Mysore
15
broken clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

18 ತಿಂಗಳಲ್ಲಿ ಖಾತಾ ಮುಕ್ತ ನಗರಕ್ಕೆ ಪ್ಲಾನ್‌

ಕೆ.ಬಿ.ರಮೇಶನಾಯಕ

೨೭,೬೧೬ ಬಿ-ಖಾತೆಗೆ ಅನಧಿಕೃತ ಆಸ್ತಿಗಳ ಗುರುತು

೧,೮೨,೧೬೭ ಎ-ಖಾತಾ ಆಸ್ತಿ

ಮುಂದಿನ ೧೮ ತಿಂಗಳಲ್ಲಿ ಆಸ್ತಿ ಮಾಲೀಕರಿಗೆ ಖಾತೆ ಒದಗಿಸುವ ಗುರಿ

ಮನೆ ಮನೆಗೆ ಖಾತೆ ತಲುಪಿಸಲು ನಿರ್ಧಾರ 

ಮೈಸೂರು: ಮಧ್ಯವರ್ತಿಗಳ ಹಾವಳಿ ತಡೆಯುವ ಜತೆಗೆ, ನೋಂದಣಿ ವೇಳೆ ನಡೆಯುವ ಅಕ್ರಮವನ್ನು ತಡೆಗಟ್ಟಲು ರಾಜ್ಯ ಸರ್ಕಾರ ಆರಂಭಿಸಿದ ಎ-ಖಾತಾ, ಅನಧಿಕೃತ ಆಸ್ತಿಗಳ ಬಿ-ಖಾತಾ ಪ್ರಕ್ರಿಯೆಯು ಮೈಸೂರಿನಲ್ಲಿ ವೇಗವಾಗಿ ಸಾಗಿದ್ದು, ಅಂದಾಜು ೨ ಲಕ್ಷ ಆಸ್ತಿಗಳಿಗೆ ಹದಿನೆಂಟು ತಿಂಗಳಲ್ಲಿ ಖಾತೆ ಮಾಡಿ ಕೊಟ್ಟು ಮೈಸೂರನ್ನು ಖಾತಾ ಮುಕ್ತ ನಗರವನ್ನಾಗಿ ಮಾಡಲು ಯೋಜನೆ ರೂಪಿಸಲಾಗಿದೆ.

ಮೈಸೂರಿನ ಚಾಮರಾಜ, ಕೃಷ್ಣರಾಜ, ನರಸಿಂಹರಾಜ ಹಾಗೂ ಚಾಮುಂಡೇಶ್ವರಿ ಕ್ಷೇತ್ರಗಳ ಕೆಲವು ವಾರ್ಡ್‌ಗಳಲ್ಲಿ ಮಾರ್ಚ್ ತಿಂಗಳಲ್ಲಿ ಶುರುವಾದ ಖಾತಾ ಅಭಿಯಾನವು ಬಹಳ ವೇಗವಾಗಿ ನಡೆಯುತ್ತಿದೆ. ಮುಂದಿನ ೧೮ ತಿಂಗಳಲ್ಲಿ ಆಸ್ತಿ ಮಾಲೀಕರು ಖಾತೆ ಹೊಂದುವಂತೆ ಮಾಡಲು ನಗರಪಾಲಿಕೆ ಕಾರ್ಯೋನ್ಮುಖವಾಗಿದೆ. ರಾಜ್ಯದಲ್ಲಿ ತೆರಿಗೆ ಸಂಗ್ರಹ ಮಾಡುವ ಜತೆಗೆ ಹಲವಾರು ವರ್ಷಗಳಿಂದ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರ ಎ-ಖಾತಾ ಮತ್ತು ಬಿ-ಖಾತಾ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು.

