ಕೆ.ಬಿ.ರಮೇಶನಾಯಕ
ಮೈಸೂರು: ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಭಾರತದ ಮೇಲೆ ದಿನದಿಂದ ದಿನಕ್ಕೆ ಅನಿಲ ಬಿಕ್ಕಟ್ಟು ಬಿಗಡಾಯಿಸುತ್ತಿದ್ದು, ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆ ಸ್ಥಗಿತದಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ, ಹೋಟೆಲ್ ಉದ್ಯಮ ಹಾಗೂ ಕೃಷಿ ಕ್ಷೇತ್ರಗಳು ಗಂಭೀರ ಪರಿಣಾಮವನ್ನು ಎದುರಿಸಬೇಕಾದ ಪರಿಸ್ಥಿತಿ ಉದ್ಭವಿಸಿದೆ.
ಜಿಲ್ಲೆಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಪೂರೈಕೆಯಾಗಿರುವ ಗ್ಯಾಸ್ ಸಿಲಿಂಡರ್ನಲ್ಲಿ ಹೋಟೆಲ್ಗಳನ್ನು ನಡೆಸಲಾಗುತ್ತಿದ್ದು, ಈ ಗ್ಯಾಸ್ ಸಿಲಿಂಡರ್ಗಳು ೨ ದಿನಗಳ ಒಳಗೆ ಖಾಲಿಯಾಗುವ ಸಾಧ್ಯತೆ ಇದೆ. ನಂತರ ಬಹುತೇಕ ಮಧ್ಯಮ ಹಾಗೂ ಐಷಾರಾಮಿ ವರ್ಗದ ಎಲ್ಲ ಹೋಟೆಲ್ಗಳೂ ಬಂದ್ ಆಗುವ ಲಕ್ಷಣಗಳು ಹೆಚ್ಚಾಗಿವೆ.
ಸಮರ್ಪಕವಾಗಿ ಗ್ಯಾಸ್ ಸಿಲಿಂಡರ್ ದೊರೆಯುವ ಬಗ್ಗೆ ಯಾವುದೇ ಭರವಸೆ ಇಲ್ಲದ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಈಗಾಗಲೇ ಆಹಾರ ತಯಾರಿಸುವ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಸೊಪ್ಪು, ತರಕಾರಿ, ಮಾಂಸ ಹಾಗೂ ಹಾಲಿನ ಉತ್ಪನ್ನಗಳ ಬೇಡಿಕೆಯ ಪ್ರಮಾಣದಲ್ಲೂ ಇಳಿಕೆ ಕಾಣಲು ಪ್ರಾರಂಭವಾಗಿದೆ.
ರೈತರಿಗೆ ಸಂಕಷ್ಟ: ಜಿಲ್ಲೆಯಲ್ಲಿ ರೈತರು ಬೆಳೆದ ಸೊಪ್ಪು, ತರಕಾರಿಗಳನ್ನು ಮೈಸೂರು ಮಾತ್ರವಲ್ಲದೆ ಕೇರಳ, ಕೊಡಗು, ಮಂಗಳೂರಿಗೂ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡಲಾಗುತ್ತದೆ. ಆದರೆ, ದೇಶಾದ್ಯಂತ ಸಿಲಿಂಡರ್ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ತರಕಾರಿಗಳಿಗೆ ಬೇಡಿಕೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಜಿಲ್ಲೆಯಲ್ಲಿ ಪ್ರತಿನಿತ್ಯ ೯.೨೭ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಒಂದು ವೇಳೆ ಹೋಟೆಲ್ಗಳು ಬಾಗಿಲು ಮುಚ್ಚಿದರೆ ಹಾಲಿಗೆ ಕೂಡ ಬೇಡಿಕೆ ಕುಸಿತವಾಗಲಿದೆ. ಇಂತಹ ಸಂದರ್ಭ ಎದುರಾದರೆ ಹಾಲನ್ನು ಪೌಡರ್ ಆಗಿ ಪರಿವರ್ತಿಸಿ ಸಮಸ್ಯೆಯನ್ನು ಪರಿಹರಿಸಬಹುದು. ಆದರೆ, ರೈತರು ಬೆಳೆದ ಬೆಳೆಗಳನ್ನು ಈ ರೀತಿ ಉಳಿಸಿಕೊಳ್ಳಲು ಪರ್ಯಾಯ ಮಾರ್ಗವೇ ಇಲ್ಲ. ಹೀಗಾಗಿ ಬೆಳೆಗಳು ಹೊಲದಲ್ಲಿಯೇ ಕೊಳೆಯುವ ದುಸ್ಥಿತಿ ನಿರ್ಮಾಣವಾಗಬಹುದು. ಹೋಟೆಲ್ಗಳಿಗೆ ಗ್ಯಾಸ್ ಸಿಲಿಂಡರ್ ಪೂರೈಕೆಯಾದರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ.
