Mysore
20
scattered clouds

Social Media

ಸೋಮವಾರ, 26 ಜನವರಿ 2026
Light
Dark

ಹಳೆಯ ವಿದ್ಯಾರ್ಥಿಗಳಿಂದ ಕನ್ನಡಮಯವಾದ ಸರ್ಕಾರಿ ಶಾಲೆ

ಎಂ.ಗೂಳೀಪುರ ನಂದೀಶ್

ಕೆಸ್ತೂರು ಪ್ರೌಢಶಾಲೆಯ ಸುತ್ತುಗೋಡೆಯಲ್ಲಿ ಕನ್ನಡ ಸಾಹಿತಿಗಳ, ಸಾಧಕರ ಸೊಗಸಾದ ಚಿತ್ರಗಳ ಚಿತ್ತಾರ

ಯಳಂದೂರು: ಶಾಲೆಯ ಸುತ್ತುಗೋಡೆಯಲ್ಲಿ ರಾರಾಜಿಸುತ್ತಿರುವ ಕನ್ನಡ ಸಾಹಿತ್ಯ ರತ್ನಗಳ, ಅದ್ವಿತೀಯ ಸಾಧನೆಗೈದ ಸಾಧಕರ ಸೊಗಸಾದ ಚಿತ್ರಗಳು, ಕನ್ನಡದ ಸ್ವಾಗತ ಕಮಾನು, ರಸ್ತೆಯಲ್ಲಿ ನಿಂತು ನೋಡಿದರೆ ಆಕರ್ಷವಾಗಿ ಕಾಣುವ ಶಾಲಾ ಸುತ್ತುಗೋಡೆ..

ಇದು ತಾಲ್ಲೂಕಿನ ಕೆಸ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ೨೦೧೦-೧೧ನೇ ಸಾಲಿನ ಹಳೆ ವಿದ್ಯಾರ್ಥಿಗಳ ಸಹಯೋಗದಲ್ಲಿ ನಳನಳಿಸುತ್ತಿರುವ ಶಾಲಾವರಣದ ದೃಶ್ಯ. ಹಳೇ ವಿದ್ಯಾರ್ಥಿ ವಿವಿಧ ಚಲನಚಿತ್ರಗಳಲ್ಲಿ, ಸ್ತಬ್ಧಚಿತ್ರಗಳನ್ನು ರಚಿಸಿಕೊಟ್ಟ ಕೆಸ್ತೂರು ಗ್ರಾಮದವರೇ ಆದ ಬಸವರಾಜು ಹಾಗೂ ಆ ಸಾಲಿನಲ್ಲಿ ಇದ್ದ ಸ್ನೇಹಿತರು ಶಾಲೆಯ ಸುತ್ತುಗೋಡೆಯನ್ನು ಸುಂದರಗೊಳಿಸಿ ಸೊಗಸಾದ ಚಿತ್ರಗಳ ಕೊಡುಗೆ ನೀಡಿದ್ದಾರೆ. ಈ ಶಾಲೆಯಲ್ಲಿ ಪ್ರಸ್ತುತ ಒಟ್ಟು ೨೭೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯ ಆವರಣದಲ್ಲಿ ದಾನಿಗಳಿಂದ ಈಚೆಗೆ ೭ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಲ್ಲದೆ ಶಾಲೆಯ ಆವರಣದ ಹಿಂಭಾಗದಲ್ಲಿ ಸುತ್ತುಗೋಡೆ ಇಲ್ಲದೆ ಇರುವುದರಿಂದ, ಅದನ್ನು ನಿರ್ಮಿಸಲು ಕೂಡ ಈಚೆಗೆ ತಾಪಂಗೆ ಮನವಿ ಮಾಡಲಾಗಿದೆ.

ಶಾಲೆಯ ಮುಂಭಾಗದಲ್ಲಿ ಸುತ್ತುಗೋಡೆಯನ್ನು ನಿರ್ಮಿಸಿ ಹಲವು ವರ್ಷಗಳೇ ಕಳೆದಿದ್ದವು. ಇದರ ಬಣ್ಣವೂ ಮಾಸಿತ್ತು. ಅಲ್ಲದೆ ಶಾಲೆಯ ಮುಂಭಾಗದಲ್ಲಿ ನಾಮಫಲಕವೂ ಇರಲಿಲ್ಲ. ಇದನ್ನು ಮನಗಂಡ ೨೦೧೦-೧೧ನೇ ಸಾಲಿನ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ಹಳೇ ವಿದ್ಯಾರ್ಥಿಗಳ ಗುಂಪು ಸುತ್ತುಗೋಡೆಗೆ ಬಣ್ಣ ಬಳಿದು, ಶಾಲೆಗೆ ನೂತನವಾಗಿ ಕಬ್ಬಿಣದಲ್ಲಿ ನಾಮಫಲಕವನ್ನು ಮಾಡಲು ತೀರ್ಮಾನಿಸಿತು.

