ಹಲವು ಹೋಟೆಲ್ಗಳಲ್ಲಿ ತಿಂಡಿಗಳ ಬೆಲೆ ಶೇ.5 ಹೆಚ್ಚಳ
ಫಾಸ್ಟ್ ಫುಡ್, ಜಂಕ್ಫುಡ್ಗಳ ದರವೂ ಗಗನಮುಖಿ
• ಚಿರಂಜೀವಿ ಸಿ ಹುಲ್ಲಹಳ್ಳಿ
ಮೈಸೂರು : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕಾರಣ ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದು ಸದ್ಯ ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತವನ್ನೇ ನೀಡಿದ್ದು, ಇದರ ಪರಿಣಾಮವಾಗಿ ಹೋಟೆಲ್ಗಳಲ್ಲಿ ತಿಂಡಿ-ತಿನಿಸುಗಳ ಬೆಲೆ ಹೆಚ್ಚಳವಾಗಿದೆ.
ಮೈಸೂರು ಜಿಲ್ಲಾ ಕೇಂದ್ರವಾಗಿರುವುದು ಮಾತ್ರವಲ್ಲದೆ, ಪ್ರವಾಸಿ ತಾಣವೂ ಆಗಿರುವ ಹಿನ್ನೆಲೆಯಲ್ಲಿ ನಿತ್ಯ ಸಾವಿರಾರು ಮಂದಿ ಜನರು ಕೆಲಸಕ್ಕೆ, ಆಸ್ಪತ್ರೆಗಳಿಗೆ, ಅಗತ್ಯ ವಸ್ತುಗಳ ಖರೀದಿ, ಶಾಪಿಂಗ್, ಪ್ರವಾಸಿಗಳ ತಾಣ ವೀಕ್ಷಣೆಗೆ ಲಕ್ಷಾಂತರ ಮಂದಿ ಬರುತ್ತಾರೆ. ಹೀಗಾಗಿ ತಮ್ಮ ವೇಗದ ಬದುಕಿನ ನಡುವೆ ಆಹಾರಕ್ಕಾಗಿ ಹೋಟೆಲ್ಗಳ ಮೇಲೆಯೇ ಅತಿಹೆಚ್ಚು ಅವಲಂಬಿತರಾಗಿದ್ದಾರೆ. ಆದರೆ, ಈಗ ಗ್ಯಾಸ್ ಸಿಲಿಂ ಡರ್ ಪೂರೈಕೆಯಲ್ಲಿ ಕೊರತೆಯಾಗಿರುವುದರಿಂದ ಹೋಟೆಲ್ ಆಹಾರಗಳಲ್ಲಿ ಶೇ.5ರಷ್ಟು ಹೆಚ್ಚಳವಾಗಿದೆ. ಇದು ಗ್ರಾಹಕರ ಜೇಬನ್ನು ಸುಡುವಂತೆ ಮಾಡಿದೆ.
ಪೆಟ್ರೋಲ್ – ಡೀಸೆಲ್ ಬೆಲೆ ಹೆಚ್ಚಳದಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿ ಕೆಲ ತಿಂಗಳುಗಳ ಹಿಂದಷ್ಟೇ ಹೋಟೆಲ್ ತಿಂಡಿ-ತಿನಿಸುಗಳ ದರ ಪರಿಷ್ಕರಣೆ ಆಗಿ ಗ್ರಾಹಕರಿಗೆ ಹೊರೆಯಾಗಿದ್ದವು. ಇದರ ನಡುವೆ ಈಗ ಮತ್ತೊಮ್ಮೆ ದರ ಹೆಚ್ಚಳವಾಗಿರುವುದು ಸಾರ್ವಜನಿ ಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಬೆಳಗಿನ ತಿಂಡಿ ತಿನಿಸುಗಳಲ್ಲಿ ಇಡ್ಲಿ, ದೋಸೆ, ರೈಸ್ ಬಾತ್, ಖಾರ ಬಾತ್ ಸೇರಿದಂತೆ ಇತರೆ ತಿನಿಸುಗಳ ಬೆಲೆ 5 ರೂ. ಹೆಚ್ಚಳವಾಗಿದೆ. ಇದರಿಂದ 40 ರೂ.ಗೆ ದೊರೆ ಯುತ್ತಿದ್ದ ಬಹುತೇಕ ತಿಂಡಿಗಳ ದರ ಏರಿದೆ. ಅನ್ನ ಸಾಂಬಾರ್ ಮತ್ತಿತರ ಖಾದ್ಯಗಳನ್ನು ಒಳಗೊಂಡ ಊಟಕ್ಕೂ ಶೇ.5 ರಷ್ಟು ದರ ಹೆಚ್ಚಳವಾಗಿದೆ.
