Mysore
15
overcast clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಜನವರಿ.3ರಿಂದ ನೈಸರ್ಗಿಕ ಕೃಷಿ ಕಾರ್ಯಾಗಾರ 

ಹಾಸನ ಜಿಲ್ಲೆ ಹಳೇಬೀಡಿನ ಪುಷ್ಪಗಿರಿ ಮಠದಲ್ಲಿ ಆಯೋಜನೆ: ಡಾ.ಅನಂತರಾವ್

ಮಂಡ್ಯ: ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ವತಿಯಿಂದ ಜ.೩ರಿಂದ ೬ರವರೆಗೆ ಹಾಸನ ಜಿಲ್ಲೆ ಹಳೇಬೀಡು ಸಮೀಪವಿರುವ ಶ್ರೀಪುಷ್ಪಗಿರಿ ಮಠದಲ್ಲಿ ನೈಸರ್ಗಿಕ ಕೃಷಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಶ್ರೀ ನಿರ್ಮಲ ಭೂ ಮಾತಾ ಟ್ರಸ್ಟ್ ಅಧ್ಯಕ್ಷ ಡಾ.ಕೆ.ಜೆ.ಅನಂತರಾವ್ ಹೇಳಿದರು.

ನಾಲ್ಕು ದಿನಗಳ ಕಾಲ ನಡೆಯುವ ಈ ಕಾರ್ಯಾಗಾರವನ್ನು ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಗೆ ಹೆಸರಾಗಿರುವ ಮಹಾರಾಷ್ಟ್ರದ ಪದ್ಮಶ್ರೀ ಡಾ.ಸುಭಾಷ್ ಪಾಳೇಕರ್ ನಡೆಸಿಕೊಡುವರು. ಕಾರ್ಯಾಗಾರದಲ್ಲಿ ಒಂದು ಸಾವಿರ ಜನರಿಗೆ ವಸತಿ ಸಹಿತ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಕಾರ್ಯಾಗಾರವು ಶ್ರೀ ಪುಷ್ಪಗಿರಿ ಮಠದ ಡಾ.ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಯವರ ಸಹಯೋಗದೊಂದಿಗೆ ನಡೆಯಲಿದ್ದು, ಸಾಲ ಮಾಡಿ ಖರೀದಿಸುವ ರಸಗೊಬ್ಬರ, ಕೀಟನಾಶಕ, ಹೈಬ್ರಿಡ್ ಬಿತ್ತನೆ ಬೀಜಗಳು ರೈತಕುಲವನ್ನು ಆತ್ಮಹತ್ಯೆಯ ಹಾದಿ ಹಿಡಿಯುವಂತೆ ಮಾಡಿವೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಈ ಪರಿಸ್ಥಿತಿ ಯಲ್ಲಿ ರೈತರು ರೈತರಾಗಿ ಉಳಿದು ಘನತೆಯ ಬದುಕನ್ನು ಕಟ್ಟಿಕೊಳ್ಳಬೇಕಾದರೆ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ನುಡಿದರು.

ರೈತರು ಏಕಬೆಳೆಯ ಬದಲಾಗಿ ಬಹುಬೆಳೆಯ ಪದ್ಧತಿಯನ್ನು ಅಳವಡಿಸಿಕೊಳ್ಳುವುದು, ರಸಗೊಬ್ಬರಗಳ ಬದಲು ನಾಟಿ ಹಸುವಿನ ಸಗಣಿ ಮತ್ತು ಗಂಜಲದಿಂದ ತಯಾರಾದ ಬೀಜಾಮೃತ, ಜೀವಾಮೃತ ಬಳಸುವುದು, ನೀರನ್ನು ಕಡಿಮೆ ಬಳಸುವ ನೈಸರ್ಗಿಕ ಕೃಷಿಯತ್ತ ರೈತರು ತೆರೆದುಕೊಳ್ಳದಿದ್ದರೆ ಮುಂದಿನ ಮಕ್ಕಳ ಹಾಗೂ ಭೂಮಿಯ ಆರೋಗ್ಯ ಎಲ್ಲವೂ ಕರಾಳವಾಗಲಿದೆ ಎಂದು ಎಚ್ಚರಿಸಿದರು.

ಕಾರ್ಯಾಗಾರದಲ್ಲಿ ಮೂರು ದಿನಗಳ ಕಾಲ ದೇಸಿ ತಳಿಗಳ ಬೀಜ ಮೇಳ, ಆಹಾರ ಮೌಲ್ಯವರ್ಧನೆ ಮತ್ತು ನೇರ ಮಾರುಕಟ್ಟೆ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ. ಅತಿ ಹೆಚ್ಚು ತಳಿಗಳನ್ನು ಸಂರಕ್ಷಿಸಿರುವ ಮೂವರು ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಯುವ ರೈತರು ಭಾಗವಹಿಸಲು ಮನವಿ: 

ಮಂಡ್ಯ: ಹಸಿರು ಕ್ರಾಂತಿಯ ಪರಿಣಾಮದಿಂದ ರೈತರು ಕಳೆದುಕೊಂಡಿರುವ ನಾಟಿ ಬೀಜಗಳು, ನಿಸರ್ಗದ ಜೊತೆ ಋತುಮಾನಕ್ಕೆ ತಕ್ಕಂತೆ ಆಯ್ಕೆ ಮಾಡುವ ಕೃಷಿ ಜ್ಞಾನ, ನೇರ ಮಾರುಕಟ್ಟೆ ವಿಧಾನಗಳಾದ ರೈತಸಂತೆಗಳನ್ನು ಪರ್ಯಾಯವಾಗಿ ಕಟ್ಟಲೇಬೇಕಾದ ಪರಿಸ್ಥಿತಿ ಎದುರಾಗಿದೆ. ಶ್ರೀ ಪುಷ್ಪಗಿರಿ ಮಠದಲ್ಲಿ ನಡೆಯುವ ಕಾರ್ಯಾಗಾರಕ್ಕೆ ವಿವಿಧ ರಾಜ್ಯಗಳಿಂದ ಮತ್ತು ಪಕ್ಕದ ನೇಪಾಳದ ರೈತರು, ರೈತ ಮುಖಂಡರು ಭಾಗಿಯಾಗುತ್ತಿದ್ದು, ಯುವ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಡಾ. ಕೆ.ಜೆ.ಅನಂತರಾವ್ ಮನವಿ ಮಾಡಿದರು. ಕಾರ್ಯಾಗಾರಕ್ಕೆ ನೋಂದಣಿ ಶುಲ್ಕವಾಗಿ ೮೦೦ ರೂ. ನಿಗದಿಪಡಿಸಿದೆ. ನೋಂದಣಿಗೆ ಜ.೨ರಂದು ಕೊನೆಯ ದಿನ. ಕಾರ್ಯಾಗಾರಕ್ಕೆ ಬರಲು ಆಸಕ್ತಿ ಇದ್ದು, ನೋಂದಣಿ ಶುಲ್ಕ ಪಾವತಿಸಲು ಕಷ್ಟವಿರುವ ೧೦೦ ಸಣ್ಣ ರೈತರಿಗೆ, ಮಹಿಳಾ ರೈತರು ಹಾಗೂ ಯುವ ರೈತರಿಗೆ ಉಚಿತವಾಗಿ ವ್ಯವಸ್ಥೆ ಮಾಡಲಾಗುವುದು. ಉಚಿತ ನೋಂದಣಿಗೆ ಮೊ:೭೬೭೬೨೮೦೧೩೬ನ್ನು ಸಂಪರ್ಕಿಸಲು ತಿಳಿಸಿದರು.

Tags:
error: Content is protected !!