Mysore
35
clear sky

Social Media

ಶುಕ್ರವಾರ, 27 ಮಾರ್ಚ್ 2026
Light
Dark

ಬುದ್ಧನ ಪ್ರತಿಮೆ ಮುಂದೆಯೇ ಮದ್ಯ ಮಾರಾಟ!

ನಂಜನಗೂಡು: ಸಾರ್ವಜನಿಕರು, ಸಂಘಟನೆಗಳವರಿಂದ ತೀವ್ರ ಆಕ್ರೋಶ

ನಂಜನಗೂಡು: ದುಶ್ಚಟಗಳನ್ನು ತ್ಯಜಿಸಿ ಎಂದು ಲೋಕಕ್ಕೆ ಸಂದೇಶ ಸಾರಿದ ಮಹಾ ದಾರ್ಶನಿಕ ಗೌತಮ ಬುದ್ಧರ ಆಳೆತ್ತರದ ಪ್ರತಿಮೆ ಪ್ರತಿಷ್ಠಾಪಿಸಿ ಅದರ ಮುಂದೆಯೇ  ಮದ್ಯ ಮಾರಾಟ ಮಾಡುತ್ತಿರುವ ಘಟನೆ ಮಹದೇವ ನಗರದಲ್ಲಿ ನಡೆದಿದ್ದು, ಇದಕ್ಕೆ ನಂಜನಗೂಡಿನ ಅನೇಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಮದ್ಯ ಮಾರಾಟ ಮಳಿಗೆ ಪಕ್ಕದಲ್ಲೇ ಕಲ್ಯಾಣ ಮಂಟಪವೂ ಇದ್ದು, ಅಲ್ಲಿನ ಶುಭ ಕಾರ್ಯಗಳಲ್ಲಿ ಮದ್ಯದ ಸಮಾರಾಧನೆ ಅಕ್ರಮವಾಗಿ ನಡೆಯುತ್ತಿರುವುದು ಜಗಜ್ಜಾಹೀರಾಗಿದ್ದು, ಈ ಮದ್ಯದ ಅಂಗಡಿಯನ್ನು  ಸ್ಥಳಾಂತರಿಸುವಂತೆ ಅಧಿಕಾರಿಗಳನ್ನು ಮಹದೇವನಗರದ ನಿವಾಸಿಗಳು  ಆಗ್ರಹಿಸಿದ್ದಾರೆ.

ತಾಲ್ಲೂಕಿನ ಬದನವಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮರಾಜನಗರ ಹೆದ್ದಾರಿಯಲ್ಲಿರುವ ಮಹದೇವನಗರದ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ  ಕಲ್ಯಾಣ ಮಂಟಪದ ಕಿಟಕಿ ತೆಗೆದು ಲಿಕ್ಕರ್ ಅಂಗಡಿಯಿಂದ ಲಿಕ್ಕರ್ ಪಡೆಯಲಾಗುತ್ತದೆ ಎಂದು ಸಂಘಟಕರು ದೂರಿನಲ್ಲಿ ಆರೋಪಿಸಿದ್ದಾರೆ.

ಬಾರ್ ಅಂಡ್ ರೆಸ್ಟೋರೆಂಟ್ ಮುಂಭಾಗವೇ ಗೌತಮ ಬುದ್ಧನ ಪ್ರತಿಮೆ ನಿರ್ಮಿಸಿ ಆ ಮಹಾ ದಾರ್ಶನಿಕನಿಗೆ  ಅಗೌರವ ಸೂಚಿಸಿ, ಅಪಚಾರ ಮಾಡಲಾಗಿದೆ. ಬಾರ್ ಅಂಡ್ ರೆಸ್ಟೋರೆಂಟ್‌ಗೆ ನೀಡಿದ ಅನುಮತಿ ಅವಧಿ ಪೂರ್ಣಗೊಂಡಿದ್ದರೂ ಅದರ ಪರವಾನಗಿಯನ್ನು  ನವೀಕರಿಸದೆ ವಹಿವಾಟು ನಡೆಸಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಈಗಾಗಲೇ ಅಬಕಾರಿ ಇಲಾಖೆಗೆ ದೂರು ನೀಡಿದ್ದು, ಬಾರ್ ಮಾಲೀಕನ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಬಾರ್ ಅಂಡ್ ರೆಸ್ಟೋರೆಂಟ್ ಅನ್ನು ಮುಚ್ಚಬೇಕು. ಇಲ್ಲವಾದಲ್ಲಿ ಗ್ರಾಮಸ್ಥರ ಜೊತೆಗೂಡಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

” ಬದನವಾಳು ಗ್ರಾಮ ಪಂಚಾಯಿತಿಯಿಂದ ಹೋಟೆಲ್ ಗೆ ಪಡೆದ ಅನುಮತಿ ಅವಧಿಯೂ ಮುಗಿದಿದ್ದು ಅದನ್ನು ನವೀಕರಿಸದೆ ವ್ಯಾಪಾರ ಮಾಡಲಾಗುತ್ತಿದೆ.  ಮದ್ಯದ ಅಂಗಡಿಯ ಮುಂಭಾಗದಲ್ಲೇ ಗೌತಮ ಬುದ್ಧರ ಪ್ರತಿಮೆಯನ್ನು  ಸ್ಥಾಪಿಸಿ ಮದ್ಯ ಮಾರಾಟ ಮಾಡುತ್ತಿರುವುದು ಬುದ್ಧನಿಗೆ ಮಾಡುತ್ತಿರುವ ಅಪಮಾನ. ಮದ್ಯ ಮಾರಾಟ ನಿಲ್ಲಿಸದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ.”

 -ರಂಗದಾಸ, ಮಾಜಿ ಸದಸ್ಯ,  ಬದನವಾಳು  ಗ್ರಾಪಂ

Tags:
error: Content is protected !!