್ಯ ಸಿಬ್ಬಂದಿ ಅಲ್ಲೆಲ್ಲ ಲಾರ್ವಾ ಪರೀಕ್ಷೆ ನಡೆಸಿದ್ದು, ಸಾರ್ವಜನಿಕರು ಕುದಿಸಿ ಅರಿಸಿದ ನೀರನ್ನೇ ಬಳಕೆ ಮಾಡಬೇಕು ಎಂದು ತಿಳಿಸಲಾಗಿದೆ.”

-ಈಶ್ವರ್, ತಾಲ್ಲೂಕು ಆರೋಗ್ಯಾಧಿಕಾರಿ

” ಮಳೆಗಾಲದಲ್ಲಿ ಸಿಡಿಲು ಬಡಿತ ಸಾಮಾನ್ಯವಾಗಿದ್ದು, ಆ ಸಮಯದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಪ್ರವಹಿಸುವ ಕಂಬಗಳು, ಮಳೆ-ಗಾಳಿಗೆ ಸಿಲುಕಿ ತುಂಡಾಗಿ ಬಿದ್ದ ವಿದ್ಯುತ್ ತಂತಿಗಳಿಂದ ದೂರ ಇರಬೇಕು ಎಂದು ಸಾರ್ವಜನಿಕರಲ್ಲಿ ಈಗಾಗಲೇ ಮನವಿ ಮಾಡಲಾಗಿದೆ. ವಿದ್ಯುತ್ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕೆ ನಮ್ಮ ಸಿಬ್ಬಂದಿ ಸಜ್ಜಾಗಿದ್ದಾರೆ.”

-ದೇವರಾಜ್, ಸೆಸ್ಕ್ ಅಧಿಕಾರಿ, ನಂಜನಗೂಡು

” ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಈಗಾಗಲೇ ೪೫ ಗ್ರಾಪಂಗಳ ೩೩೪ ಕೊಳವೆಬಾವಿಗಳ ನೀರನ್ನು ಶೇಖರಿಸಿ ಪ್ರಯೋಗಾಲಯಕ್ಕೆ ಕಳಿಸಿ, ನೀರಿನ ಗುಣಮಟ್ಟದ ಕುರಿತು ದೃಢೀಕರಿಸಲಾಗಿದೆ. ಅನಗತ್ಯವಾಗಿ ನೀರು ನಿಲ್ಲುವ ಸ್ಥಳಗಳಲ್ಲಿ ಕಸ-ಕಡ್ಡಿಗಳು ಶೇಖರಣೆಯಾಗದಂತೆ ನೋಡಿಕೊಳ್ಳಲು ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.”

-ಜೆರಾಲ್ಡ್ ರಾಜೇಶ್, ಕಾರ್ಯನಿರ್ವಹಣಾಧಿಕಾರಿ, ತಾಪಂ

” ಕಬಿನಿ ಜಲಾಶಯದಿಂದ ಹೊರಬಿಡುವ ನೀರಿನ ಪ್ರಮಾಣವನ್ನು ಅವಲಂಬಿಸಿರುವುದರಿಂದ ಜಲಾಶಯದಿಂದ ಬಿಡಬಹುದಾದ ನೀರಿನ ಪ್ರಮಾಣವನ್ನು ಆಧರಿಸಿ ನದಿ ಪಾತ್ರದ ತಗ್ಗು ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ತಾಲ್ಲೂಕು ಆಡಳಿತ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ನದಿಪಾತ್ರದಲ್ಲಿ ಈಗಾಗಲೇ ತುರ್ತು ಸಂದರ್ಭಗಳನ್ನು ಎದುರಿಸಲು ದೋಣಿಗಳನ್ನು ಕೂಡ ಸಜ್ಜುಗೊಳಿಸಲಾಗಿದೆ. ನೀರಾವರಿ ಇಲಾಖೆಯೊಂದಿಗೆ ಕಂದಾಯ ಇಲಾಖೆ ಸದಾ ಸಂಪರ್ಕದಲ್ಲಿದ್ದು, ಜಲಾಶಯದಿಂದ ಹೊರಬಿಡುವ ನೀರಿನ ಮೇಲೆ ನಿಗಾ ವಹಿಸಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.”

-ಶಿವಕುಮಾರ್ ಕ್ಯಾಸನೂರು, ತಹಸಿಲ್ದಾರ್

Tags:
error: Content is protected !!