Mysore
23
mist

Social Media

ಮಂಗಳವಾರ, 10 ಮಾರ್ಚ್ 2026
Light
Dark

ರಾಗಿ ಖರೀದಿ ಕೇಂದ್ರದಲ್ಲಿ ಹೆಚ್ಚುತ್ತಿರುವ ಅಕ್ರಮ: ಆರೋಪ

ನವೀನ್ ಕುಮಾರ್

ಕ್ವಿಂಟಾಲ್ ರಾಗಿಗೆ ೪ ಕೆಜಿ ಕಳೆಯುತ್ತಿರುವುದರಿಂದ ನಷ್ಟ ಎಂಬುದು ರೈತರ ಅಳಲು

ಪಿರಿಯಾಪಟ್ಟಣ: ರಾಗಿ ಖರೀದಿ ಕೇಂದ್ರಗಳಲ್ಲಿ ಅಕ್ರಮ ನಡೆಯುತ್ತಿದೆ. ಪ್ರತಿ ಕ್ವಿಂಟಾಲ್ ರಾಗಿಗೆ ೪ ಕೆಜಿ ಕಳೆಯುತ್ತಿದ್ದು, ರೈತರಿಗೆ ನಷ್ಟವಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಒಟ್ಟು ನಾಲ್ಕು ಕಡೆಗಳಲ್ಲಿ ಸರ್ಕಾರ ರಾಗಿ ಖರೀದಿ ಕೇಂದ್ರ ಗಳನ್ನು ತೆರೆದಿದೆ. ಸರ್ಕಾರದಿಂದ ಒಂದು ಕ್ವಿಂಟಾಲ್ ರಾಗಿಗೆ ೪,೮೮೬ ರೂ. ಸಹಾಯಧನದಡಿ ರಾಗಿ ಖರೀದಿ ಮಾಡಲಾಗುತ್ತದೆ.

ಸಾವಿರಾರು ಕ್ವಿಂಟಾಲ್ ಖರೀದಿ: ಬೆಟ್ಟದಪುರ ರಾಗಿ ಖರೀದಿ ಕೇಂದ್ರದಲ್ಲಿ ೯೨ ಸಾವಿರ ಕೆಜಿ ಮಾರಾಟ ನಿರೀಕ್ಷೆಯಲ್ಲಿ, ಈಗ ೧೫ ಸಾವಿರ ಕ್ವಿಂಟಾಲ್ ಖರೀದಿಯಾಗಿದೆ. ಪಿರಿಯಾಪಟ್ಟಣದಲ್ಲಿ ೮೬ ಸಾವಿರ ಕ್ವಿಂಟಾಲ್ ನಿರೀಕ್ಷೆಯಲ್ಲಿ, ೧೫ ಸಾವಿರ ಕ್ವಿಂಟಾಲ್ ಖರೀದಿ ಮಾಡಲಾಗಿದೆ. ಹಾರನಹಳ್ಳಿ ಕೇಂದ್ರದಲ್ಲಿ ೪೯ ಸಾವಿರ ಕ್ವಿಂಟಾಲ್ ನಿರೀಕ್ಷೆಯಲ್ಲಿ, ೧೮ ಸಾವಿರ ಕ್ವಿಂಟಾಲ್ ಖರೀದಿಸಲಾಗಿದೆ. ರಾವಂ ದೂರಿನಲ್ಲಿ ೮೮ ಸಾವಿರ ಕ್ವಿಂಟಾಲ್ ನಿರೀಕ್ಷೆಯಲ್ಲಿ, ೧೬ ಸಾವಿರ ಕ್ವಿಂಟಾಲ್ ಖರೀದಿ ಮಾಡಲಾಗಿದೆ.

ಗಲಾಟೆ: ಕೆಲದಿನಗಳ ಹಿಂದೆ ಪಿರಿಯಾಪಟ್ಟಣ ಖರೀದಿ ಕೇಂದ್ರದಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತಹಸಿಲ್ದಾರ್ ನಿಸರ್ಗಪ್ರಿಯ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಆದರೆ ಉಳಿದ ಖರೀದಿ ಕೇಂದ್ರಗಳಲ್ಲಿ ಯಥಾಸ್ಥಿತಿ ಮುಂದುವರಿದಿದ್ದು ತೂಕ, ಖರೀದಿ ಎಲ್ಲದರಲ್ಲಿಯೂ ರೈತರಿಗೆ ವಂಚನೆಯಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

೪ ಕೆಜಿ ಕಳೆಯುತ್ತಿದ್ದಾರೆ: ಪ್ರತಿ ಕ್ವಿಂಟಾಲ್‌ಗೆ ರೈತರಿಂದ ೧ರಿಂದ ೨ ಕೆ.ಜಿ.ಯಷ್ಟೇ ಕಳೆಯಬೇಕು ಎಂಬ ನಿಯಮವಿದ್ದರೂ ಪ್ರತಿ ಕ್ವಿಂಟಾಲ್‌ರಾಗಿಯಲ್ಲಿ ೪ ಕೆ.ಜಿ.ಗೂ ಅಧಿಕ ರಾಗಿ ಕಳೆಯಲಾಗುತ್ತಿದ್ದು, ಇದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ.

ಒಬ್ಬರೇ ಖರೀದಿ ಅಧಿಕಾರಿ: ಈ ಹಿಂದೆ ಕೆಎಫ್‌ಐಸಿ ವತಿಯಿಂದ ರಾಗಿ ಖರೀದಿ ನಡೆಯುತ್ತಿತ್ತು. ಇದರ ಅಧಿಕಾರಿಗಳೇ ಖರೀದಿಗೆ ಬರುತ್ತಿದ್ದರು. ಆದರೆ ಈ ಬಾರಿ ಆಹಾರ ಇಲಾಖೆಯ ಅಧಿಕಾರಿಗಳೇ ಖರೀದಿ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಶಿಫಾರಸು ಮಾಡಿಸುತ್ತಿದ್ದಾರೆ ಎಂಬ ದೂರು ಕೇಳಿಬಂದಿದೆ.

