ನಾಳೆ ಚುನಾವಣೆ; ಬಹುಮತ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನಿಶ್ಚಿತ
ಎಚ್.ಡಿ.ಕೋಟೆ: ಪಟ್ಟಣದ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ಮಂಗಳವಾರ (ಮಾ.೨೫) ನಡೆಯಲಿದ್ದು, ಕಾಂಗ್ರೆಸ್ ಪಕ್ಷದ ಪುರಸಭಾ ಸದಸ್ಯ ಮಧುಕುಮಾರ್ ಸ್ಥಾಯಿ ಸಮಿತಿ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.
ಪ್ರತಿಷ್ಠೆಯ ಕಣವಾಗಿರುವ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಈ ಬಾರಿ ಅಷ್ಟೇನೂ ಪೈಪೋಟಿ ಕಾಣದಿದ್ದರೂಕೆಲವರು ಚುನಾವಣೆಯನ್ನು ರಂಗೇರಿಸಿದ್ದಾರೆ.
ಸ್ಥಾಯಿ ಸಮಿತಿ ಸದಸ್ಯರಾಗಿ ಕಾಂಗ್ರೆಸ್ ಪಕ್ಷದ ಮಧುಕುಮಾರ್, ಸುಹಾಸಿನಿ ದಿನೇಶ್, ಕರಾಟೆ ಪ್ರೇಮ್, ಸಾಗರ್, ಸೋಮಶೇಖರ್, ಜಾ.ದಳದ ನಂಜಪ್ಪ, ಲೋಕೇಶ್, ದರ್ಶಿನಿ, ಜಿಮ್ ಯಶ್ವಂತ್ ಆಯ್ಕೆಯಾಗಿದ್ದರು.
ಹೀಗಾಗಿ ಬಹುಮತ ಹೊಂದಿರುವ ಕಾಂಗ್ರೆಸ್ ಪಕ್ಷದವರೇ ಸ್ಥಾಯಿ ಸಮಿತಿ ಅಧಿಕಾರ ಹಿಡಿಯುವುದು ಖಚಿತವಾಗಿದೆ.
ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಶಾಸಕರ ಆಪ್ತರಾದ ಮಧುಕುಮಾರ್ ಮತ್ತು ಕರಾಟೆ ಪ್ರೇಮ್ ಕುಮಾರ್ ನಡುವೆ ಪೈಪೋಟಿ ಎದುರಾದ ಹಿನ್ನೆಲೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದುರವರು ಪುರಸಭಾ ಸದಸ್ಯರಾದ ನರಸಿಂಹಮೂರ್ತಿ, ಕರಾಟೆ ಪ್ರೇಮ್ಕುಮಾರ್ ಮಧುಕುಮಾರ್ ಜೊತೆ ಸಭೆ ನಡೆಸಿ, ಬೇರೆ ಪಕ್ಷದವರು ಅಧಿಕಾರ ಹಿಡಿಯುವ ಸಂದರ್ಭ ಎಂದು ತಿಳಿದು ಬಂದಿದೆ.
ಜಾ.ದಳದ ನಂಜಪ್ಪ ಅವರು ಸ್ಥಾಯಿ ಸಮಿತಿ ಅಧ್ಯಕ್ಷರಾಗಬೇಕೆಂದು ಅನೇಕ ಸದಸ್ಯರ ಜೊತೆ ಸೇರಿ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ಒಟ್ಟಿನಲ್ಲಿ ಚುನಾವಣೆಯಲ್ಲಿ ಏನು ಬೇಕಾದರೂ ನಡೆಯಬಹುದು ಎಂಬುದಕ್ಕೆ ಕಳೆದ ಬಾರಿಯ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ನಿದರ್ಶನವಾಗಿದೆ.
ಹಾಲಿ ಸಮಿತಿಯ ಉಪಾಧ್ಯಕ್ಷರಾಗಿರುವ ಆಸಿಫ್ ಅವರು ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷರಾಗುತ್ತಾರೆ ಎಂದು ಬಿಂಬಿಸಲಾಗಿತ್ತು. ಆದರೆ, ಕಡೇ ಕ್ಷಣದಲ್ಲಿ ಕಾಂಗ್ರೆಸ್ನಿಂದ ಬಂಡಾಯವೆದ್ದ ಐಡಿಯಾ ವೆಂಕಟೇಶ್ ಅವರು ಕಾಂಗ್ರೆಸ್ ಪಕ್ಷದ ಸದಸ್ಯರನ್ನು ಸೆಳೆದು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಹೀಗಾಗಿ ಅಂತಿಮ ಕ್ಷಣದಲ್ಲಿ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಈ ಹಿನ್ನೆಲೆಯಲ್ಲಿ ಈ ಬಾರಿಯ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆಯೂ ಎಲ್ಲರಲ್ಲಿ ಕುತೂಹಲ ಮೂಡಿಸಿದೆ.
” ಸಾಮಾನ್ಯ ಸಭೆ ನಡೆದ ಸಂದರ್ಭದಲ್ಲಿ ಸ್ಥಾಯಿ ಸಮಿತಿಯ ಸದಸ್ಯರನ್ನು ಸದಸ್ಯರು ಒಗ್ಗೂಡಿ ಆಯ್ಕೆ ಮಾಡಿದ್ದಾರೆ. ಮಾ.೨೫ರಂದು ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ನಿಗದಿ ಮಾಡಿದ್ದು ನಂತರ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಬಜೆಟ್ ಸಭೆಯನ್ನು ಮುಂದೆ ನಡೆಸಲಾಗುವುದು.”
-ಸುರೇಶ್, ಮುಖ್ಯಾಧಿಕಾರಿ, ಪುರಸಭೆ




