Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ನಾಡಿನ ಸಾಂಸ್ಕೃತಿಕ ವೈಭವ, ಸಂದೇಶಗಳ ಹೂರಣ; ಸ್ತಬ್ಧಚಿತ್ರಗಳಲ್ಲಿ ಅನಾವರಣ

ಎಚ್.ಎಸ್.ದಿನೇಶ್‌ ಕುಮಾರ್‌ 

ಆಕರ್ಷಿಸಿದ 31 ಜಿಲ್ಲೆಗಳ 51 ಸ್ತಬ್ಧಚಿತ್ರಗಳಲ್ಲಿ ಆಯಾ ಜಿಲ್ಲೆಯ ಇತಿಹಾಸದ ಇಣುಕು ನೋಟ

ಮೈಸೂರು: ಸೋಲಿಗರ ಜೀವನ ಶೈಲಿ, ಕೊಡಗಿನ ಹಾರಂಗಿ ಜಲಾಶಯ, ಆನೆ ಶಿಬಿರ, ವಿಜಯನಗರ ಸಾಮ್ರಾಜ್ಯದ ವೈಭವ ಪ್ರವಾಸೋದ್ಯಮ ಇಲಾಖೆಯ ಒಂದು ರಾಜ್ಯ ಹಲವು ಜಗತ್ತು, ಹೆಗ್ಗುಂದದ ರಾಮದೇವರ ಬೆಟ್ಟ, ಕೋಲಾರ ಜಿಲ್ಲೆಯ ಕೋಟಿ ಲಿಂಗ ದರ್ಶನ, ರಂಗನತಿಟ್ಟಿನ ಪಕ್ಷಿ ನೋಟ, ಕೆಆ‌ಎಸ್ ಹೀಗೆ ಐತಿಹಾಸಿಕ, ಸಾಂಸ್ಕೃತಿಕ ಸಂದೇಶಗಳನ್ನು ಸಾರುವ 31 ಜಿಲ್ಲೆಗಳ 51 ಸ್ತಬ್ಧಚಿತ್ರಗಳು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗಿದವು.

ದಸರಾ ಜ೦ಬೂ ಸವಾರಿಯ ದಿನವಾದ ಶನಿವಾರ ಭಾರೀ ಜನಸ್ತೋಮವೇ ನೆರೆದಿತ್ತು. ಲಕ್ಷಾಂತರ ಜನರ ಹರ್ಷೋದ್ವಾರದ ನಡುವೆ ಮುಖ್ಯಮಂತ್ರಿಗಳಿಂದ ನಂದಿ ಧ್ವಜಕ್ಕೆ ಪೂಜೆ ಸಲ್ಲಿಕೆಯಾದ ನಂತರ ಕಲಾ ತಂಡಗಳು ಹಾದು ಹೋಗುತ್ತಿದ್ದಂತೆಯೇ ಸ್ತಬ್ಧಚಿತ್ರಗಳು ಶಿಸ್ತುಬದ್ಧವಾಗಿ ಒಂದರ ಹಿಂದೊಂದರಂತೆ ಸಾಗುವ ಮೂಲಕ ನೋಡುಗರಲ್ಲಿ ಕುತೂಹಲ ಮೂಡಿಸಿದವು. ತುಮಕೂರು ಜಿಲ್ಲಾಡಳಿತ ನಿರ್ಮಿಸಿದ್ದ ‘ಔಷಧ ಗಳ ಸಂಜೀವಿನಿ ಪರ್ವತ ಸಿದ್ಧರ ಬೆಟ್ಟ’ ಎಂಬ ಸ್ತಬ್ಧಚಿತ್ರ ನೋಡುಗರನ್ನು ರೋಮಾಂಚನಗೊಳಿಸಿತು. ಯಾದಗಿರಿಯ ತಿಂಥಣಿ ಮೌನೇಶ್ವರ ದೇವಾಲಯದ ಸ್ತಬ್ಧಚಿತ್ರವನ್ನು ನೋಡುಗರು ಶಿಳ್ಳೆ ಚಪ್ಪಾಳೆಯೊಂದಿಗೆ ಬರಮಾಡಿಕೊಂಡದ್ದು ವಿಶೇಷವಾಗಿತ್ತು.