ಪ್ರತಿ ಖರೀದಿ ಕೇಂದ್ರದಲ್ಲಿಯೂ ಗುಣಮಟ್ಟ ತಪಾಸಣೆ ಮತ್ತು ನಿರ್ವಹಣೆಗೆ ಖರೀದಿ ಅಧಿಕಾರಿಗಳನ್ನು ನೇಮಿಸಬೇಕೆಂಬ ನಿಯಮವಿದ್ದರೂ ಬೆಟ್ಟದಪುರ ಮತ್ತು ಹಾರನಹಳ್ಳಿ ಖರೀದಿ ಕೇಂದ್ರಕ್ಕೆ ಸಿ.ಮಂಜುನಾಥ್ ಎಂಬ ಒಬ್ಬರೇ ಅಧಿಕಾರಿಯನ್ನು ನೇಮಿಸಿದ್ದಾರೆ. ಇವರು ಕೆಲ ಸಂಬಂಧಿಗಳಿಂದ ಬಿಲ್ ಮಾಡಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಖರೀದಿ ಅಧಿಕಾರಿಯೇ ಇಲ್ಲದೆ ಖರೀದಿ ನಡೆಯುತ್ತಿದೆ.

ಲಾರಿಗಳು ಬರುತ್ತಿಲ್ಲ: ಹಾರನಹಳ್ಳಿ, ಬೆಟ್ಟದಪುರ, ರಾವಂದೂರು ಕೇಂದ್ರಗಳು ಪಿರಿಯಾಪಟ್ಟಣ ವೇರ್‌ಹೌಸ್‌ನಿಂದ ದೂರವಿದ್ದು ಲಾರಿಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಇದರಿಂದ ರಾಗಿ ಖರೀದಿಯಲ್ಲಿ ವಿಳಂಬವಾಗುತ್ತಿದ್ದು, ರೈತರು ತೊಂದರೆ ಅನುಭವಿಸುವಂತಾಗಿದೆ.

ಮಧ್ಯವರ್ತಿಗಳ ಹಾವಳಿ: ಪ್ರತಿ ಕೇಂದ್ರದಲ್ಲಿಯೂ ರೈತರಿಗಿಂತ ಮಧ್ಯವರ್ತಿಗಳ ಹಾವಳಿಯೇ ಹೆಚ್ಚಾಗಿದೆ. ಕೆಲ ಟ್ರೇಡರ್‌ಗಳೇ ಬಿಲ್ ಹರಿಯುತ್ತಿರುವುದು ಮತ್ತು ಅಧಿಕಾರಿಗಳ ಸಂಬಂಧಿಕರು ಕಾರ್ಯನಿರ್ವಹಿಸುತ್ತಿರುವುದೂ ಸೇರಿದಂತೆ ರೈತರು ತಂದ ರಾಗಿಯನ್ನು ಖರೀದಿ ಮಾಡುವ ಬದಲು ಟ್ರೇಡರ್‌ಗಳು ಇತರರ ಹೆಸರಿನಲ್ಲಿ ನೋಂದಣಿ ಮಾಡಿದ ರಾಗಿಗೆ ಮೊದಲ ಆದ್ಯತೆ ನೀಡುವುದು, ತೂಕದಲ್ಲಿ ವಂಚನೆ, ಖರೀದಿ ಕೇಂದ್ರದಲ್ಲಿ ಬಂದ ರೈತರಿಗೆ ಕೂರಲು ಸ್ಥಳವಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಹೀಗೆ ಖರೀದಿ ಕೇಂದ್ರಗಳಲ್ಲಿ ರೈತರಿಗೆ ತೊಂದರೆ ಉಂಟಾಗುತ್ತಿದೆ. ತೂಕದಲ್ಲಿ ವ್ಯತ್ಯಾಸವಾಗುತ್ತಿರುವುದರಿಂದ ಖುದ್ದು ತಹಸಿಲ್ದಾರ್ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಎಲ್ಲಾ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ರೈತರಿಗೆ ಆಗುತ್ತಿರುವ ವಂಚನೆಯನ್ನು ತಪ್ಪಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

” ದೂರು ಕೇಳಿಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ನಿರ್ದೇಶನ ನೀಡಲಾಗಿದೆ. ಕಳಪೆ ರಾಗಿ ಬಂದರೆ ತಿರಸ್ಕಾರ ಮಾಡಿ. ಅದು ಬಿಟ್ಟು ಹೆಚ್ಚಿಗೆ ತೂಕ ಕಳೆಯುವಂತಿಲ್ಲ ಎಂದು ಸೂಚನೆ ನೀಡಿದ್ದೇನೆ. ಬೆಟ್ಟದಪುರದ ಲಾರಿ ತೊಂದರೆ ಬಗೆಹರಿಸಲಾಗಿದೆ. ಅಧಿಕಾರಿಗಳು ಅಕ್ರಮ ಎಸಗಿದರೆ ಜಿಲ್ಲಾಧಿಕಾರಿಗಳಿಗೆ ವರದಿ ಮಾಡಲಾಗುವುದು. ಆಗಾಗ್ಗೆ ದಿಢೀರ್ ಭೇಟಿ ನೀಡಿ ರೈತರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಲಾಗುವುದು.”

-ನಿಸರ್ಗಪ್ರಿಯ, ತಹಸಿಲ್ದಾರ್

 

 

Tags:
error: Content is protected !!