ಮೈಸೂರು ನಗರಪಾಲಿಕೆಯಲ್ಲಿ ಮಾ.೧ರಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಸಾಂಕೇತಿಕವಾಗಿ ಖಾತೆ ದಾಖಲೆಯನ್ನು ವಿತರಿಸಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದ್ದರು. ನಂತರ, ಮೈಸೂರಿನ ಒಂಬತ್ತು ವಲಯ ಕಚೇರಿಗಳಲ್ಲಿಯೂ ಏಕಕಾಲದಲ್ಲಿ ಶುರುವಾದ ಅಭಿಯಾನಕ್ಕೆ ಮಾಲೀಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಗಣನೀಯ ಸಾಧನೆ ಮಾಡಿರುವುದು ಕಂಡುಬಂದಿದೆ.

ಒಂದೇ ತಿಂಗಳಲ್ಲಿ ೩೭,೭೦೭ ಎ-ಆಸ್ತಿ ಖಾತಾ: ನಗರದಲ್ಲಿ ೧,೮೨,೧೬೭ ಆಸ್ತಿಗಳಿದ್ದು, ಮಾರ್ಚ್ ತಿಂಗಳಲ್ಲಿ ೩೭,೭೦೭, ಏಪ್ರಿಲ್ ತಿಂಗಳಲ್ಲಿ ೮೭೭ ಸೇರಿ ೩೮,೫೮೪ ಎ-ಖಾತೆಗಳಾಗಿದ್ದು, ೧,೪೩,೫೮೩ ಬಾಕಿ ಇವೆ. ಅದೇ ರೀತಿ ೨೭,೬೧೬ ಅನಧಿಕೃತ ಆಸ್ತಿಗಳೆಂದು ಗುರುತಿಸಲಾಗಿದ್ದು, ಮಾರ್ಚ್ ತಿಂಗಳಲ್ಲಿ ೧,೧೭೮, ಏಪ್ರಿಲ್ ತಿಂಗಳಲ್ಲಿ ೧೯೭ ಸೇರಿ ೧೩೭೫ ಬಿ-ಖಾತಾ ಮಾಡಲಾಗಿದ್ದು, ೨೬,೨೪೧ ಬಾಕಿ ಇವೆ. ಕಳೆದ ೨೦೨೦ರಿಂದ ೨೦೨೫ರವರೆಗೆ ೧೦ ಸಾವಿರ ಮಾತ್ರ ಇ-ಖಾತೆಗಳನ್ನು ನೀಡಲಾಗಿತ್ತು. ಆದರೆ, ಅಭಿಯಾನ ಶುರುವಾದ ಒಂದೇ ತಿಂಗಳಲ್ಲಿ ೩೭ ಸಾವಿರ ಎ-ಖಾತೆ ಮಾಡಿಕೊಟ್ಟಿರುವುದರಿಂದ ೧೮ ತಿಂಗಳ ಗುರಿ ಇಟ್ಟುಕೊಳ್ಳಲಾಗಿದೆ.

ಸಿಸಿಟಿವಿ ಕ್ಯಾಮೆರಾ: ನಗರದ ೯ ವಲಯ ಕಚೇರಿಗಳಲ್ಲಿಯೂ ಎ ಮತ್ತು ಬಿ-ಖಾತಾ ಅಭಿಯಾನದಲ್ಲಿ ಮಧ್ಯವರ್ತಿಗಳ ಹಾವಳಿ ಕಂಡು ಬಂದಿದೆ ಎಂಬ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ನಗರಪಾಲಿಕೆ ಆಯುಕ್ತರು, ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಹದ್ದಿನ ಕಣ್ಣಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಅನುಮಾನಾಸ್ಪದ ಸಹಾಯಕ ಕಂದಾಯ ಅಧಿಕಾರಿಗಳು, ಕಂದಾಯ ಪರಿವೀಕ್ಷಕರನ್ನು ಬದಲಾವಣೆ ಮಾಡಿ ಬೇರೆಯವರನ್ನು ನಿಯೋಜಿಸಲಾಗಿದೆ. ಆಯುಕ್ತ ಶೇಖ್ ತನ್ವೀರ್ ಆಸಿ- ಅವರೇ ವಲಯ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸುವ ಜತೆಗೆ, ಆಯಾಯ ದಿನದಂದು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಆಗುವ ಮತ್ತು ಎ ಮತ್ತು ಬಿ-ಖಾತೆಯನ್ನು ವಿತರಿಸುವುದರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಪ್ರಿಂಟರ್, ಕಂಪ್ಯೂಟರ್, ಜೆರಾಕ್ಸ್ ಯಂತ್ರದ ಕೊರತೆ ಇದ್ದಿದ್ದರಿಂದ ಸಿಬ್ಬಂದಿಗೆ ತಕ್ಕಂತೆ ಉಪಕರಣಗಳನ್ನು ಒದಗಿಸಲಾಗಿದೆ ಎಂದು ಹೇಳಲಾಗಿದೆ.

