Mysore
27
light rain

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಕಪಿಲಾ ನದಿಗೆ ಮತ್ತೊಂದು ಸೇತುವೆ

ನಂಜನಗೂಡು: ವರುಣ ಕ್ಷೇತ್ರ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರವನ್ನು ಸಂಪರ್ಕಿಸಲು ಕಪಿಲಾ ನದಿಗೆ ಮತ್ತೊಂದು ಸೇತುವೆ ಮಂಜೂರಾಗಿದೆ.

ತಾಲ್ಲೂಕಿನ ನಂಜನಗೂಡು-ಹುಲ್ಲಹಳ್ಳಿ ರಾಜ್ಯ ಹೆದ್ದಾರಿ ೫೭ರ ಹೆಗ್ಗಡಹಳ್ಳಿಯಿಂದ ವರುಣ ಕ್ಷೇತ್ರದ ಬಿದರಗೂಡಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ. ಕಪಿಲಾ ನದಿಯ ಎಡಬದಿಯ ಗ್ರಾಮಗಳಾದ ಬಿದರ ಗೂಡು, ಮರಳೂರು, ಕೆಂಬಾಳು, ದೂರ, ರಾಂಪುರ ಬಲಬದಿಯ ಗ್ರಾಮಗಳಾದ ಹೆಗ್ಗಡಹಳ್ಳಿ, ಕೊಂಗಳ್ಳಿ, ಅಂಡವಿನಹಳ್ಳಿ ದೇಬೂರು, ಬ್ಯಾಳಾರು, ಹರತಲೆ ಗ್ರಾಮಗಳ ಬಹುದಿನಗಳ ಕನಸು ಈ ಹೊಸ ಸೇತುವೆಯ ನಿರ್ಮಾಣದಿಂದಾಗಿ ನನಸಾಗಲಿದೆ.

ಈ ಸೇತುವೆ ನಿರ್ಮಾಣದಿಂದಾಗಿ ಬಿದರಗೂಡು ಮತ್ತು ನಂಜನಗೂಡಿನ ಮಧ್ಯದ ೨೪ ಕಿ. ಮೀ. ನಲ್ಲಿ ೧೨ ಕಿ. ಮೀ. ದೂರ ಉಳಿತಾಯವಾದರೆ, ಹೆಗ್ಗಡಹಳ್ಳಿಯಿಂದ ಜಿಲ್ಲಾ ಕೇಂದ್ರ ಮೈಸೂರಿಗೆ ೩೨ ಕಿ. ಮೀ. ಕ್ರಮಿಸಬೇಕಿದ್ದು, ಹೊಸ ಸೇತುವೆ ನಿರ್ಮಾಣದಿಂದಾಗಿ ೧೨ ಕಿ. ಮೀ. ದೂರ ಕಡಿಮೆಯಾಗಲಿದೆ. ವರುಣ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಪಿಲೆಗೆ ನೂತನ ಸೇತುವೆ ಮಂಜೂರು ಮಾಡಿದ್ದು, ಈ ಕುರಿತು ಇದೇ ತಿಂಗಳು ೧೦ರಂದು ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿದೆ. ಸದ್ಯದಲ್ಲೇ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ೨೯. ೩೫ ಕೋಟಿ ರೂ. ವೆಚ್ಚದ ಈ ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುತ್ತದೆ. ಹೊಸ ಸೇತುವೆಯನ್ನು ಮಂಜೂರು ಮಾಡಿದ್ದಕ್ಕಾಗಿ ಬಿದರಗೂಡು, ಮರಳೂರು, ಕೆಂಬಾಳು, ದೂರ, ರಾಂಪುರ ಬಲಬದಿಯ ಗ್ರಾಮಗಳಾದ ಹೆಗ್ಗಡಹಳ್ಳಿ, ಕೊಂಗಳ್ಳಿ, ಹಂಡುವಿನಹಳ್ಳಿ, ದೇಬೂರು, ಬ್ಯಾಳಾರು, ಹರತಲೆ ಗ್ರಾಮಗಳ ಜನತೆ ಸಿಎಂ ಸಿದ್ದರಾಮಯ್ಯ, ಸಚಿವ ಡಾ. ಎಚ್. ಸಿ. ಮಹದೇವಪ್ಪ, ಶಾಸಕ ದರ್ಶನ್, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಅವರನ್ನು ಅಭಿನಂದಿಸಿದ್ದಾರೆ.

Tags: