Mysore
27
few clouds

Social Media

ಶುಕ್ರವಾರ, 13 ಫೆಬ್ರವರಿ 2026
Light
Dark

ಕೆ. ಆರ್. ನಗರ | ಇಂದು ಗಂಧನಹಳ್ಳಿಯಲ್ಲಿ ಹುಣಸಮ್ಮ ದೇವಿ ರಥೋತ್ಸವ

ಜಾತ್ರೆಗೆ ಇಡೀ ಗ್ರಾಮ ಸಜ್ಜು ; ರಥ, ಪ್ರಮುಖ ಬೀದಿಗಳಿಗೆ ಸಿಂಗಾರ
ಭೇರ್ಯ ಮಹೇಶ್

ಕೆ. ಆರ್. ನಗರ: ತಾಲ್ಲೂಕಿನ ಗಂಧನಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಹುಣಸಮ್ಮ ದೇವಿಯ ರಥೋತ್ಸವ ಶುಕ್ರವಾರ ರಾತ್ರಿ ೯ ಗಂಟೆಗೆ ಜರುಗಲಿದ್ದು, ದೇವಿಯ ರಥೋತ್ಸವಕ್ಕೆ ಇಡೀ ಗ್ರಾಮವೇ ಸಕಲ ಸಿದ್ಧತೆಗಳೊಂದಿಗೆ ಸಜ್ಜುಗೊಂಡಿದೆ.

ಈಗಾಗಲೇ ರಥವನ್ನು ವಿವಿಧ ಬಗೆಯ ಬಣ್ಣಗಳಿಂದ ಅಲಂಕರಿಸಲಾಗಿದ್ದು, ನೋಡುಗರ ಕಣ್ಮನ ಸೆಳೆಯುವಂತೆ ಮಾಡಲಾಗಿದೆ. ಈ ರಥೋತ್ಸವವನ್ನು ಜನಪದ ಹಾಗೂ ಗ್ರಾಮೀಣ ಶೈಲಿಯಲ್ಲಿ ಆಚರಣೆ ಮಾಡಲಾಗುತ್ತಿದೆ.

ರಥೋತ್ಸವದ ಅಂಗವಾಗಿ ಗ್ರಾಮವನ್ನು ತಳಿರು-ತೋರಣ, ತೆಂಗಿನ ಗರಿ, ಅಡಕೆ ಹೊಂಬಾಳೆಯಿಂದ ಸಿಂಗಾರಗೊಳಿಸಲಾಗಿದೆ. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಶುಕ್ರವಾರ ಬೆಳಿಗ್ಗೆ ೯ ಗಂಟೆಗೆ ಕಪ್ಪಡಿ ಕ್ಷೇತ್ರದ ಕಾವೇರಿ ನದಿಯ ದಡದಲ್ಲಿ ಹುಣಸಮ್ಮ ದೇವಿಗೆ ಪೂಜಾ
ಕೈಂಕರ್ಯ ನೆರವೇರಿಸಿ ನಂತರ ಮಂಗಳವಾದ್ಯ ಸಮೇತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೂವಿನ ಪಲ್ಲಕ್ಕಿಯ ಮೆರವಣಿಗೆ ಮೂಲಕ ದೇವಾಲಯಕ್ಕೆ ಕರೆತರಲಾಗುವುದು. ನಂತರ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಿಸಲಾಗುತ್ತದೆ ಎಂದು ಗ್ರಾಮದ ಯಜಮಾನ ರಘು ‘ಆಂದೋಲನ’ಕ್ಕೆ ತಿಳಿಸಿದರು.

ಸಂಜೆ ೬ ಗಂಟೆಗೆ ದೇವಾಲಯದಿಂದ ಹುಣಸಮ್ಮ ದೇವಿಯ ಉತ್ಸವಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ರಥವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಎಳೆಯಲಾಗುವುದು. ಗ್ರಾಮದ ಮುತ್ತೈದೆಯರು ಹಾಗೂ ಹೆಣ್ಣು ಮಕ್ಕಳು ತಂಬಿಟ್ಟು ಆರತಿ ಯೊಂದಿಗೆ ರಥಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ ಮೆರವಣಿಗೆಯಲ್ಲಿ ಸಾಗುವರು. ರಥದಲ್ಲಿ ಪ್ರತಿಷ್ಠಾಪಿಸಿರುವ ಹುಣಸಮ್ಮ ದೇವಿಗೆ ಹಣ್ಣು-ಜವನ ಎಸೆಯುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳುವರು. ರಥೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಆಗಮಿಸುವರು.

ಪೌರಾಣಿಕ ನಾಟಕ: ಹಬ್ಬದ ಹಿನ್ನೆಲೆಯಲ್ಲಿ ಗ್ರಾಮದ ಶ್ರೀ ಬೀರೇಶ್ವರ ಕೃಪಾ ಪೋಷಿತ ನಾಟಕ ಮಂಡಳಿಯಿಂದ ರಾತ್ರಿ ೮ ಗಂಟೆಗೆ ಶ್ರೀ ಶನಿ ಪ್ರಭಾವ ಅಥವಾ ರಾಜ ವಿಕ್ರಮ ವಿಜಯ ಎಂಬ ಪೌರಾಣಿಕ ನಾಟಕದ ಪ್ರದರ್ಶನ ನಡೆಯಲಿದೆ.

 

Tags:
error: Content is protected !!