ಲಕ್ಷ್ಮೀಕಾಂತ್ ಕೊಮಾರಪ್ಪ
ಸೋಮವಾರಪೇಟೆ: ಉತ್ತರ ಕೊಡಗಿನ ಗ್ರಾಮೀಣ ಹಾಗೂ ಅರಣ್ಯದ ಅಂಚಿನ ಪ್ರದೇಶ ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಚಿರತೆಗಳ ಚಲನವಲನ ಹೆಚ್ಚುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಸೋಮವಾರಪೇಟೆ, ಶಾಂತಳ್ಳಿ, ಶನಿವಾರ ಸಂತೆ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಪಶುಸಂಗೋಪನೆ ಮಾಡುವ ರೈತರ ಮೇಲೆ ನೇರ ಪರಿಣಾಮ ಬೀರುತ್ತಿದೆ.
ಬಹುತೇಕ ಚಿರತೆಗಳ ಚಲನ ವಲನ ಮಧ್ಯರಾತ್ರಿ ಹಾಗೂ ಬೆಳಗಿನ ಜಾವ ಕಂಡುಬರುತ್ತಿದ್ದು, ಮನೆಯಲ್ಲಿ ಸಾಕಿದ ನಾಯಿಗಳು ಬೊಗಳಿದ ಬಳಿಕವೇ ಜನರಿಗೆ ಚಿರತೆ ಬಂದಿರುವ ಬಗ್ಗೆ ತಿಳಿಯುತ್ತಿದೆ. ಕೆಲವೆಡೆ ರಸ್ತೆ ದಾಟುತ್ತಿರುವುದು, ಮನೆ ಅಂಗಳದಲ್ಲಿ ಓಡಾಡುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ. ಕುರಿ, ಮೇಕೆ, ನಾಯಿಗಳ ಮೇಲೆ ಚಿರತೆ ದಾಳಿ ಪ್ರಕರಣಗಳು ಹೆಚ್ಚಾಗಿವೆ. ಬೆಳಗಿನ ಜಾವ ಹಾಗೂ ಸಂಜೆ ಸಮಯದಲ್ಲಿ ತೋಟಗಳ ಅಂಚು, ಹಳ್ಳಿಗಳ ಹತ್ತಿರ ಚಿರತೆಗಳು ಸಂಚರಿಸುತ್ತಿದ್ದು, ರೈತರು ಮತ್ತು ಕೂಲಿ ಕಾರ್ಮಿಕರು ಭಯದಿಂದಲೇ ಕೆಲಸಕ್ಕೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ತೋಳೂರು ಶೆಟ್ಟಳ್ಳಿ ಗ್ರಾಮ ಪಂಚಾಯಿತಿವ್ಯಾಪ್ತಿಯ ಕೂತಿ ಗ್ರಾಮ ವಾಂಟ್ಲು ಗದ್ದೆಯ ಎಚ್.ಎ.ಬಸಪ್ಪ ಅವರು ಸಾಕಿದ್ದ ಕುರಿಗಳ ಮೇಲೆ ಬೆಳಗಿನ ಜಾವ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ. ನಾಯಿ ಬೊಗಳುವ ಶಬ್ದ ಕೇಳಿ ಮನೆಯವರು ತಕ್ಷಣ ಸ್ಥಳಕ್ಕೆ ತೆರಳಿದಾಗ ಚಿರತೆ ಕುರಿಯನ್ನು ಬಿಟ್ಟು ಪರಾರಿಯಾಗಿದೆ. ಕುರಿಗಳನ್ನು ಕಟ್ಟಿಹಾಕಿದ್ದರಿಂದಾಗಿ ಮೃತಪಟ್ಟ ಕುರಿಯ ದೇಹವನ್ನು ಹೊತ್ತೊಯ್ಯಲು ಸಾಧ್ಯವಾಗಿಲ್ಲ, ಪಕ್ಕದಲ್ಲೇ ಇದ್ದ ಇನ್ನೊಂದು ಕುರಿಯನ್ನೂ ಚಿರತೆ ಗಾಯಗೊಳಿಸಿದೆ.
