Mysore
26
scattered clouds

Social Media

ಬುಧವಾರ, 14 ಜನವರಿ 2026
Light
Dark

ಕಬಿನಿ ಹಿನ್ನೀರಿನ ರೆಸಾರ್ಟ್‌ಗಳಿಗೆ ಜನರ ಲಗ್ಗೆ

ಮಂಜು ಕೋಟೆ

ಕೋಟೆ: ಹೊಸ ವರ್ಷಾಚರಣೆಗೆ ಮುಗಿಬಿದ್ದ ಪ್ರವಾಸಿಗರು; ಮತ್ತೊಂದೆಡೆ ಮೂಲಸೌಕರ್ಯಗಳ ಕೊರತೆ

ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಹಿನ್ನೀರು ರೆಸಾರ್ಟ್‌ಗಳಲ್ಲಿ ಹೊಸ ವರ್ಷ ಆಚರಣೆ ಮಾಡಲು ಜನರು ಮುಗಿಬಿದ್ದಿದ್ದಾರೆ.

ಜಿಲ್ಲೆಯಲ್ಲಿ ತಾಲ್ಲೂಕು ಹಿಂದುಳಿದ ಮತ್ತು ಗಡಿ ಪ್ರದೇಶವೆಂದು ಬಿಂಬಿತವಾಗಿದ್ದರೂ ಇಲ್ಲಿ ಅರಣ್ಯ, ವನ್ಯಪ್ರಾಣಿ ಸಂಪತ್ತು ಹೇರಳವಾಗಿದ್ದು, ಜಲಾಶಯಗಳಿಂದ ಸಮೃದ್ಧಿಯಾಗಿದೆ. ಆದರೆ, ಮೂಲಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಕಾರ್ಖಾನೆ, ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಬಹಳಷ್ಟು ಹಿಂದುಳಿದಿದೆ.

ಮತ್ತೊಂದೆಡೆ ಕಬಿನಿ ಹಿನ್ನೀರಿನಲ್ಲಿ ಪೈಪೋಟಿಯಲ್ಲಿ ರೆಸಾರ್ಟ್‌ಗಳು ಮತ್ತು ಹೋಂ ಸ್ಟೇ ಗಳು ಅಽಕೃತ ಮತ್ತು ಅನಧಿಕೃತವಾಗಿ ತಲೆ ಎತ್ತಿವೆ. ಸರ್ಕಾರದ ವ್ಯಾಪ್ತಿಯ ಕಾರಾಪುರ ಕಬಿನಿ ಜಂಗಲ್ ರೆಸಾರ್ಟ್ ಹೊರತುಪಡಿಸಿದರೆ ಉಳಿದ ೧೮ಕ್ಕೂ ಹೆಚ್ಚು ರೆಸಾಟ್ ಗಳು ಮತ್ತು ೩೦ಕ್ಕೂ ಹೆಚ್ಚು ಹೋಂ ಸ್ಟೇಗಳಲ್ಲಿ ಹೊಸ ವರ್ಷಾಚರಣೆಗೆ ರಾಜ್ಯ ಮತ್ತು ಹೊರ ರಾಜ್ಯಗಳು, ವಿದೇಶಗಳಿಂದಲೂ ಶ್ರೀಮಂತರು, ರಾಜಕಾರಣಿಗಳು, ಉದ್ಯಮಿಗಳು, ಪ್ರಭಾವಿಗಳು ಮುಗಿಬಿದ್ದಿದ್ದಾರೆ. ಹೀಗಾಗಿ ಎಲ್ಲ ರೆಸಾರ್ಟ್‌ಗಳೂ ಭರ್ತಿಯಾಗಿವೆ.

ಬಹುತೇಕ ರೆಸಾರ್ಟ್‌ಗಳು ಮತ್ತು ಹೋಂ ಸ್ಟೇಗಳಿಗೆ ತೆರಳಲು ಸೂಕ್ತವಾದ ರಸ್ತೆ ಸಂಪರ್ಕವಿಲ್ಲದಿದ್ದರೂ ಐಷಾರಾಮಿ ಕಾರುಗಳ ಮೂಲಕ ಹೋಗುತ್ತಿರುವುದು ಕಂಡುಬಂದಿದೆ.

