Mysore
28
broken clouds

Social Media

ಗುರುವಾರ, 09 ಏಪ್ರಿಲ 2026
Light
Dark

ಚರಂಡಿ ಸ್ವಚ್ಛಗೊಳಿಸಿಲ್ಲ ಎಂದು ಗ್ರಾಪಂ ಕಚೇರಿಗೆ ಮುಳ್ಳು ಹಾಕಿದ ಭೂಪ!

ಹನೂರು ತಾಲ್ಲೂಕಿನ ಅಜ್ಜೀಪುರ ಗ್ರಾಮದಲ್ಲಿ ಘಟನೆ; ಆರೋಪಿಯಿಂದ ತಪ್ಪೊಪ್ಪಿಗೆ

ಹನೂರು: ಬಡಾವಣೆಯ ಚರಂಡಿಯಲ್ಲಿನ ಹೂಳು ಮತ್ತು ಕಸ-ಕಡ್ಡಿಗಳನ್ನು ತೆರವುಗೊಳಿಸಿಲ್ಲ. ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿಲ್ಲ ಎಂದು ಆರೋಪಿಸಿ ವ್ಯಕ್ತಿಯೋರ್ವ ಗ್ರಾಮ ಪಂಚಾಯಿತಿ ಕಚೇರಿಗೆ ಮುಳ್ಳು ಹಾಕಿರುವ ಘಟನೆ ಹನೂರು ತಾಲ್ಲೂಕಿನ ಅಜ್ಜೀಪುರ ಗ್ರಾಮದಲ್ಲಿ ಜರುಗಿದೆ.

ಅಜ್ಜೀಪುರ ಗ್ರಾಮದ ನಿವಾಸಿ ಮನ್ನಾದೇಗೌಡ ಎಂಬವರು ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಮುಳ್ಳು ಹಾಕಿರುವವರು.

ಅಜ್ಜೀಪುರ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದ ವನ್ನಿಕುಲ ಕ್ಷತ್ರಿಯ ಬಡಾವಣೆಯಲ್ಲಿನ ಚರಂಡಿಗಳೆಲ್ಲ ಕಸ ಕಡ್ಡಿಗಳಿಂದ ತುಂಬಿಕೊಂಡು ಗಬ್ಬುನಾರುತ್ತಿವೆ. ಇದರಿಂದ ನೀರು ಸರಾಗವಾಗಿ ಮುಂದೆ ಹೋಗದೆ ಇರುವುದರಿಂದ ಕೊಳಚೆ ನೀರಿನಲ್ಲಿ ಸೊಳ್ಳೆಗಳು ಹಾಗೂ ಇನ್ನಿತರ ಕ್ರಿಮಿಕೀಟಗಳು ಉತ್ಪತ್ತಿಯಾಗುತ್ತಿರುವುದರಿಂದ ಈ ಭಾಗದ ಜನ ಸಾಂಕ್ರಾಮಿಕ ಭೀತಿಯಲ್ಲಿದ್ದಾರೆ. ಚರಂಡಿ ಸ್ವಚ್ಛಗೊಳಿಸುವಂತೆ ಹಾಗೂ ಗ್ರಾಮದ ಮುಖ್ಯರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ವಿದ್ಯಾರ್ಥಿಗಳು ಹಾಗೂ ವಯೋವೃದ್ಧರಿಗೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತು ಮುಳ್ಳು ಹಾಕಿದ್ದೇನೆ ಎಂದು ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ ಕಚೇರಿಗೆ ಮುಳ್ಳು ಹಾಕಿರುವ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ೧೧೨ ಪೊಲೀಸರು ಮುಳ್ಳು ಹಾಕಿದ್ದ ವ್ಯಕ್ತಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಪೊಲೀಸರು ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಲಿಖಿತವಾಗಿ ಗ್ರಾಮ ಪಂಚಾಯಿತಿಗೆ ದೂರು ನೀಡಬೇಕು. ಅದನ್ನು ಬಿಟ್ಟು ಇಂತಹ ಕೆಲಸವನ್ನು ಮಾಡಬಾರದು. ಮತ್ತೊಮ್ಮೆ ಇದು ಮುಂದುವರಿದರೆ ನಿಮ್ಮ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಗ್ರಾಮ ಪಂಚಾಯಿತಿಯವರು ಯಾವುದೇ ದೂರು ನೀಡದೇ ಇರುವುದರಿಂದ ತಪ್ಪೊಪ್ಪಿಗೆ ಬರೆದುಕೊಟ್ಟ ನಂತರ ಪೊಲೀಸರು ವಾಪಸ್ ತೆರಳಿದ್ದಾರೆ.

” ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಡುವ ರಸ್ತೆ ಗುಂಡಿ ಮುಚ್ಚಲುನಮಗೆ ಅವಕಾಶವಿಲ್ಲ, ಚರಂಡಿಗಳನ್ನು ಸ್ವಚ್ಛ ಮಾಡಲು ಈಗಾಗಲೇ ಕ್ರಮ ವಹಿಸಲಾಗಿದೆ. ಪಂಚಾಯಿತಿಗೆ ಮುಳ್ಳು ಹಾಕಿರುವ ಮನ್ನಾದೇಗೌಡರವರು ಪಂಚಾಯಿತಿಗೆ ಲಿಖಿತವಾಗಿ ಯಾವುದೇ ಮನವಿ ನೀಡಿಲ್ಲ.”

ನಂದೀಶ್, ಪಿಡಿಒ, ಅಜ್ಜೀಪುರ

Tags:
error: Content is protected !!