ಚಾಮರಾಜನಗರ ಜಿಲ್ಲಾ ಪಂಚಾಯಿತಿ ನಿರ್ಮಿಸಿದ್ದ ಅರಣ್ಯ ಸಂಪತ್ತಿನೊಳಗಿನ ಸೋಲಿಗರ ಜೀವನ ಶೈಲಿ, ಬದುಕು, ಸಂಸ್ಕೃತಿ ಸುಗ್ಗಿಹಬ್ಬ, ಕಾಡು ಉತ್ಪನ್ನಗಳನ್ನು ಬಿಂಬಿಸುವ ಸ್ತಬ್ಧಚಿತ್ರ ವಿಶೇಷವಾಗಿ ರಚಿಸಲ್ಪಟ್ಟಿತ್ತು, ವಿಜಯನಗರ ಜಿಲ್ಲೆಯ ವೈಭವ, ಅಲ್ಲಿ ಚಿನ್ನವನ್ನು ಮಾರಾಟ ಮಾಡುತ್ತಿದ್ದ ರೀತಿಯನ್ನು ಒಳಗೊಂಡ ಸ್ತಬ್ಧಚಿತ್ರ ಇತಿಹಾಸವನ್ನು ಸಾರಿ ಹೇಳುವಂತಿತ್ತು. ಸಮಾಜ ಕಲ್ಯಾಣ ಇಲಾಖೆಯ ಸ್ತಬ್ಧಚಿತ್ರ ಸಮಾ ಜದ ಅರಿವನ್ನು ಮೂಡಿಸಿತು, ಅರಣ್ಯ ವಸತಿ ಮತ್ತು ವಿಹಾರ ಧಾದುಗಳ ಸಂಸ್ಥೆ ಸ್ತಬ್ಧಚಿತ್ರ ಅರಣ್ಯ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಸಂದೇಶವನ್ನು ಸಾರುತ್ತಿತ್ತು. ಇನ್ನು ಮೈಸೂರು ಜಿಲ್ಲಾಡಳಿತದಿಂದ ನಿರ್ಮಿಸಿದ್ದ ಸ್ತಬ್ಧಚಿತ್ರ ಮಾನವ ಕುಲದ ಸಮಾನತೆಗೆ ಬುದ್ಧ, ಬಸವ, ಅಂಬೇಡ್ಕರ್, ಅಕ್ಕ ಮಹಾದೇವಿ ಹೇಗೆ ಶ್ರಮಿಸಿದರು ಎಂಬುದನ್ನು ಸಾರಿ ಹೇಳುತ್ತಿತ್ತು.

ಬೆಳಗಾವಿ ಜಿಲ್ಲೆಯ ಕಿತ್ತೂರಿನ ವೈಭವವನ್ನು ಹೊತ್ತ ವಾಹನ ಆಗಮಿಸಿದಾಗ ನೆರೆದಿದ್ದವರು ಚಪ್ಪಾಳೆ ಮೂಲಕ ಸ್ವಾಗತಿಸಿದರು. ಕುದುರೆ ಏರಿ ಕತ್ತಿ ಹಿಡಿಯುವ ಮೂಲಕ ಬ್ರಿಟಿಷರ ವಿರುದ್ಧ ಚೆನ್ನಮ್ಮ ಹೋರಾಡಿದ ಮಾದರಿ, ಅಂಗರಕ್ಷಕರ ಪ್ರತಿಮೆಗಳು ಜನರನ್ನು ಸೂಜಿಗಲ್ಲಿನಂತೆ ಸೆಳೆದವು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ಮಿಸಿದ್ದ ಹೆಣ್ಣು ಜಗತ್ತಿನ ಕಣ್ಣು, ಹೆಣ್ಣು ಭ್ರೂಣ ಹತ್ಯೆ ಅಪರಾಧ’ ಎಂಬ ಸಂದೇಶ ಸಾರುವ ಸ್ತಬ್ಧಚಿತ್ರ ಜನರಲ್ಲಿ ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು. ಹಾಸನ ಜಿಲ್ಲೆಯ ಬೇಲೂರು ಮತ್ತು ಹಳೇಬೀಡಿನ ಶಿಲ್ಪ ಕಲಾಕೃತಿ ಜನರನ್ನು ಸೆಳೆಯಿತು.