ಇನ್ನೊಂದೆಡೆ ಚಿಕ್ಕತೋಳೂರು ಗ್ರಾಮದ ಎಚ್.ಟಿ.ತಮ್ಮಯ್ಯ ಅವರು ಗ್ರಾಮ ಸಮೀಪದ ಬೆಟ್ಟದಲ್ಲಿ ಮೇಯಲು ಬಿಟ್ಟಿದ್ದ ಕುರಿಗಳನ್ನು ಚಿರತೆ ಕೊಂದು ತಿಂದು ಹಾಕಿದೆ. ಸೋಮವಾರಪೇಟೆ ಸಮೀಪದ ಗೆಜ್ಜೆಹಣ ಕೋಡು ಗ್ರಾಮದ ಮನೆಯ ಅಂಗಳದಲ್ಲೇ ಕೆಲ ದಿನಗಳ ಹಿಂದೆ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಸಂಜೆ ೭.೩೦ರ ಸಮಯದಲ್ಲಿ ಗ್ರಾಮದ ಉದಯ ಎಂಬವರ ಮನೆ ಅಂಗಳದಲ್ಲಿ ಚಿರತೆ ಕಾಣಿಸಿ ಕೊಂಡಿದೆ. ಅದನ್ನು ಕಂಡ ಗೃಹಿಣಿ ವಿದ್ಯಾ ಗಾಬರಿಗೊಂಡು ಕೂಗಿಕೊಂಡ ಹಿನ್ನೆಲೆಯಲ್ಲಿ ಚಿರತೆ ಪೊದೆಯೊಳಗೆ ಹೋಗಿದೆ. ಚಿರತೆ ಓಡುವ ಈ ದೃಶ್ಯ ಮನೆಯ ಮುಂಭಾಗದಲ್ಲಿ ಹಾಕಲಾ ಗಿರುವ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕೊಟ್ಟಿಗೆಯಲ್ಲಿದ್ದ ದನಕರುಗಳು, ಸಾಕು ಪ್ರಾಣಿಗಳಿಗೆ ಯಾವುದೇ ತೊಂದರೆ ಯಾಗಿಲ್ಲ. ಕಾರೆಕೊಪ್ಪ ಗ್ರಾಮದಲ್ಲಿ ಚಿರತೆ ನಾಯಿ ಮತ್ತು ಕರುವನ್ನು ಕಚ್ಚಿ ಗಾಯಗೊಳಿಸಿದೆ. ಚಿರತೆ ದಾಳಿ ಸ್ಥಳಕ್ಕೆ ಸೋಮವಾರಪೇಟೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡುತ್ತಿದ್ದು ಪರಿಶೀಲನೆ ನಡೆಸಿದ್ದಾರೆ. ಗೆಜ್ಜೆ ಹಣಕೋಡು ಗ್ರಾಮದ ರಸ್ತೆ ಬದಿಯಲ್ಲಿ ಹಾಗೂ ಬೇಳೂರು ಶ್ರೀ ಮುರುಘಾರಾಜೇಂದ್ರ ಮಠದ ತೋಟದಂಚಿನ ಅರಣ್ಯ ಭಾಗದಲ್ಲಿ ಚಿರತೆ ಸೆರೆಗೆ ಬೋನು ಇರಿಸಲಾಗಿದೆ. ಇದೇ ಚಿರತೆ ಕೋಟೆ ಬೆಟ್ಟ ವ್ಯಾಪ್ತಿಯಲ್ಲೂ ಕಾಣಿಸಿಕೊಂಡಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಕಳೆದ ಒಂದು ತಿಂಗಳಿನಿಂದ ಚಿರತೆ ಕಾಟ ಹೆಚ್ಚಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಿ, ಚಿರತೆಯನ್ನು ಸೆರೆಹಿಡಿಯಲು ಹರಸಾಹಸ ಪಡುತ್ತಿದ್ದಾರೆ.
