Mysore
21
haze

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಕ್ರಮ

ನವೀನ್ ಡಿಸೋಜ

ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ

‘ಆಂದೋಲನ’ಕ್ಕೆ ನೀಡಿದ ಸಂದರ್ಶನದಲ್ಲಿ ಯೋಜನೆಗಳ ಬಗ್ಗೆ ಮಾಹಿತಿ

ಮಡಿಕೇರಿ: ಹಲವು ವರ್ಷಗಳ ಕ್ರೀಡಾ ಕ್ಷೇತ್ರದ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಅವಕಾಶ ನೀಡಿದ್ದು, ಕ್ರೀಡಾ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಯಾವುದೇ ಚ್ಯುತಿ ಬಾರದಂತೆ ಕೆಲಸ ಮಾಡಲಾಗುವುದು ಎಂದು ಕರ್ನಾಟಕ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷರಾಗಿ ನೇಮಕ ಗೊಂಡಿರುವ ಸಿ.ಎಸ್.ಅರುಣ್ ಮಾಚಯ್ಯ ಹೇಳಿದ್ದಾರೆ.

‘ಆಂದೋಲನ’ಕ್ಕೆ ನೀಡಿದ ಸಂದರ್ಶನದಲ್ಲಿ, ತಮಗೆ ಅಧ್ಯಕ್ಷ ಸ್ಥಾನ ದೊರಕಿರುವ ಬಗ್ಗೆ ಸಂತಸ ಹಂಚಿಕೊಂಡಿರುವ ಅರುಣ್ ಮಾಚಯ್ಯ, ಕ್ರೀಡಾ ಕ್ಷೇತ್ರದಲ್ಲಿ ಕೈಗೊಳ್ಳ ಬೇಕಾದ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಆಂದೋಲನ: ಕರ್ನಾಟಕ ಕ್ರೀಡಾ ಪ್ರಾಧಿಕಾರಕ್ಕೆ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಬಗ್ಗೆ ತಮ್ಮ ಅಭಿಪ್ರಾಯ?

ಅರುಣ್ ಮಾಚಯ್ಯ: ಬಹಳ ಸಂತೋಷವಾಗುತ್ತಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕೊಡಗು ಜಿಲ್ಲೆಯ ಇಬ್ಬರು ಶಾಸಕರು, ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಧನ್ಯವಾದ ಸಲ್ಲಿಸಲು ಇಚ್ಛಿಸುತ್ತೇನೆ. ನಾನು ಹಲವು ದಶಕಗಳಿಂದ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಅದನ್ನು ಗುರುತಿಸಿ ರಾಜ್ಯ ಸರ್ಕಾರ ನನಗೆ ಅವಕಾಶ ನೀಡಿದೆ. ಯಾವುದೇ ಚ್ಯುತಿ ಬಾರದೆ ಕೆಲಸ ಮಾಡುವ ನಂಬಿಕೆ ಇದೆ.

ಆಂದೋಲನ: ಕ್ರೀಡೆಯತ್ತ ಯುವಜನರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ರೂಪಿಸುವ ಅಗತ್ಯ ಇದೆಯೇ?

ಅರುಣ್ ಮಾಚಯ್ಯ: ಈಗಾಗಲೇ ಕ್ರೀಡೆಗಾಗಿ ಸರ್ಕಾರ ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರತಿ ಜಿಲ್ಲೆಯಲ್ಲಿಯೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಹಲವು ಸೌಲಭ್ಯ ಒದಗಿಸಲಾಗುತ್ತಿದೆ. ಪ್ರತಿ ಜಿಲ್ಲೆಗೂ ಭೇಟಿ ನೀಡಿ ಅಲ್ಲಿನ ಸಮಸ್ಯೆ ಅರಿಯಬೇಕಾಗಿದ್ದು, ಆ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಬೇಕಾಗಿದೆ. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಯಾ ಜಿಲ್ಲೆಗೆ ಬೇಕಾದ ಯೋಜನೆಗಳನ್ನು ರೂಪಿಸಲಾಗುವುದು.

ಆಂದೋಲನ: ಕ್ರೀಡಾ ವಲಯಕ್ಕೆ ಸರ್ಕಾರದ ಸಹಕಾರ ಹೇಗಿರಬೇಕು ಎಂದು ಬಯಸುತ್ತೀರಿ?

ಅರುಣ್ ಮಾಚಯ್ಯ: ಕ್ರೀಡಾ ವಲಯಕ್ಕೆ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅನುದಾನಗಳು ದೊರೆಯುತ್ತಿವೆ. ಕೇಂದ್ರ ಸರ್ಕಾರದ ಹೊಸ ಕ್ರೀಡಾ ನೀತಿ ಕೂಡ ಪ್ರಕಟವಾಗಿದೆ. ಅವುಗಳನ್ನು ಸಮಗ್ರವಾಗಿ ಅನುಷ್ಠಾನ ಮಾಡಲು ಕ್ರಮ ಕೈಗೊಳ್ಳುವುದರೊಂದಿಗೆ ಕ್ರೀಡಾ ವಲಯಕ್ಕೆ ಹೆಚ್ಚಿನ ಅನುದಾನವನ್ನು ಒದಗಿಸುವಂತಾಗಬೇಕು.

ಆಂದೋಲನ: ಪ್ರಸ್ತುತ ಇರುವ ಕ್ರೀಡೆಗಳ ಪಟ್ಟಿಯಲ್ಲಿ ಯಾವುದಾದರೂ ಹೊಸ ಆಟವನ್ನು ಸೇರ್ಪಡೆ ಮಾಡಲು ಸರ್ಕಾರದ ಮೇಲೆ ಒತ್ತಡ ತರುವ ಚಿಂತನೆ ಇದೆಯೇ?