ಹೊಸ ವರ್ಷ ಆಚರಣೆ ಮತ್ತು ಇನ್ನಿತರ ಸಂದರ್ಭದಲ್ಲಿ ರೆಸಾರ್ಟ್‌ನವರು ಮತ್ತು ಹೋಂ ಸ್ಟೇ ಮಾಲೀಕರು ಕೋಟ್ಯಂತರ ರೂ. ಸಂಪಾದನೆ ಮಾಡಿದರೂ ರಸ್ತೆಗಳನ್ನು ಮತ್ತು ಸಮೀಪದ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸಲು, ಆರೋಗ್ಯ ಕ್ಷೇತ್ರಕ್ಕೆ ನೆರವು ನೀಡುವ ಮನೋಭಾವನೆ ಇಲ್ಲವಾಗಿದೆ.

ಹೊಸ ವರ್ಷ ಆಚರಣೆ ಪ್ರಯುಕ್ತ ವರ್ಷದಿಂದ ವರ್ಷಕ್ಕೆ ಸಾವಿರಾರು ಜನರು ಎರಡು ಮೂರು ತಿಂಗಳುಗಳ ಮುಂಚಿತವಾಗಿಯೇ ಮುಂಗಡವಾಗಿ ನೋಂದಾಯಿಸಿಕೊಂಡು, ೨-೩ ದಿನ ಮುಂಚಿತ ವಾಗಿಯೇ ರೆಸಾರ್ಟ್ ಮತ್ತು ಹೋಂಸ್ಟೇಗಳಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ.

ಇದಕ್ಕೆ ಪೂರಕವಾಗಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಜನರ ಮನರಂಜನೆಗೆ ಒಂದೊಂದುರೆಸಾರ್ಟ್‌ನವರೂ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ದ್ದಾರೆ.

ಜಿಲ್ಲೆಯಲ್ಲಿ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಳ್ಳುವ ಎಲ್ಲಾ ರೀತಿಯ ಲಕ್ಷಣಗಳನ್ನು ಹೊಂದಿರುವ ತಾಲ್ಲೂಕಿನಲ್ಲಿ ಸಮರ್ಪಕವಾಗಿ ಸೌಕರ್ಯಗಳನ್ನು ಒದಗಿಸಿ, ಅಭಿವೃದ್ಧಿ ಕೆಲಸಗಳನ್ನು ನಡೆಸಿದರೆ ಖಾಸಗಿಯವರ ಆರ್ಭಟಕ್ಕೆ ಕಡಿವಾಣ ಹಾಕಿ ಸರ್ಕಾರದ ಬೊಕ್ಕಸಕ್ಕೆ ಹಣ ಬರುವಂತೆ ಮಾಡಬಹುದು. ಈ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಲು ಪೂರಕ ವಾತಾವರಣವೂ ನಿರ್ಮಾಣವಾಗಲಿದೆ.

” ತಾಲ್ಲೂಕನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ರೂಪಿಸಲು ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಬೇಕಾಗಿದೆ. ಹಿಂದುಳಿದ ತಾಲ್ಲೂಕಿನ ಅಭಿವೃದ್ಧಿಯ ಜೊತೆಗೆ ಅರಣ್ಯ, ವನ್ಯಜೀವಿಗಳು, ಜಲಾಶಯಗಳನ್ನು ಹೊಂದಿರುವ ಈ ತಾಣವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಇಲ್ಲಿ ರೆಸಾರ್ಟ್‌ಗಳನ್ನು ಪ್ರಾರಂಭಿಸಿ ಸ್ಥಳೀಯರಿಗೆ ಹೆಚ್ಚು ಉದ್ಯೋಗ ಕಲ್ಪಿಸಲಾಗಿದೆ. ದೇಶೀ ಆಹಾರ ಮತ್ತು ಆಟಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.”

-ಸಂದೇಶ್, ಮಾಲೀಕರು, ಸಂದೇಶ್ ವಾಟರ್ ಎಡ್ಜ್, ಕಬಿನಿ.

Tags:
error: Content is protected !!