ನೂರಾರು ಪಿಜಿಗಳಿಗೆ ಸಮಸ್ಯೆ: ಉದ್ಯೋಗ ಹಾಗೂ ಶಿಕ್ಷಣ ಪಡೆಯುವ ಉದ್ದೇಶದಿಂದ ಮೈಸೂರಿಗೆ ಸಾಕಷ್ಟು ಸಂಖ್ಯೆಯಲ್ಲಿ ಜನರು, ವಿದ್ಯಾರ್ಥಿಗಳು ಬಂದು ನೆಲೆಸಿದ್ದಾರೆ. ಹಲವಾರು ವಿದ್ಯಾರ್ಥಿಗಳು ಪಿಜಿಗಳಲ್ಲಿ ಉಳಿದು ಕೊಂಡಿದ್ದಾರೆ. ಮೈಸೂರಿನಲ್ಲಿರುವ ಪಿಜಿಗಳು ಗ್ಯಾಸ್ ಕೊರತೆಯಿಂದ ಸ್ಥಗಿತವಾದರೆ ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಅನುಭವಿಸಬೇಕಾಗುತ್ತದೆ. ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಹಲವಾರು ಉದ್ಯೋಗಿಗಳು ಹೋಟೆಲ್ ಆಹಾರ ಆಶ್ರಯಿಸಿದ್ದು, ಹೋಟೆಲ್ಗಳು ಬಂದ್ ಆದರೆ ಅವರೂ ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಪ್ರವಾಸೋದ್ಯಮಕ್ಕೆ ಹೊಡೆತ: ದೇಶದಲ್ಲಿ ಅತಿಹೆಚ್ಚು ಪ್ರವಾಸಿಗರು ಭೇಟಿ ನೀಡುವ ಜಿಲ್ಲೆಗಳ ಪೈಕಿ ಮೈಸೂರು ಕೂಡ ಒಂದಾಗಿದೆ. ಆಗ್ರಾದ ತಾಜ್ಮಹಲ್ ನಂತರ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಮೈಸೂರು ಅರಮನೆ ಆಕರ್ಷಿಸುತ್ತದೆ. ಆದರೆ, ಇದೀಗ ಗ್ಯಾಸ್ ಸಿಲಿಂಡರ್ ಅಭಾವದಿಂದಾಗಿ ಹೋಟೆಲ್ಗಳು ಬಾಗಿಲು ಮುಚ್ಚಿದರೆ ಪ್ರವಾಸೋದ್ಯಮಕ್ಕೆ ದೊಡ್ಡ ಪ್ರಮಾಣದಲ್ಲಿ ಧಕ್ಕೆಯಾಗುವ ಸಂಭವ ಇದೆ. ಕೋವಿಡ್ ಸಂದರ್ಭದಲ್ಲಿ ಪ್ರವಾಸಿ ತಾಣಗಳು ಬಂದ್ ಆದ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯ ವನ್ನು ನಿರ್ವಹಣೆ ಮಾಡಲು ಕೂಡ ಆರ್ಥಿಕ ಸಮಸ್ಯೆ ಎದುರಾಗಿತ್ತು. ಆ ಸಂದರ್ಭದಲ್ಲಿ ದಾನಿಗಳ ನೆರವು ಪಡೆದು ಮೃಗಾಲಯದ ಪ್ರಾಣಿಗಳಿಗೆ ಆಹಾರ ಪೂರೈಕೆ ಮಾಡಲಾಗಿತ್ತು. ಗ್ಯಾಸ್ ಕೊರತೆಯು ದೀರ್ಘಾವಽಗೆ ಮುಂದುವರಿದರೆ ಪ್ರವಾಸೋದ್ಯಮ ಕ್ಷೇತ್ರ ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ.
” ಗ್ಯಾಸ್ ಸಮಸ್ಯೆಯಿಂದ ಕಲ್ಯಾಣ ಮಂಟಪಗಳು, ಹೋಟೆಲ್ಗಳಲ್ಲಿ ಮೆನು ಕಡಿಮೆಯಾಗಿದೆ. ಸಣ್ಣ ಸಣ್ಣ ಹೋಟೆಲ್ ಗಳಲ್ಲಿ ಗ್ರಾಹಕರು ಕೇಳುವ ತಿಂಡಿಗಳನ್ನು ಒದಗಿಸಲು ಬೇಕಿದ್ದ ತರಕಾರಿ, ಸೊಪ್ಪುಗಳನ್ನು ಖರೀದಿಸುವುದು ಸ್ವಲ್ಪ ಕಡಿಮೆ ಯಾಗಿದೆ. ಮುಂದೆ ಯಾವ ರೀತಿ ಮಾರಾಟವಾಗುತ್ತದೋ ನೋಡಬೇಕು.”