ಮನೆ ಮನೆಗೆ ಖಾತೆ: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮಾಲೀಕರ ದಾಖಲೆಗಳನ್ನು ಪರಿಶೀಲಿಸಿ ಮನೆ ಮನೆಗೆ ಖಾತೆ ತಲುಪಿಸುವ ಆಯುಕ್ತರ ನಿರ್ಧಾರಕ್ಕೆ ಕಂದಾಯ ವಿಭಾಗದ ಅಧಿಕಾರಿಗಳು ಕೈ ಜೋಡಿಸಿದ್ದಾರೆ. ಅಭಿಯಾನದ ಜವಾಬ್ದಾರಿ ಹೊತ್ತಿರುವ ಉಪ ಆಯುಕ್ತ ಜಿ.ಎಸ್.ಸೋಮಶೇಖರ್ ಅವರು ಒಂಬತ್ತು ವಲಯ ಕಚೇರಿಗಳಲ್ಲಿ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳು, ಸಿಬ್ಬಂದಿ ಎ-ಖಾತೆ, ಬಿ-ಖಾತೆ ಎಷ್ಟೆಷ್ಟು ಮಾಡುತ್ತಾರೆ. ಪೆಂಡಿಂಗ್ ಉಳಿಯಲು ಕಾರಣವೇನು ಎನ್ನುವುದನ್ನು ಗಮನಿಸುತ್ತಿದ್ದಾರೆ. ದಾಖಲೆಗಳು ಸರಿ ಇದ್ದರೂ ವಿಳಂಬ ಮಾಡುವ ಕಡತಗಳನ್ನು ಮತ್ತೊಮ್ಮೆ ಪರಿಶೀಲಿಸಿ ಖಾತೆ ವಿತರಣೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ.

” ಕಳೆದ ಮಾರ್ಚ್ ತಿಂಗಳಲ್ಲಿ ಎ ಮತ್ತು ಬಿ-ಖಾತೆ ವಿತರಣೆ ಮಾಡಿರುವುದನ್ನು ಗಮನದಲ್ಲಿಟ್ಟುಕೊಂಡು ೧೮ ತಿಂಗಳುಗಳಲ್ಲಿ ಮೈಸೂರನ್ನು ಖಾತಾ ಮುಕ್ತ ನಗರವನ್ನಾಗಿ ಮಾಡಲಾಗುವುದು. ಜನಪ್ರತಿನಿಧಿಗಳು, ಸಂಘಸಂಸ್ಥೆಗಳು, ನಿವಾಸಿಗಳ ಸಂಘಗಳು ಸೇರಿದಂತೆ ಪ್ರತಿಯೊಬ್ಬರ ಸಹಕಾರ ಪಡೆದುಕೊಂಡು ನಿಗದಿತ ಸಮಯದೊಳಗೆ ಗುರಿ ತಲುಪಲಾಗುವುದು.”

-ಜಿ.ಎಸ್.ಸೋಮಶೇಖರ್, ಉಪ ಆಯುಕ್ತರು (ಕಂದಾಯ)

Tags:
error: Content is protected !!