ಮಾಗಳಿ ರಾಮೇಗೌಡ
ಬೆಟ್ಟದಪುರ: ಕೇವಲ ೬೦ ದಿನಗಳಲ್ಲಿ ಉತ್ಪಲ ಕಂಪೆನಿಯ ತೃಪ್ತಿ ತಳಿಯ ಕಲ್ಲಂಗಡಿ ಹಣ್ಣನ್ನು ಬೆಳೆದು ಒಂದೂವರೆ ಲಕ್ಷ ರೂ. ಲಾಭ ಗಳಿಸಿದ ಯುವ ರೈತ ಹೊನ್ನಾಪುರ ಶಶಿ ಗಮನ ಸೆಳೆದಿದ್ದಾರೆ.
ಪಿರಿಯಾಪಟ್ಟಣ ತಾಲ್ಲೂಕಿನ ಹೊನ್ನಾಪುರ ಗ್ರಾಮದ ಪ್ರಗತಿಪರ ಯುವ ರೈತ ಶಶಿರವರು ಕೇವಲ ೬೦ ದಿನಗಳಲ್ಲಿ ಉತ್ಪಲ ಕಂಪೆನಿಯ ತೃಪ್ತಿ ತಳಿಯ ಕಲ್ಲಂಗಡಿ ಗಿಡಗಳನ್ನು ನಾಟಿ ಮಾಡಿ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ಪಡೆದು ಒಂದೂವರೆ ಲಕ್ಷ ರೂ. ಲಾಭ ಗಳಿಸಿದ್ದಾರೆ.
ರೈತ ಹೊನ್ನಾಪುರ ಶಶಿ ಮಾತನಾಡಿ, ಹರೀಶ್ರವರ ಮಾರ್ಗದರ್ಶನದಲ್ಲಿ ಈ ವರ್ಷ ಮೊದಲನೇ ಬಾರಿಗೆ ೩೦ ಕುಂಟೆ ಜಾಗದಲ್ಲಿ ಮಲ್ಚಿಂಗ್ ಶೀಟ್ ಅಳವಡಿಸಿಕೊಂಡು ಹನಿ ನೀರಾವರಿ ಪದ್ಧತಿಯಲ್ಲಿ ಉತ್ಪಲ ಕಂಪೆನಿಯ ತೃಪ್ತಿ ತಳಿಯ ೩ ಸಾವಿರ ಕಲ್ಲಂಗಡಿ ಗಿಡಗಳನ್ನು ನಾಟಿ ಮಾಡಿ ಕಲ್ಲಂಗಡಿ ಹಣ್ಣನ್ನು ಬೆಳೆದಿದ್ದೇನೆ. ಈ ಬೆಳೆಗೆ ರೋಗ ಕಡಿಮೆ ಇದೆ. ಉತ್ತಮ ಇಳುವರಿ ಬಂದಿದೆ. ಅಂಡಾಕಾರದ ಹಣ್ಣುಗಳಿದ್ದು ಕೆಂಪಾಗಿ, ತಿನ್ನಲು ಸಿಹಿಯಾಗಿದೆ. ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದು ಮುಂಬೈ, ದಿಲ್ಲಿ, ಚೆನ್ನೈ, ಕೋಲ್ಕತಾ ನಗರಗಳಿಗೆ ಸಾಗಣೆ ಮಾಡಲಾಗುತ್ತದೆ ಎಂದರು.
ಮಂಟಿ ಬಿಳಗುಲಿಯ ಅಭಿಷೇಕ್ ಮಾತನಾಡಿದರು. ಪ್ರಗತಿಪರ ಯುವ ರೈತರಾದ ಶಶಿ ಸಹೋದರರನ್ನು ಕಲ್ಲಂಗಡಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಬಹುಮಾನ ನೀಡಿ ಸನ್ಮಾನಿಸಲಾಯಿತು. ಸಮೃದ್ಧವಾಗಿ ಬಂದಿರುವ ಕಲ್ಲಂಗಡಿ ಹಣ್ಣಿನ ಬೆಳೆ ವೀಕ್ಷಣೆ ಮಾಡಲು ಹೊನ್ನಾಪುರ ಸುತ್ತಮುತ್ತಲಿನ ನೂರಾರು ರೈತರು ಆಗಮಿಸಿದ್ದರು. ರೈತರಾದ ಹೊನ್ನಪುರ ಶಿವಣ್ಣ, ಶಶಿ, ಆಂಜನೇಯ, ಪ್ರಕಾಶ್, ಪುಟ್ಟಸ್ವಾಮಿ, ಗಂಗನಕುಪ್ಪೆ ಯೋಗಣ್ಣ, ಅರುಣ್, ಅಡಗೂರು ರಾಜೇಶ್, ಹರೀಶ್, ಕಣಗಾಲ್ ಮಧು, ತಮ್ಮೇಗೌಡ, ಗಣೇಶ್, ಹೆಚ್.ಹೆಚ್.ಆಂಜನೇಯ, ವೆಂಕಟೇಶ್, ರವಿಕುಮಾರ್, ಉತ್ಪಲ ಕಂಪೆನಿಯ ಆರ್. ಎಸ್.ಎಂ.ಸತೀಶ್ ವಾಡೆ, ಟಿ.ಎಸ್.ಎಂ. ಹರೀಶ್, ಅಜಯ್, ನರ್ಸರಿ ಮಾಲೀಕರಾದ ಅಭಿ, ಸುನಿಲ್, ಪುನೀತ್, ನಾಗರಾಜ್, ವಿತರಕರಾದ ಕುಬೇರ್, ವೆಂಕಟೇಶ್, ಸೋಮಣ್ಣ, ಲೋಹಿತ್, ಸ್ವಾಮಿ, ನೂರಾರು ರೈತರು ಹಾಜರಿದ್ದರು.
” ಒಂದು ಹಣ್ಣು ಐದರಿಂದ ಆರು ಕೆಜಿ ತೂಕವಿದೆ. ೬೦ ಸಾವಿರ ರೂ. ಖರ್ಚು ಮಾಡಿದ್ದೇವೆ ೨೦ ಟನ್ ಹಣ್ಣನ್ನು ನಿರೀಕ್ಷೆ ಮಾಡಿದ್ದೇವೆ. ಪ್ರಸ್ತುತಮಾರುಕಟ್ಟೆ ದರ ಪ್ರತಿ ಕೆಜಿಗೆ ೧೦ ರೂ. ಇದ್ದು, ೨ ಲಕ್ಷ ರೂ. ಸಿಗಲಿದೆ. ಖರ್ಚು ಕಳೆದು ೧.೪೦ ಲಕ್ಷ ರೂ. ಲಾಭ ಬರುವ ನಿರೀಕ್ಷೆಯಲ್ಲಿದ್ದೇನೆ.”
-ಹೊನ್ನಾಪುರ ಶಶಿ, ರೈತ





