ಪ್ರತಿ ಸೋಮವಾರ, ಗುರುವಾರ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕಣ್ಣಿನ ತಪಾಸಣೆ ಶಿಬಿರ
ಪ್ರಶಾಂತ್ ಎಸ್.
ಮೈಸೂರು: ದೃಷ್ಟಿದೋಷ ಇರುವವರಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗಬೇಕೆಂಬ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಂಚಾರಿ ನೇತ್ರಾ ಚಿಕಿತ್ಸಾ ಘಟಕದ ಮೂಲಕ ಚಿಕಿತ್ಸೆ ನೀಡುತ್ತಿದ್ದು, ರಾಷ್ಟ್ರೀಯ ಅಂಧತ್ವ ನಿಯಂತ್ರಣಾ ಕಾರ್ಯಕ್ರಮದಡಿ ಈ ಸೇವೆಯನ್ನು ಆರಂಭಿಸಲಾಗಿದೆ.
ರಾಜ್ಯ ಮಟ್ಟದಲ್ಲಿ ಈ ಯೋಜನೆಯನ್ನು ಆರಂಭಿಸಿದ್ದು, ಮೈಸೂರು ಜಿಲ್ಲೆಗೆ ಒಂದು ಸಂಚಾರಿ ನೇತ್ರ ಚಿಕಿತ್ಸಾ ಘಟಕದ ವಾಹನವನ್ನು ನೀಡಲಾಗಿದೆ. ನೇತ್ರ ಚಿಕಿತ್ಸಾ ಪರಿ ಕರಗಳನ್ನು ಹೊತ್ತ ಈ ವಾಹನದಲ್ಲಿ ನೇತ್ರತಜ್ಞರು, ನೇತ್ರಾಧಿಕಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸೇರಿದಂತೆ ಐವರ ತಂಡ ಇರುತ್ತದೆ. ಈ ತಂಡ ನಗರ ಹಾಗೂ ಜಿಲ್ಲೆಯ ವ್ಯಾಪ್ತಿಯಲ್ಲಿರುವ ೯ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ದೂರದ ಗ್ರಾಮಗಳಿಗೆ ತೆರಳಿ ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರವನ್ನು ನಡೆಸುತ್ತದೆ.
ಶಿಬಿರ ನಡೆಸುವ ಬಗೆ: ತಿಂಗಳ ಪ್ರತಿ ಸೋಮವಾರ, ಗುರುವಾರದಂದು ಕಣ್ಣಿನ ತಪಾಸಣೆ ಶಿಬಿರ ನಡೆಯುತ್ತದೆ. ಈ ಹಿಂದೆ ತಿಂಗಳಲ್ಲಿ ೩- ೪ ಶಿಬಿರಗಳನ್ನು ಆಯೋಜಿಸಲಾಗು ತ್ತಿತ್ತು. ಸಂಚಾರಿ ಘಟಕ ಇರುವ ಕಾರಣ ೧೦ -೧೨ ಶಿಬಿರಗಳನ್ನು ನಡೆಸಲು ಅನುಕೂಲವಾಗುತ್ತಿದೆ.
ಶಿಬಿರದಲ್ಲಿ ಕಣ್ಣಿನ ಪೊರೆ ಇನ್ನಿತರ ಸಮಸ್ಯೆಗಳು ಕಂಡುಬಂದ ರೋಗಿಗಳನ್ನು ಆಯಾ ತಾಲ್ಲೂಕಿನ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗೆ ಕರೆತಂದು ಶಸ್ತ್ರಚಿಕಿತ್ಸೆಯನ್ನು ನಡೆಸಿ, ನಂತರ ಆ ರೋಗಿಗಳನ್ನು ಇದೇ ಸಂಚಾರಿ ವಾಹನದ ಮೂಲಕ ಕರೆದೊಯ್ದು ಅವರ ಸ್ವಗ್ರಾಮಗಳಿಗೆ ತಲುಪಿಸಲಾಗುತ್ತದೆ.
ಶಿಬಿರದಲ್ಲಿ ನೇತ್ರ ತಪಾಸಣೆಗೆ ಒಳಗಾದವರಲ್ಲಿ ಮಾಲಗಣ್ಣು, ನರದೋಷ, ಡಯಾಬಿಟಿಸ್ನಿಂದ ಬರುವ ತೊಂದರೆಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವ ಸಲು ವಾಗಿ ಜಿಲ್ಲಾ ಮಟ್ಟದ ಆಸತ್ರೆಗೆ ಶಿಫಾರಸ್ಸು ಮಾಡಲಾಗುತ್ತದೆ.
ಯಾವ ವಾರ ಎಲ್ಲಿ ಶಿಬಿರ?
ಮೊದಲನೇ ಸೋಮವಾರ ಸಮುದಾಯ ಆರೋಗ್ಯ ಕೇಂದ್ರ ಜಯನಗರ, ಮೈಸೂರು ಮೊದಲನೇ ಗುರುವಾರ ಸಮುದಾಯ ಆರೋಗ್ಯ ಕೇಂದ್ರ ಜಯಪುರ, ಮೈಸೂರು ತಾಲ್ಲೂಕು, ೨ನೇ ಸೋಮವಾರ ಸಮುದಾಯ ಆರೋಗ್ಯ ಕೇಂದ್ರ ತಗಡೂರು ನಂಜನಗೂಡು ತಾಲ್ಲೂಕು, ಎರಡನೇ ಗುರುವಾರ ಸಮುದಾಯ ಆರೋಗ್ಯ ಕೇಂದ್ರ ಹುಲ್ಲಹಳ್ಳಿ ನಂಜನಗೂಡು ತಾಲ್ಲೂಕು, ೩ನೇ ಸೋಮವಾರ ಸಮುದಾಯ ಆರೋಗ್ಯ ಕೇಂದ್ರ ತಲಕಾಡು ಮೂಗೂರು-ತಿ. ನರಸೀಪುರ ತಾಲ್ಲೂಕು, ಮೂರನೇ ಗುರುವಾರ ಆರೋಗ್ಯ ಕೇಂದ್ರ ಬನ್ನೂರು, ತಿ. ನರಸೀಪುರ ತಾಲ್ಲೂಕು, ೪ನೇ ಸೋಮವಾರ ಸಮುದಾಯ ಆರೋಗ್ಯ ಕೇಂದ್ರ ಸಾಲಿಗ್ರಾಮ, ಕೆ. ಆರ್. ನಗರ ತಾಲ್ಲೂಕು, ೪ನೇ ಗುರುವಾರ ಸಮುದಾಯ ಆರೋಗ್ಯ ಕೇಂದ್ರ ಸರಗೂರು, ಎಚ್. ಡಿ. ಕೋಟೆ ತಾಲ್ಲೂಕು.