ಕರ್ನಾಟಕ ರಾಜ್ಯ ಮುಕ್ತ ವಿವಿ ನಿರ್ಮಿಸಿದ ‘ನಿಮ್ಮ ಮನೆಯೇ ನಿರಂತರ ಪಾಠಶಾಲೆ’, ಕೌಶಲಾಭಿವೃದ್ಧಿ ಇಲಾಖೆಯ ಕಾರ್ಯಕ್ರಮಗಳು, ಚಿಕ್ಕಮಗಳೂರಿನ ತೇಜಸ್ವಿ ವಿಸ್ಮಯ ಲೋಕ, ಸ್ತಬ್ಧಚಿತ್ರ ಉಪ ಸಮಿತಿ ನಿರ್ಮಿಸಿದ್ದ ಸಾಮಾಜಿಕ ನ್ಯಾಯದ ರೂವಾರಿಗಳು, ಉಡುಪಿಯ ಸಾಂಸ್ಕೃತಿಕ ವೈಭವ ಸ್ತಬ್ಧಚಿತ್ರಗಳನ್ನು ಜನರು ಕಣ್ತುಂಬಿಕೊಂಡರು.

ಕೊಡಗು ಜಿಲ್ಲೆಯ ಹಾರಂಗಿ ಜಲಾಶಯ, ಕಾಫಿ, ಕಾಳು ಮೆಣಸು, ಆನೆ ಕ್ಯಾಂಪ್‌ನ ಮಾಹಿತಿಯನ್ನು ಹೊತ್ತ ಸ್ತಬ್ಧಚಿತ್ರ ಆಕರ್ಷಕವಾಗಿದ್ದು,
ಚಿಕ್ಕಬಳ್ಳಾವುದ ಜಿಲ್ಲೆಯ ಪ್ರಸಿದ್ಧ ನಂದಿ ಗಿರಿಧಾಮದ ಸೌಂದರ್ಯದ ಸೊಬಗು ಹಾಗೂ ರೋಪ್ ವೇ ಬಿಂಬಿಸುವ ಸ್ತಬ್ಧ ಚಿತ್ರ ದಸರಾ ಜಂಬೂ ಸವಾರಿಯಲ್ಲಿ ಪ್ರೇಕ್ಷಕರ ಗಮನ ಸೆಳೆಯಿತು.‌
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ವಿಸ್ಮಯ ಲೋಕವನ್ನು ಅನಾವರಣ ಮಾಡಿದ ಚಿಕ್ಕಮಗಳೂರು ಜಿಲ್ಲೆಯ ಸ್ತಬ್ಧಚಿತ್ರ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ನಿರ್ಮಿಸಿದ್ದ ಸ್ತಬ್ಧಚಿತ್ರ ಜಲಜೀವನ್ ಮಿಷನ್ ಸಾಧನೆಯನ್ನು ಬಿಂಬಿಸಿತು.
ಕರ್ನಾಟಕ ರಾಜ್ಯ ಮುಕ್ತ ವಿವಿ ನಿರ್ಮಿಸಿದ್ದ ‘ನಿಮ್ಮ ಮನೆಯೇ ನಿರಂತರ ಪಾಠಶಾಲೆ’ ಸ್ತಬ್ದಚಿತ್ರ ದೂರ ಶಿಕ್ಷಣದ ಮಹತ್ವ ಸಾರಿತು.
ಬುದ್ಧ, ಬಸವ, ಅಂಬೇಡ್ಕರ್ ಅವರ ಸಂದೇಶಗಳನ್ನು ಹೊತ್ತ ಮೈಸೂರು ಜಿಲ್ಲಾಡಳಿತದ ಸ್ತಬ್ಧಚಿತ್ರ ಮಾನವಕುಲದ ಸಮಾನತ ಸಾರಿತು.
ಚಾಮರಾಜನಗರ ಜಿಲ್ಲಾ ಪಂಚಾಯಿತಿಯ ಸ್ತಬ್ಧಚಿತ್ರದಲ್ಲಿ ಬುಡಕಟ್ಟು ಜನರ ಸಂಸ್ಕೃತಿ ಅನಾವರಣಗೊಂಡಿತು.