ಆತಂಕದಲ್ಲಿ ಗ್ರಾಮೀಣ ಭಾಗದ ನಿವಾಸಿಗಳು..!:
ಚಿರತೆ, ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರು ರಾತ್ರಿ ವೇಳೆ ಮನೆಯಿಂದ ಹೊರಬರಲು ಭಯಪಡುವಂತಾಗಿದೆ. ಮಕ್ಕಳನ್ನು ಹೊರಗೆ ಬಿಡಲು ಸಾಧ್ಯವಾಗುತ್ತಿಲ್ಲ. ಜಾನುವಾರುಗಳನ್ನು ಕಾವಲು ಕಾಯುವುದು ಕಷ್ಟವಾಗಿದ್ದು, ನಿತ್ಯ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಚಿರತೆ ಯಾವಾಗ ಎಲ್ಲಿಂದ ಬಂದು ಎರಗುತ್ತದೆ ಎನ್ನುವುದೇ ಗೊತ್ತಾಗುವುದಿಲ್ಲ ಎಂದು ಗ್ರಾಮೀಣ ಭಾಗದ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
” ನಾಯಿ ಬೊಗಳುವ ಶಬ್ದ ಕೇಳಿ ನಾನು ಕೊಟ್ಟಿಗೆಗೆ ಹೋಗುವಷ್ಟರಲ್ಲಿ ಚಿರತೆ ಕುರಿಯನ್ನು ಬಿಟ್ಟು ಪರಾರಿಯಾಯಿತು. ಕುರಿಗಳನ್ನು ಹಗ್ಗದಿಂದ ಕಟ್ಟಿಹಾಕಿದ್ದರಿಂದ ಚಿರತೆಗೆ ಸತ್ತ ಕುರಿಯ ದೇಹವನ್ನು ಹೊತ್ತೊಯ್ಯಲು ಸಾಧ್ಯವಾಗಿಲ್ಲ. ಪಕ್ಕದಲ್ಲೇ ಇದ್ದ ಇನ್ನೊಂದು ಕುರಿಯನ್ನು ಕಚ್ಚಿ ಗಾಯಗೊಳಿಸಿದೆ.”
-ಎಚ್.ಎ.ಬಸಪ್ಪ, ಕೃಷಿಕ, ಕೂತಿ ಗ್ರಾಮ
ಶಾಸಕ ಡಾ.ಮಂಥರ್ ಗೌಡ ಭೇಟಿ;ಪರಿಶೀಲನೆ: ಕೂತಿ ಗ್ರಾಮದ (ವಾಂಟ್ಲು ಗದ್ದೆಯ) ಎಚ್.ಎ.ಬಸಪ್ಪ ಅವರಿಗೆ ಸೇರಿದ ಕುರಿಗಳ ಮೇಲೆ ಚಿರತೆ ದಾಳಿ ನಡೆಸಿದ ಪರಿಣಾಮವಾಗಿ ಎರಡು ಕುರಿಗಳು ಸಾವನ್ನಪ್ಪಿವೆ. ಶಾಸಕ ಡಾ.ಮಂಥರ್ಗೌಡ ಅವರು ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯ ಜತೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ನಿವಾಸಿಗಳಿಂದ ಚಿರತೆ ಉಪಟಳದ ಬಗ್ಗೆ ಮಾಹಿತಿ ಪಡೆದ ಶಾಸಕರು ಒಂದು ವಾರದ ಒಳಗಾಗಿ ಚಿರತೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಗ್ರಾಮಸ್ಥರು ಎಚ್ಚರಕೆಯಿಂದ ಇರುವಂತೆ ತಿಳಿಸಿದ್ದಾರೆ.
” ಗೆಜ್ಜೆ ಹಣಕೋಡು ಗ್ರಾಮದ ರಸ್ತೆ ಬದಿಯಲ್ಲಿ ಹಾಗೂ ಬೇಳೂರು ಶ್ರೀ ಮುರುಘ ರಾಜೇಂದ್ರ ಮಠದ ತೋಟದಂಚಿನ ಅರಣ್ಯ ಭಾಗದಲ್ಲಿ ಚಿರತೆ ಸೆರೆಗೆ ಬೋನು ಇರಿಸಲಾಗಿದೆ. ಕೆಲವೆಡೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಒಂದು ತಿಂಗಳಿನಿಂದ ಒಂದೇ ಚಿರತೆ ಎಲ್ಲೆಡೆ ಸಂಚಾರ ಮಾಡುತ್ತಿದ್ದು, ಕೋಟೆ ಬೆಟ್ಟ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದೆ. ಚಿರತೆ ಸೆರೆಗೆ ಅರಣ್ಯ ಇಲಾಖೆ ಪ್ರಯತ್ನ ಪಡುತ್ತಿದೆ.”
-ಶೈಲೇಂದ್ರ ಕುಮಾರ್, ಆರ್ಎಫ್ಒ, ಸೋಮವಾರಪೇಟೆ



