ರೈತರು, ಕಾಡುಪ್ರಾಣಿಗಳಿಗೆ ನೀರಿನ ತೊಂದರೆ ; ಶೀಘ್ರದಲ್ಲಿ ಹೂಳು ತೆಗೆಸಲು ಆಗ್ರಹ
ಹನೂರು : ಉಡುತೊರೆ ಹಳ್ಳ ಜಲಾಶಯ ನಿರ್ಮಾಣವಾದ ದಿನದಿಂದಲೂ ಹೂಳು ತೆಗೆಸದೇ ಇರುವುದರಿಂದ ರೈತರು ಹಾಗೂ ಕಾಡು ಪ್ರಾಣಿಗಳಿಗೆ ನೀರಿಗೆ ತೊಂದರೆ ಉಂಟಾಗಿದೆ. ಸಂಬಂಧಪಟ್ಟ ನೀರಾವರಿ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ವಹಿಸಿ ಹೂಳು ತೆಗೆಸಬೇಕು ಎಂದು ರೈತ ಮುಖಂಡರು ಮನವಿ ಮಾಡಿದ್ದಾರೆ.
ತಾಲ್ಲೂಕಿನ ಅಜ್ಜೀಪುರ ಸಮೀಪದ ಉಡುತೊರೆ ಹಳ್ಳ ಜಲಾಶಯ ನಿರ್ಮಾಣವಾಗಿ ಸಾಕಷ್ಟು ವರ್ಷಗಳೇ ಕಳೆದರೂ ಇಲ್ಲಿಯವರೆಗೂ ಯಾವುದೇ ಅಭಿವೃದ್ಧಿಯಾಗಲಿ ಅಥವಾ ಹೂಳು ತೆಗೆಸುವ ಕಾರ್ಯವಾಗಲಿ ಆಗಿಲ್ಲ. ರಾಮನ ಗುಡ್ಡ, ಹುಬ್ಬೆಹುಣಸೆ ಜಲಾಶಯದಂತೆ ಉಡುತೊರೆ ಹಳ್ಳ ಜಲಾಶಯದಲ್ಲಿಯೂ ಹೂಳು ತೆಗೆಸಿದರೆ ಹೆಚ್ಚಿನ ಪ್ರಮಾಣ ದಲ್ಲಿ ನೀರು ಸಂಗ್ರಹವಾಗಲಿದೆ.
ಜಲಾಶಯದಲ್ಲಿ ಸಂಪೂರ್ಣವಾಗಿ ನೀರು ಬತ್ತಿ ಹೋಗಿದ್ದು ಎಲ್ಲೆಡೆ ಹೂಳು ತುಂಬಿದೆ. ಇದರ ಪರಿಣಾಮ ನೀರಿನ ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗಿದೆ. ನೀರನ್ನು ಅರಸಿ ಬರುವಂತಹ ಕಾಡು ಪ್ರಾಣಿಗಳ ಜೀವಕ್ಕೂ ಕಂಟಕವಾಗಿದೆ. ಹೂಳು ತುಂಬಿಕೊಂಡಿರುವ ಪರಿಣಾಮವೇ ಒಂದು ಆನೆಯನ್ನು ಕಳೆದುಕೊಂಡಿದ್ದೇವೆ.
ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಳು ಇರುವುದರಿಂದ ನೀರು ಕುಡಿಯಲು ಬಂದಿದ್ದ ಆನೆ ಕೆಸರಿನಲ್ಲಿ ಸಿಲುಕಿ ನಿತ್ರಾಣಗೊಂಡಿದೆ. ಎಷ್ಟೇ ಚಿಕಿತ್ಸೆ ನೀಡಿದರೂ ಫಲಿಸದೆ ಮೃತಪಟ್ಟಿದೆ. ಹಾಗಾಗಿ ಸಂಬಂಧ ಪಟ್ಟ ನೀರಾವರಿ ಇಲಾಖೆಯ ಅಧಿಕಾರಿಗಳು ಆದಷ್ಟು ಬೇಗ ಜಲಾಶಯದ ಹೂಳು ತೆಗೆಸುವ ಕಾರ್ಯಕ್ಕೆ ಮುಂದಾಗ ಬೇಕು ಎಂಬುದು ರೈತರ ಆಗ್ರಹವಾಗಿದೆ.
ಪ್ರಸ್ತುತ ೦. ೬೭ ಟಿಎಂಸಿ ನೀರು ಸಂಗ್ರಹಣೆಯಾಗುತ್ತಿದ್ದು ಹೂಳು ತೆಗೆದರೆ ಮತ್ತಷ್ಟು ನೀರು ಸಂಗ್ರಹಣೆಯಾಗಿ ಸಾಮಾನ್ಯ ರೈತರಿಗೆ ಅನುಕೂಲವಾಗಲಿದೆ ಎಂಬುದು ಇಲ್ಲಿನ ಗ್ರಾಮಸ್ಥರ ಅಭಿಪ್ರಾಯವಾಗಿದೆ. ಪ್ರಸ್ತುತ ೧,೬೦೦ ಎಕರೆಗೆ ಅಂದರೆ ಬಲದಂಡೆ ೧೦,೦೦೦, ಎಡದಂಡೆ ೬,೦೦೦ ಎಕರೆಗೆ ಜಲಾಶಯದಿಂದ ನೀರು ಲಭ್ಯವಾಗುತ್ತಿದೆ.
ಕ್ಷೇತ್ರದ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನೀರಾವರಿ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ರಾಮಾಪುರ ಹೋಬಳಿ ವ್ಯಾಪ್ತಿಯ ನಿವಾಸಿಗಳಿಗೆ ಹಾಗೂ ಜನಜಾನುವಾರುಗಳಿಗೆ ನೀರು ಪೂರೈಸಲು ೪೯೦ ಕೋಟಿ ರೂ. ವೆಚ್ಚದ ಬೃಹತ್ ನೀರಾವರಿ ಯೋಜನೆಗೆ ಬಜೆಟ್ನಲ್ಲಿ ಅನುಮೋದನೆ ದೊರಕಿದೆ. ಮುಂದಿನ ದಿನಗಳಲ್ಲಿ ಹೂಳು ತೆಗೆಸುವ ಬಗ್ಗೆ ಅಽಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ವಹಿಸಲಾಗುವುದು. ಎಂ. ಆರ್. ಮಂಜುನಾಥ್, ಶಾಸಕರು