ಚಿತ್ತಾಕರ್ಷಕ ಗೋಡೆ ಚಿತ್ರಗಳು: ನವೆಂಬರ್ ತಿಂಗಳು ಕನ್ನಡ ಮಾಸವಾಗಿರುವುದರಿಂದ ಈ ಸುತ್ತುಗೋಡೆಗೆ ಬಣ್ಣ ಬಳಿಯುವ ಬದಲು ಇಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರ ಭಾವಚಿತ್ರಗಳನ್ನು ಬಿಡಿಸಲು ತೀರ್ಮಾನಿಸಿ ಅದರಂತೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು, ದ. ರಾ.ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ.ಗೋಕಾಕ್, ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಡಾ.ಚಂದ್ರಶೇಖರ ಕಂಬಾರ ಭಾವಚಿತ್ರಗಳೂ ಸೇರಿದಂತೆ ಕನ್ನಡಾಂಬೆಯ ಚಿತ್ರಗಳನ್ನು ನಾಡಧ್ವಜದ ಹಳದಿ, ಕೆಂಪು ಬಣ್ಣಗಳ ಹಿನ್ನೆಲೆಯಲ್ಲಿ ಬಿಡಿಸಲಾಗಿದೆ.

ಇದರೊಂದಿಗೆ ಇನ್ನೊಂದು ಬದಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ, ಸಾಲುಮರದ ತಿಮ್ಮಕ್ಕ, ವಿಲಿಯಂ ಷೇಕ್ಸ್‌ಪಿಯರ್, ಡಾ. ಅಬ್ದುಲ್ ಕಲಾಂ, ಶ್ರೀನಿವಾಸ ರಾಮಾನುಜಮ್, ಸರ್ ಸಿ.ವಿ.ರಾಮನ್, ಹೋಮಿ ಜಹಂಗೀರ್ ಬಾಬಾ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರ ಭಾವಚಿತ್ರಗಳನ್ನು ವಿವಿಧ ಚಿತ್ತಾಕರ್ಷಕ ಬಣ್ಣಗಳ ಮೂಲಕ ಬಿಡಿಸಲಾಗಿದ್ದು, ಇವು ನೋಡುಗರ ಗಮನ ಸೆಳೆಯುತ್ತಿವೆ. ಇವರ ಈ ಕೈಂಕರ್ಯಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇಲ್ಲಿನ ಅನೇಕ ದಾರಿ ಹೋಕರು, ಕನ್ನಡ ಪ್ರೇಮಿಗಳು ಕೆಲ ಕಾಲ ಇಲ್ಲಿ ನಿಂತು ಇದನ್ನು ನೋಡಿ ತಮ್ಮ ಮೊಬೈಲ್‌ಗಳಲ್ಲಿ ಸೆಲ್ಛಿ ತೆಗೆದುಕೊಂಡು, ಭಾವಚಿತ್ರಗಳನ್ನು ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಿದ್ದಾರೆ.

” ನಮ್ಮ ಶಾಲೆಯ ೨೦೧೦-೧೧ನೇ ಸಾಲಿನಲ್ಲಿ ಎಸ್‌ಎಸ್ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ಹಳೆಯ ವಿದ್ಯಾರ್ಥಿಗಳು ತಮ್ಮ ಬಯಕೆಯನ್ನು ನಮ್ಮ ಮುಂದಿಟ್ಟರು. ಬಸವರಾಜು ಎಂಬ ವಿದ್ಯಾರ್ಥಿ ಕಲಾವಿದನಾಗಿದ್ದು ಶಾಲೆಯ ಸುತ್ತುಗೋಡೆಗೆ ಚಿತ್ರ ಬಿಡಿಸುವ ಇಂಗಿತ ವ್ಯಕ್ತಪಡಿಸಿದರು. ಇದಕ್ಕೆ ನಾವು ಸಮ್ಮತಿಸಿದೆವು. ಎಲ್ಲಾ ವಿದ್ಯಾರ್ಥಿಗಳು ಸೇರಿಕೊಂಡು ಸಾವಿರಾರು ರೂ. ಹಣ ವ್ಯಯಿಸಿ ಇದಕ್ಕೆ ಬಣ್ಣ ಬಳಿದು, ಶಾಲೆಯ ಗೇಟ್‌ಗೆ ನಾಮಫಲಕವನ್ನು ಹಾಕಿದ್ದಾರೆ. ಈಚೆಗೆ ನಮ್ಮ ಶಾಲೆಯಲ್ಲಿ ನಡೆದ ಪೋಷಕರ ಮಹಾಸಭೆಯಲ್ಲಿ ಇವರನ್ನು ಸನ್ಮಾನಿಸಲಾಗಿದೆ.”

-ಶಿವಕುಮಾರಸ್ವಾಮಿ, ಪ್ರಭಾರ ಮುಖ್ಯ ಶಿಕ್ಷಕರು

Tags:
error: Content is protected !!