Mysore
25
broken clouds

Social Media

ಭಾನುವಾರ, 29 ಮಾರ್ಚ್ 2026
Light
Dark

ಗಣಗೂರು ವ್ಯಾಪ್ತಿಯಲ್ಲಿ ಹೆಚ್ಚಿದ ಕಾಡಾನೆಗಳ ಹಾವಳಿ  

ಲಕ್ಷ್ಮೀಕಾಂತ್ ಕೋಮಾರಪ್ಪ

ಫಸಲು ನಾಶ, ಕಂಗಾಲಾದ ಕೃಷಿಕರು; ಸೂಕ್ತ ಕ್ರಮಕ್ಕೆ ಬೆಳೆಗಾರರ ಒತ್ತಾಯ

ಸೋಮವಾರಪೇಟೆ: ತಾಲ್ಲೂಕಿನ ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯಿಂದ ಕೃಷಿಕರು ಕಂಗಾಲಾಗಿದ್ದು, ಅರಣ್ಯ ಇಲಾಖೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಹವಾಮಾನ ವೈಪರೀತ್ಯ, ಕಾರ್ಮಿಕರ ಕೊರತೆ, ದರ ಕುಸಿತದಂತಹ ಹತ್ತಾರು ಸಮಸ್ಯೆಗಳ ನಡುವೆ ಕೃಷಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿವಿಧ ಸಮಸ್ಯೆಗಳ ನಡುವೆಯೂ ಬೆವರು ಸುರಿಸಿ ಕೃಷಿ ಮಾಡುತ್ತಿರುವ ಬೆಳೆಗಾರರು, ವನ್ಯಮೃಗಗಳ ದಾಳಿಯಿಂದ ಫಸಲು ಕಳೆದುಕೊಳ್ಳುತ್ತಿದ್ದಾರೆ.

ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣಗೂರು, ಯರಪಾರೆ, ಬಾಣಾವಾರ, ಗೋಣಿಮರೂರು ಗ್ರಾಮಗಳ ಕೃಷಿ ಭೂಮಿಗೆ ಪ್ರತಿನಿತ್ಯ ಕಾಡಾನೆಗಳು ದಾಳಿ ಇಡುತ್ತಿವೆ. ಯರಪಾರೆ ಗ್ರಾಮದ ಗಣೇಶ್ ಎಂಬವರ ಜೋಳದ ಫಸಲನ್ನು ತಿಂದು ಹಾಕಿವೆ. ರೈತ ರಮೇಶ್ ಎಂಬವರಿಗೆ ಸೇರಿದ ತೆಂಗಿನ ಗಿಡಗಳನ್ನು ಮುರಿದು, ತಿಂದು, ತುಳಿದು ನಾಶ ಪಡಿಸಿವೆ. ಹೀಗೆ ಪ್ರತಿನಿತ್ಯ ಕಾಡಾನೆಗಳು ಲಗ್ಗೆ ಇಡುತ್ತಿವೆ ಎಂದು ಕೃಷಿಕರು ಅಳಲು ತೋಡಿಕೊಂಡಿದ್ದಾರೆ. ಈ ವ್ಯಾಪ್ತಿಯಲ್ಲಿ ಆನೆ ಕಂದಕಗಳನ್ನು ದುರಸ್ತಿ ಮಾಡದಿರುವುದರಿಂದ ಕಾಡಾನೆಗಳು ಸುಲಭವಾಗಿ ರೈತರ ತೋಟಕ್ಕೆ ಲಗ್ಗೆ ಇಡುತ್ತಿವೆ. ಜೊತೆಗೆ ಸೋಲಾರ್ ತಂತಿ ಬೇಲಿಗಳ ದುರಸ್ತಿ ಕಾರ್ಯವೂ ಸಮರ್ಪಕವಾಗಿ ನಡೆಯುತ್ತಿಲ್ಲ.

