Mysore
21
scattered clouds

Social Media

ಶನಿವಾರ, 14 ಮಾರ್ಚ್ 2026
Light
Dark

ಎಲ್ಲೆಂದರಲ್ಲಿ ಕಸ ಸುರಿದರೆ ಬೀಳಲಿದೆ ದಂಡ!

ಪುರಸಭೆಯಿಂದ ಹಲವು ಕಡೆಗಳಲ್ಲಿ ಸಿಸಿಟಿವಿ ಅಳವಡಿಕೆ; ಸ್ವಚ್ಛ ಪಟ್ಟಣಕ್ಕೆ ಸಹಕರಿಸಲು ಮನವಿ

ಗುಂಡ್ಲುಪೇಟೆ: ಪಟ್ಟಣದ ಕೆಲವೆಡೆ ಕಸ ಸುರಿಯದಂತೆ ಎಚ್ಚರಿಕೆ ವಹಿಸಲು ಸಿಸಿಟಿವಿ ಅಳವಡಿಸುವಂತೆ ಪುರಸಭೆಯ ಆಡಳಿತ ಅಧಿಕಾರಿಯಾದ ಕೊಳ್ಳೇಗಾಲ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಅವರು ನೀಡಿರುವ ಆದೇಶದ ಮೇರೆಗೆ ಪುರಸಭೆಯಿಂದ ಸಿಸಿ ಟಿವಿ ಅಳವಡಿಸಲಾಗುತ್ತಿದೆ.

ಪಟ್ಟಣದ ಕೆಇಬಿ ರಸ್ತೆ, ಶಿವಾನಂದ ವೃತ್ತ, ಪುರಸಭೆ ಕಚೇರಿ ಮುಂಭಾಗ, ನಾಯಕರ ಬೀದಿ, ಮದ್ದಾನೇಶ್ವರ ಶಾಲೆ ರಸ್ತೆ, ಅಂಬೇಡ್ಕರ್ ವೃತ್ತದ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕಾರ್ಯ ನಡೆಯುತ್ತಿದ್ದು ಎಲ್ಲೆಂದರಲ್ಲಿ ಕಸ ಹಾಕಿದರೆ ದಂಡ ಹಾಕಲಾಗುತ್ತದೆ.

ಸ್ವಚ್ಛ ಸರ್ವೇಕ್ಷಣೆ ಪ್ರಾರಂಭವಾಗುತ್ತಿದ್ದು, ಭಾರತಾದ್ಯಂತ ನಗರಸಭೆ, ಸ್ಥಳೀಯ ಸಂಸ್ಥೆಗಳು ಸ್ವಚ್ಛತೆಯಿಂದ ಕೂಡಿರುವ ಕುರಿತು ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಪ್ರತಿಯೊಂದು ನಗರಸಭೆಯೂ ಮನೆ ಮನೆ ಕಸ ಸಂಗ್ರಹಣೆ, ಕಸ ವಿಲೇವಾರಿ, ಸಾರ್ವಜನಿಕ ಸಮುದಾಯ ಶೌಚಾಲಯ ಬಳಕೆ ಮತ್ತು ಸ್ವಚ್ಛತೆ, ಹಸಿ ಕಸದಿಂದ ಗೊಬ್ಬರವನ್ನು ಮಾಡುತ್ತಿರುವುದು, ಪ್ಲಾಸ್ಟಿಕ್ ಚೀಲ ನಿಷೇಧ, ಪ್ರತಿದಿನ ವಾಣಿಜ್ಯ ಬೀದಿಗಳಲ್ಲಿ ಕಸ ಗುಡಿಸುವುದು, ಸಾರ್ವಜನಿಕರು ಕಸ ವಿಲೇವಾರಿಯಲ್ಲಿ ಸಹಭಾಗಿತ್ವ ನೀಡುತ್ತಿರುವುದು, ಪಟ್ಟಣದ ಸೌಂದರ್ಯ ಹೆಚ್ಚಿಸುವುದು, ಮಳೆನೀರು ಚರಂಡಿ ಸ್ವಚ್ಛತೆ, ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ, ಅವರಿಗೆ ಸಂಬಂಧಿಸಿದ ಅಗತ್ಯ ಸೇವೆಗಳನ್ನು ನೀಡುವುದು ಈ ಎಲ್ಲ ವಿಷಯಗಳ ಬಗ್ಗೆ ಪರಿಶೀಲಿಸಿ ಶ್ರೇಯಾಂಕ ನೀಡಲಾಗುತ್ತದೆ. ಈ ಆಧಾರದ ಮೇರೆಗೆ ಗುಂಡ್ಲುಪೇಟೆ ಪಟ್ಟಣವನ್ನು ಸ್ವಚ್ಛ ಪಟ್ಟಣ ಎಂದು ಕೇಂದ್ರ ಸರ್ಕಾರದಿಂದ ಪ್ರಮಾಣೀಕರಿಸಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.

” ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕರು ಸ್ವಚ್ಛ ಸರ್ವೇಕ್ಷಣೆ ೨೦೨೬ರಲ್ಲಿ ಭಾಗವಹಿಸಿ ಗುಂಡ್ಲುಪೇಟೆ ಪುರಸಭೆ ನೀಡುವ ನಿರ್ದೇಶನವನ್ನು ಪಾಲಿಸಿ ಸ್ವಚ್ಛ ಪಟ್ಟಣ ಬಿರುದು ಬರಲು ಸಹಕರಿಸಬೇಕು.”

ಸರವಣ, ಮುಖ್ಯಾಧಿಕಾರಿ, ಪುರಸಭೆ

 

 

Tags:
error: Content is protected !!