ಜಂಕ್ ಫುಡ್ಗಳ ದರವೂ ಹೆಚ್ಚಳ
ಸಿಲಿಂಡರ್ ಅಭಾವ ಹೋಟೆಲ್ ಉದ್ಯಮಕ್ಕೆ ಮಾತ್ರ ಅಲ್ಲದೆ, ಫಾಸ್ಟ್ ಫುಡ್, ಜಂಕ್ ಫುಡ್ ಅಂಗಡಿಗಳ ಮೇಲೆಯೂ ಪರಿಣಾಮ ಬೀರಿದೆ. ಗೋಬಿ ಮಂಚೂರಿ, ಮಸಾಲೆಪುರಿ, ಪಾನಿಪುರಿ ಇತರೆ ತಿಂಡಿಗಳ ದರವೂ ಹೆಚ್ಚಳವಾಗಿದೆ. ಈಗಾಗಲೇ ವಾಣಿಜ್ಯ ಬಳಕೆಯ ಸಿಲಿಂಡರ್ ದೊರೆಯದೆ ಕೆಲವು ಹೋಟೆಲ್ಗಳು ಬಂದ್ ಆಗಿದ್ದು, ಇನ್ನೂ ಕೆಲವು ಹೋಟೆಲ್ಗಳು ಊಟ, ತಿಂಡಿಗಳ ಸಿದ್ಧತೆಗಾಗಿ ಹೊಟ್ಟಿನ ಒಲೆ, ಸೌದೆ ಒಲೆ, ಇಂಡಕ್ಷನ್ ಸ್ಟವ್ ಮತ್ತು ವಿದ್ಯುತ್ ಸ್ಟವ್ಗಳ ಮೊರೆ ಹೋಗಿದ್ದಾರೆ. ವಾಣಿಜ್ಯ ಸಿಲಿಂಡರ್ ಪೂರೈಕೆ ಸರಿಯಾಗಿ ಆಗದ ಹಿನ್ನೆಲೆಯಲ್ಲಿ ಕಾಳಸಂತೆಯಲ್ಲಿ ಸಿಲಿಂಡರ್ಗಳಿಗೆ ದುಪ್ಪಟ್ಟು ಬೆಲೆ ನೀಡುತ್ತಿದ್ದೇವೆ. ಕೆಲವು ಸಂದರ್ಭಗಳಲ್ಲಿ ಒಂದು ಸಿಲಿಂಡರ್ಗೆ 3-4 ಸಾವಿರ ರೂ. ನೀಡುವಂತಾಗಿದೆ. ಹಾಗಾಗಿಯೇ ತಿಂಡಿ-ತಿನಿಸುಗಳ ಬೆಲೆಯನ್ನು ತಾತ್ಕಾಲಿಕವಾಗಿ ಏರಿಕೆ ಮಾಡಲಾಗಿದೆ ಎಂಬುದು ಹೋಟೆಲ್ ಉದ್ಯಮಿಯೊಬ್ಬರ ಅಳಲು.
ಕೆಲ ತಿಂಗಳುಗಳ ಹಿಂದಷ್ಟೇ ಹೋಟೆಲ್ಗಳ ತಿಂಡಿ- ತಿನಿಸುಗಳ ದರವನ್ನು ಪರಿಷ್ಕರಿಸಲಾಗಿದೆ. 35 ರೂ.ಇದ್ದ ಅನ್ನ-ಸಾಂಬಾರ್ ದರ 40 ರೂ.ಆಗಿತ್ತು. ಇದೀಗ ಮತ್ತೆ ಏರಿಕೆಯಾಗಿದೆ. ನಾನು ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೆಚ್ಚು ಸಮಯ ಇರುವುದರಿಂದ ನಿತ್ಯವೂ ಎರಡು ಹೊತ್ತು ಹೋಟೆಲ್ನಲ್ಲಿ ಊಟ ಮಾಡುವುದು ಅನಿವಾರ್ಯವಾಗಿದೆ.
– ಸಚಿನ್, ಖಾಸಗಿ ಕಂಪೆನಿ ನೌಕರ
ದರ ಏರಿಕೆ ಶಾಶ್ವತವಲ್ಲ. ಗ್ಯಾಸ್ ಸಿಲಿಂಡರ್ ಅಭಾವ ದಿಂದ ಶೇ.5ರಷ್ಟು ದರವನ್ನು ತಾತ್ಕಾಲಿಕವಾಗಿ ಹೆಚ್ಚಳ ಮಾಡಲಾಗಿದೆ. ಎಲ್ಪಿಜಿ ಪೂರೈಕೆ ಸಮರ್ಪಕವಾದ ನಂತರ ದರ ಇಳಿಕೆಯಾಗಲಿದೆ. – ಸಿ.ನಾರಾಯಣ ಗೌಡ, ಅಧ್ಯಕ್ಷ, ಮೈಸೂರು ಹೋಟೆಲ್ ಮಾಲೀಕರ ಸಂಘ