ಈ ಎಲ್ಲಾ ಕಾರಣಗಳಿಂದ ಈ ವ್ಯಾಪ್ತಿಯ  ಗ್ರಾಮಸ್ಥರು ಬೆಳೆಯನ್ನೂ ಕಳೆದುಕೊಂಡು, ಜೀವಭಯದಲ್ಲಿ ದಿನಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯ ಬೆಳೆಗಾರರು ದೂರಿದ್ದಾರೆ. ಕಾಡಾನೆಗಳನ್ನು ಕಾಡಿಗಟ್ಟಿದರೆ ಮತ್ತೆ ನಾಡಿನತ್ತ ಬಂದು ಸಮಸ್ಯೆ ಸೃಷ್ಟಿಸುತ್ತಿವೆ. ಹೀಗಾಗಿ ಕಾಡಾನೆಗಳು ನಾಡಿಗೆ ಬಾರದಂತೆ ತಡೆಯಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.

ಅಗತ್ಯವಿರುವೆಡೆ ಸೋಲಾರ್ ತಂತಿಬೇಲಿ ಅಳವಡಿಸುವ ಕಾರ್ಯ ಮಾಡಬೇಕು. ಕಾಡಾನೆ ಕಂದಕಗಳನ್ನು ದುರಸ್ತಿ ಪಡಿಸಬೇಕು. ಹೆಚ್ಚು ಸಮಸ್ಯೆ ಸೃಷ್ಟಿಸುತ್ತಿರುವ ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡಬೇಕೆಂದು ಬೆಳೆಗಾರರು ಆಗ್ರಹಿಸಿದ್ದಾರೆ.

” ಈಗಾಗಲೇ ಬಾಣಾವರ ಅರಣ್ಯ ವ್ಯಾಪ್ತಿಯಲ್ಲಿ ಸೋಲಾರ್ ತಂತಿ ಬೇಲಿ ಅಳವಡಿಸಲಾಗಿದೆ. ಕಾಡಾನೆಗಳ ಚಲನವಲನ ತಿಳಿಯಲು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಟಾಸ್ಕ್ ಪೋರ್ಸ್ ಕೂಡ ಇದ್ದು, ಕಾಡಾನೆಗಳು ಗ್ರಾಮಗಳತ್ತ ಬಾರದಂತೆ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.”

-ಶೈಲೆಂದ್ರ ಕುಮಾರ್, ಆರ್‌ಎಫ್‌ಒ, ಸೋಮವಾರಪೇಟೆ

” ಕಾಡಾನೆ ಹಾವಳಿಯಿಂದ ಕೃಷಿ ಫಸಲನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮಗೆ ಪರಿಹಾರವೂ ಬೇಡ. ಒಂದೆರಡು ಸಾವಿರ ರೂಪಾಯಿ ಪರಿಹಾರದಿಂದ ಕುಟುಂಬ ನಡೆಸಲು ಸಾಧ್ಯವಿಲ್ಲ. ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು. ಯರಪಾರೆಯಲ್ಲಿ ಒಂದೆರಡು ಕಿ.ಮೀ.ನಷ್ಟು ಸೋಲಾರ್ ತಂತಿಬೇಲಿ ಅಳವಡಿಸಬೇಕು.”

-ರೇವಣ್ಣ, ಕೃಷಿಕರು, ಗಣಗೂರು

” ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕೃಷಿ ಫಸಲು ಹಾನಿಗೊಳಗಾಗುತ್ತಿದೆ. ಕಾಡಾನೆಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಕಾಡಾನೆ ಕಂದಕಗಳನ್ನು ದುರಸ್ತಿ ಪಡಿಸಬೇಕು. ಸೋಲಾರ್ ತಂತಿಬೇಲಿ ನಿರ್ವಹಣೆ ಮಾಡಬೇಕು. ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸಿ ತೆರಳಿದರೆ, ಕಾಡಾನೆ ಹಾವಳಿ ನಿಯಂತ್ರಣ ಸಾಧ್ಯವಾಗುವುದಿಲ್ಲ.”

-ಹರೀಶ್, ರೈತ, ಗಣಗೂರು

 

 

Tags:
error: Content is protected !!