-ಮಹದೇವ್, ದೇವರಾಜ ಮಾರುಕಟ್ಟೆ ತರಕಾರಿ ವ್ಯಾಪಾರಿ
” ಮಧ್ಯಮ ವರ್ಗದ ಹೋಟೆಲ್ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಿಕನ್ ಖರೀದಿಸುವ ಆರ್ಡರ್ ಇರುತ್ತಿತ್ತು. ಇಂದು ಮೂರು ಹೋಟೆಲ್ಗಳಿಂದ ತಲಾ ೧೫ ಕೆಜಿ ಚಿಕನ್ ಕಡಿಮೆ ಮಾಡಲಾಗಿದೆ. ಕಮರ್ಷಿಯಲ್ ಗ್ಯಾಸ್ ಕೊರತೆಯಿಂದ ಕಬಾಬ್ ಸೆಂಟರ್ಗಳನ್ನು ಬಂದ್ ಮಾಡುತ್ತಿದ್ದಾರೆ.ಇದರಿಂದಾಗಿ ಚಿಕನ್ ವ್ಯಾಪಾರದ ಮೇಲೆ ತೊಂದರೆಯಾಗಿದೆ.”
-ಸದ್ದಾಂ, ಚಿಕನ್ ವ್ಯಾಪಾರಿ, ಕಾಕರವಾಡಿ
ಬಂದ್ ಮಾಡಲು ಚಿಂತನೆ: ಬಹುತೇಕ ಹೋಟೆಲ್ಗಳವರು ಅಡುಗೆಗೆ ಗ್ಯಾಸ್ ಸಿಲಿಂಡರ್ ಅವಲಂಬಿಸಿದ್ದಾರೆ. ಆದರೆ, ಪ್ರಸ್ತುತ ಗ್ಯಾಸ್ ಸಿಲಿಂಡರ್ ಪೂರೈಕೆ ಯಾಗದ ಹಿನ್ನೆಲೆಯಲ್ಲಿ ಹೋಟೆಲ್ಗಳನ್ನು ಕೆಲವು ದಿನಗಳ ಮಟ್ಟಿಗೆ ಬಂದ್ ಮಾಡುವುದು ಸೂಕ್ತ ಎಂಬ ನಿರ್ಧಾರವನ್ನು ಹೋಟೆಲ್ ಮಾಲೀಕರು ಕೈಗೊಂಡಿದ್ದಾರೆ. ವಾಣಿಜ್ಯ ಬಳಕೆಯ ೧೯ ಕೆಜಿ ಸಿಲಿಂಡರ್ ಬೆಲೆ ೧,೯೩೮ ರೂ. ಇದ್ದು, ಖಾಸಗಿ ಗ್ಯಾಸ್ ಕಂಪೆನಿಗಳಲ್ಲಿ ೧೭ ಕೆಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ದರ ೧,೭೦೦ ರೂ. ಇದೆ. ಸರ್ಕಾರಿ ಸ್ವಾಮ್ಯದ ಗ್ಯಾಸ್ ಕಂಪೆನಿಗಳು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ಗಳ ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಿವೆ. ಹೀಗಾಗಿ ಹೋಟೆಲ್ ಮಾಲೀಕರು ಖಾಸಗಿ ಕಂಪೆನಿಗಳ ಗ್ಯಾಸ್ ಬಳಕೆಯ ಕಡೆಗೆಮುಖ ಮಾಡುತ್ತಿದ್ದಾರೆ. ಆದರೆ, ಅಲ್ಲಿಯೂ ಗ್ಯಾಸ್ ಸಿಲಿಂಡರ್ಗಳ ಕೊರತೆ ತೀವ್ರವಾಗಿ ಕಂಡು ಬಂದಿದ್ದು,ಕೆಲವರು ಪರಿಸ್ಥಿತಿಯ ಲಾಭ ಪಡೆಯಲು ಗ್ಯಾಸ್ ಸಿಲಿಂಡರ್ನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಸಮರ್ಪಕ ಅನಿಲ ಪೂರೈಕೆಗೆ ಒತಾ