ಅರುಣ್ ಮಾಚಯ್ಯ: ಯಾವ ಕ್ರೀಡೆಗಳು ಪ್ರಚಲಿತದಲ್ಲಿವೆಯೋ ಅಂತಹ ಕ್ರೀಡೆಗಳಿಗೆ ಬೆಂಬಲ ನೀಡ ಬೇಕಾದ ಅವಶ್ಯವಿದೆ. ಉದಾಹರಣೆಗೆ ನಮ್ಮ ದೇಶೀಯ ಆಟಗಳಾದ ಕಬಡ್ಡಿ, ಖೋಖೋ ಅಂತಹವುಗಳಿಗೆ ಉತ್ತೇಜನ ನೀಡುವ ಕೆಲಸ ಮಾಡಬೇಕಿದೆ.

ಆಂದೋಲನ: ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು, ಯುವಜನರಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸಲು ಹೊಸದೆನ್ನಬಹುದಾದ ಆಲೋಚನೆ ಇದೆಯೇ?

ಅರುಣ್ ಮಾಚಯ್ಯ: ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವುದಕ್ಕೆ ಹೆಚ್ಚಿನ ಒಲವು ತೋರಬೇಕಾಗಿದೆ. ಇಲ್ಲಿನ ಕ್ರೀಡಾಪಟುಗಳಿಗೆ ತರಬೇತಿಗೆ ವಿದೇಶಕ್ಕೆ ಕಳುಹಿಸುವುದು ಅಥವಾ ವಿದೇಶಿ ತರಬೇತುದಾರರನ್ನು ಇಲ್ಲಿಗೆ ಕರೆಯಿಸಿ ತರಬೇತಿ ನೀಡುವಂತಹ ಯೋಜನೆ ಮೊದಲು ಇತ್ತು. ಈಗ ಅಕಾಡೆಮಿಗಳ ಮೂಲಕ ತರಬೇತಿ ನೀಡಲಾಗುತ್ತಿದ್ದು, ಅವುಗಳಿಗೆ ಉತ್ತೇಜನ ನೀಡಬೇಕಾಗುತ್ತದೆ.

ಆಂದೋಲನ: ಕ್ರೀಡಾ ವಿದ್ಯಾರ್ಥಿನಿಲಯಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ ಎಂಬ ಆರೋಪಗಳಿವೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ?

ಅರುಣ್ ಮಾಚಯ್ಯ: ಗ್ರಾಮೀಣ ಭಾಗಗಳಲ್ಲಿ ಬಹಳಷ್ಟು ಕಡೆಗಳಲ್ಲಿ ಕ್ರೀಡಾ ಹಾಸ್ಟೆಲ್‌ಗಳಿವೆ. ಕೊಡಗಿ ನಲ್ಲಿ ೩ ಹಾಸ್ಟೆಲ್‌ಗಳಿದ್ದು, ಶಿವಮೊಗ್ಗ, ಬೆಳಗಾವಿ, ಹುಬ್ಬಳ್ಳಿ ಸೇರಿದಂತೆ ಬಹಳಷ್ಟು ಕಡೆಗಳಲ್ಲಿ ಹಾಸ್ಟೆಲ್‌ಗಳಿವೆ. ಆದರೆ, ಅಲ್ಲಿ ಕನಿಷ್ಠ ಸೌಕರ್ಯಗಳಿವೆ. ಅದನ್ನು ಪರಿಹರಿಸಿದ ನಂತರ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿ ಸಲು ಕ್ರಮ ಕೈಗೊಳ್ಳಬೇಕಾಗುತ್ತದೆ. ಸರ್ಕಾರದಿಂದ ಮೂಲ ಸೌಕರ್ಯಗಳಿಗಾಗಿ ಹೆಚ್ಚಿನ ಅನುದಾನವನ್ನು ಒದಗಿಸಬೇಕು.

ಆಂದೋಲನ: ಕ್ರೀಡಾ ವಿದ್ಯಾರ್ಥಿನಿಲಯಗಳಲ್ಲಿ ಊಟೋಪಚಾರ, ತರಬೇತಿಗಳನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಕ್ರಮವಹಿಸುತ್ತೀರಾ?

ಅರುಣ್ ಮಾಚಯ್ಯ: ಕ್ರೀಡಾ ವಿದ್ಯಾರ್ಥಿನಿಲಯಗಳಲ್ಲಿ ಉತ್ತಮವಾದ ಆಹಾರ ದೊರಕುತ್ತಿದೆಯೇ ಎಂಬುವುದನ್ನು ಮೊದಲು ನೋಡಬೇಕಾಗಿದೆ. ಜೊತೆಗೆ ಅಲ್ಲಿ ಉತ್ತಮ ತರಬೇತುದಾರರು ಇದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ತರಬೇತುದಾರರು ಉತ್ತಮವಾಗಿ ಇಲ್ಲದಿದ್ದರೆ ಕ್ರೀಡಾ ಶಾಲೆಗಳಿಗೆ ಸೇರಿಸಿ ಪ್ರಯೋಜನವಿಲ್ಲ. ಜೊತೆಗೆ ಶೈಕ್ಷಣಿಕದಲ್ಲಿಯೂ ಹಿಂದೆ ಬೀಳಬಾರದು, ಆ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುವ ಕೆಲಸವಾಗಬೇಕು

Tags:
error: Content is protected !!