ಚಾಮರಾಜನಗರ : ನೀರಿನ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಕಾರಣಕ್ಕೆ ತಾಲ್ಲೂಕಿನ ಮೂರು ಗ್ರಾಮ ಪಂಚಾಯಿತಿ ಕಾರ್ಯಾಲಯಗಳ ವಿದ್ಯುತ್ ಸಂಪರ್ಕವನ್ನು ಗುರುವಾರ ಕಡಿತಗೊಳಿಸಲಾಗಿದೆ.
ದೊಡ್ಡಮೋಳೆ, ವೆಂಕಟಯ್ಯನಛತ್ರ, ಅಟ್ಟುಗುಳಿಪುರ ಗ್ರಾಮ ಪಂಚಾಯಿತಿ ಕಾರ್ಯಾಲಯಗಳ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದ್ದು, ಈ ಪಂಚಾಯಿತಿಗಳು ಲಕ್ಷಾಂತರ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ಸುಡು ಬಿಸಿಲಿನ ಈ ದಿನಗಳಲ್ಲಿ ಕುಡಿಯುವ ನೀರು ಅತ್ಯಂತ ಅವಶ್ಯವಾಗಿದ್ದು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ತೆಗೆಯಲು ಹೋದರೆ ಸಾರ್ವಜನಿಕರಿಂದ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂಬುದನ್ನು ಅರಿತು ಗ್ರಾಮಗಳ ಕೇಂದ್ರ ಸ್ಥಾನವಾದ ಪಂಚಾಯಿತಿಯ ಪವರ್ ಅನ್ನೇ ಕಟ್ ಮಾಡಲಾಗಿದೆ. ಸಕಾಲ ಅರ್ಜಿ ಸ್ವೀಕಾರ, ಇ-ಹಾಜರಾತಿ, ವಿಬಿ-ಜಿ ರಾಮ್ ಜಿ, ಇ-ಸ್ವತ್ತು ಹಾಗೂ ಪಂಚಾಯಿತಿಯ ಪ್ರತಿಯೊಂದು ಕೆಲಸವೂ ವಿದ್ಯುತ್ ಅವಲಂಬಿತ ಆನ್ಲೈನ್ ಮೇಲೆ ಕೇಂದ್ರೀಕೃತ ಆಗಿರುವ ಕಾರಣ ಪಂಚಾಯಿತಿ ಕೇಂದ್ರ ಸ್ಥಾನದ ಸಂಪರ್ಕ ತೆಗೆದರೆ ಬಿಲ್ ಚುಕ್ತಾ ಆಗುತ್ತದೆ ಎಂದು ಸೆಸ್ಕ್ ಈ ಹಾದಿ ಹಿಡಿದಿದೆ.
ವಿದ್ಯುತ್ ಸಂಪರ್ಕ ಕಡಿತದಿಂದ ಗುರುವಾರ ಸಾರ್ವಜನಿಕರಿಗೆ ಹೇಳಿಕೊಳ್ಳುವಂತಹ ಸಮಸ್ಯೆಯಾಗಲಿಲ್ಲ. ಕಾರಣ, ಮುಂಚೆಯೇ ಯುಪಿಎಸ್ ಚಾರ್ಜ್ ಆಗಿದ್ದರಿಂದ ಅದರ ನೆರವಿನಲ್ಲಿ ಕೆಲಸಗಳು ನಡೆದವು.
ಆದರೆ ಶುಕ್ರವಾರ ಈ ಪಂಚಾಯಿತಿಗಳಿಗೆ ವಿದ್ಯುತ್ ಸಂಪರ್ಕ ಕೊಡದೇ ಹೋದರೆ ಇ-ಹಾಜರಾತಿಯಿಂದ ಮೊದಲ್ಗೊಂಡು ಪಂಚಾಯಿತಿಯ ಎಲ್ಲಾ ಕೆಲಸವೂ ಸ್ಥಗಿತ ಆಗಲಿವೆ ಎಂದು ಹೆಸರು ಹೇಳಲು ಇಚ್ಛಿಸದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ತಿಳಿಸಿದರು.
೧೫ನೇ ಹಣಕಾಸು ಆಯೋಗದ ಅನುದಾನ, ರಾಜ್ಯ ಹಣಕಾಸು ಆಯೋಗದ ಅನುದಾನ ಮತ್ತು ಗ್ರಾಮ ಪಂಚಾಯಿತಿಯ ಸ್ವಂತ ಸಂಪನ್ಮೂಲಗಳನ್ನು ಬಳಸಿ ಈ ಖಾತೆಗೆ ಜಮಾ ಮಾಡಲಾಗುತ್ತದೆ. ೨೦೨೫-೨೬ನೇ ಸಾಲಿನ ೧೫ನೇ ಹಣಕಾಸು ಯೋಜನೆ ಅನು ದಾನ ಬಾರದಿರುವುದು, ಬಹುತೇಕ ಪಂಚಾಯಿತಿಗಳು ಸ್ವಂತ ಸಂಪನ್ಮೂಲ ಸಂಗ್ರಹದಲ್ಲಿ ಹಿಂದೆ ಬಿದ್ದಿರುವುದು ವಿದ್ಯುತ್ ಬಿಲ್ ಬಾಕಿ ಉಳಿಯಲು ಕಾರಣವಾಗಿದೆ ಎಂದು ಪಿಡಿಒ ಒಬ್ಬರು ಹೇಳಿದ್ದಾರೆ.