ರಂಗನತಿಟ್ಟು ಪಕ್ಷಿಧಾಮ, ಕೃಷ್ಣರಾಜ ಸಾಗರ ಬಿಂಬಿಸಿದ ಮಂಡ್ಯ ಜಿಲ್ಲಾ ಪಂಚಾಯತಿಯ ಸ್ತಬ್ಧಚಿತ್ರ ಜನಾಕರ್ಷಣೀಯವಾಗಿತ್ತು.
ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ ನಿರ್ಮಿಸಿದ್ದ ವನ್ಯ ಜೀವಿಗಳ ಸಂರಕ್ಷಣೆ ಕುರಿತ ಸ್ತಬ್ಧಚಿತ್ರ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸುವಲ್ಲಿ ಯಶಸ್ವಿಯಾಯಿತು.
ನಿಮ್ಮ ಸುರಕ್ಷತೆ ನಮ್ಮ ಆದ್ಯತೆ ಎಂಟು ಘನ ವಾಕ್ಯದೊಂದಿಗೆ ಗಮನ ಸೆಳೆದ ಕರ್ನಾಟಷ ರಾಜ್ಯ ಪೊಲೀಸ್ ಇಲಾಖೆ ಸ್ತಬ್ಧ ಚಿತ್ರ
ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಘೋಷಣೆಗೆ 100 ವರ್ಷಗಳಾದ ನೆನಪಿಗಾಗಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಮೂಡಿಬಂದ ಆಕರ್ಷಕ ಸ್ತಬ್ಧಚಿತ್ರದಲ್ಲಿ ಈ ಬಾರಿ ರಾಜ್ಯ ಸರ್ಕಾರವು ಆಚರಿಸಿದ ಪ್ರಜಾಪ್ರಭುತ್ವದ ಮಾನವ ಸರವಳಿಯನ್ನು ಬಿಂಬಿಸಿದ್ದು ವಿಶೇಷವಾಗಿತ್ತು.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕ ಮಂಡಳಿ ನಿರ್ಮಿಸಿರುವ ಸ್ತಬ್ಧ ಚಿತ್ರತೀರ ಭಾಗ್ಯ ಮತ್ತು ತೀರ ಸಂಜೀವಿನಿ ಯೋಜನೆಗಳ ಸಾಧನೆಯನ್ನು ಬಿಂಬಿಸಿತು.
ಬ್ರಿಟಿಷರ ವಿರುದ್ಧ ಕಿತ್ತೂರು ರಾಣಿ ಚನ್ನಮ್ಮ ನಡೆಸಿದ ಕಿತ್ತೂರು ಕದನದ ಸನ್ನಿವೇಶವನ್ನು ಬಿಂಬಿಸುವ ಕುರಿತು ಬೆಳಗಾವಿ ಜಿಲ್ಲಾ ವಂಚಾಯಿತಿಯಿಂದ ಸಿದ್ಧಪಡಿಸಿದ್ದ ಸ್ತಬ್ಧ ಚಿತ್ರ ಆಕರ್ಷಕವಾಗಿತ್ತು.

Tags: