Mysore
34
scattered clouds

Social Media

ಸೋಮವಾರ, 06 ಏಪ್ರಿಲ 2026
Light
Dark

ಓದುಗರ ಪತ್ರ: ಇರುವುದರಲ್ಲೇ ತೃಪ್ತಿ ಕಾಣಬೇಕು

ಓದುಗರ ಪತ್ರ

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ! ಜನಪ್ರಿಯ ಕವಿ ಗೋಪಾಲಕೃಷ್ಣ ಅಡಿಗರ ಕವನದ ಈ ಸಾಲು ಇಂದಿನ ಕಾಲಮಾನದ ಜನಮಾನಸಕ್ಕೆ ಒಪ್ಪುತ್ತದೆ. ಮಾನವ ಸಂಘಜೀವಿ. ಸಮಾಜದೊಳಗೆ ಸಮುದಾಯದ ಕಟ್ಟುಪಾಡುಗಳನ್ನು ಪಾಲಿಸಿ ಸಂಸ್ಕಾರ, ಸಂಪ್ರದಾಯವನ್ನು ಪಾಲಿಸಿ ಆರಾದಿಸಿ ಜೀವನ ನಡೆಸಿದಾಗ ಮಾತ್ರ ಸಮುದಾಯದಲ್ಲಿ ಆತ ಉತ್ತಮ ನಾಗರಿಕನಾಗಿ ಹೊರಹೊಮ್ಮುತ್ತಾನೆ.

ಇತ್ತೀಚಿನ ದಿನಮಾನಗಳಲ್ಲಿ ನಮ್ಮ ಸಮಾಜದಲ್ಲಿ ಬೇರೆಯವರ ಏಳಿಗೆಯನ್ನು ಸಹಿಸದಿರುವುದು, ಸ್ನೇಹದಲ್ಲಿ ನೈಜತೆ ಇಲ್ಲದಿರುವುದು, ಅಪನಂಬಿಕೆ ಮುಂತಾದ ಕೆಟ್ಟಗುಣಗಳು ಸಮಾಜದ ಪಿಡುಗುಗಳಾಗಿ ಜನರ ದಿಕ್ಕು ಬದಲಿಸುತ್ತಿವೆಯೇನೋ ಎಂಬ ಆತಂಕ ಪ್ರಜ್ಞಾವಂತರಲ್ಲಿ ಮೂಡುವಂತಾಗಿದೆ. ಹಿಂದೆ ಇದ್ದಂತಹ ಸಂಸ್ಕಾರವಿಲ್ಲ, ಆಚಾರವಿಲ್ಲ, ಬಲವಾದ ಸ್ನೇಹವಿಲ್ಲ, ನಂಬಿಕೆಯಿಲ್ಲ, ಪ್ರಾಮಾಣಿಕತೆಯಂತೂ ಮಾಯವಾಗುತ್ತಿದೆಯೆನೋ ಎಂಬ ಭಾವನೆ ಮೂಡುತ್ತಿದೆ. ಹೀಗೆ ನಮ್ಮನಮ್ಮ ಈ ಗುಣಗಳು ನಮ್ಮ ದಿಕ್ಕನ್ನು ಬೇರೆಡೆಗೆ ಬದಲಾಯಿಸಿ ಮಾನಸಿಕವಾಗಿ ಬಲಹೀನರಾಗಿ ಮಾಡುತ್ತಿದೆ.

ಹಾಗಾಗಿ ಮಾನವನಿಗೆ ಯಾವುದರಲ್ಲೂ ತೃಪ್ತಿ ಕಾಣದಾಗಿದೆ. ಯಾರಲ್ಲೂ ನಂಬಿಕೆಯಿಡಬೇಕೆಂಬ ಮನೋಭಾವವು ಬದಲಾಗುತ್ತಿದೆ. ಮೊದಲು ನಮ್ಮನ್ನು ನಾವು ತಿಳಿದು ನಮ್ಮಲ್ಲಿರುವ ಒಳ್ಳೆಯ ಗುಣಗಳನ್ನು ನಾವೇ ಪ್ರಶಂಸಿಸಿಕೊಂಡು ಕೆಟ್ಟಗುಣಗಳನ್ನು ಬುಡಸಮೇತ ಕಿತ್ತುಹಾಕೋಣವಲ್ಲವೇ? ನಮಗಾಗಿ ಇಷ್ಟೇ ಎಂದು ನಿಶ್ಚಯಿಸಿರುವಾಗ ಅದರಲ್ಲಿಯೇ ಸಂತಸವನ್ನು ಕಾಣೋಣ. ನಮ್ಮಲ್ಲಿಲ್ಲದ ವಸ್ತುವಿನ ಬಗ್ಗೆ ಚಿಂತಿಸುವುದನ್ನು ಬಿಡೋಣ. ಹಾಸಿಗೆ ಇದ್ದಷ್ಟು ಕಾಲು ಚಾಚಿ, ಜೀವನ ನಡೆಸಿದರೆ ಉತ್ತಮ ಅಲ್ಲವೇ?!

-ಅನಿಲ್ ರಾಜ, ಮೈಸೂರು

 

Tags:
error: Content is protected !!