ಕುಟುಂಬದವರೊಡನೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಉಪ ಮುಖ್ಯಮಂತ್ರಿ
ಮಂಜು ಕೋಟೆ
ಎಚ್. ಡಿ. ಕೋಟೆ: ತಾಲ್ಲೂಕಿನ ಸಂಬಂಧಿಕರ ರೆಸಾರ್ಟ್ ನಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಕುಟುಂಬ ಸಮೇತವಾಗಿ ಆಗಮಿಸಿ ತಮ್ಮ ಹುಟ್ಟುಹಬ್ಬ ವನ್ನು ಸರಳವಾಗಿ ಆಚರಿಸಿಕೊಂಡರು.
ರಾಜಕೀಯ, ಅಧಿಕಾರದ ಒತ್ತಡಗಳ ನಡುವೆಯೂ ಮೂರು ದಿನಗಳ ಕಾಲ ತಮ್ಮ ಹುಟ್ಟುಹಬ್ಬದ ನಿಮಿತ್ತ ಕುಟುಂಬಸ್ಥರೊಡನೆ ಕಾಲ ಕಳೆಯಲು ತಾಲ್ಲೂಕಿನ ಕಾರಾಪುರ ಸಮೀಪದ ಸೆರಾಯಿ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಬುಧವಾರ ಸಂಜೆ ಡಿ. ಕೆ. ಶಿವಕುಮಾರ್ ಅವರು ತಮ್ಮ ಪತ್ನಿ, ಮಗಳು, ಅಳಿಯ ಹಾಗೂ ಕುಟುಂಬಸ್ಥರೊಡನೆ ರೆಸಾರ್ಟ್ನಲ್ಲಿ ಉಳಿದಿದ್ದು, ಗುರುವಾರ ಬೆಳಿಗ್ಗೆ ಜಂಗಲ್ ಲಾಡ್ಜ್ ನ ವಾಹನಗಳಲ್ಲಿ ನಾಗರಹೊಳೆ ಅಭಯಾರಣ್ಯದ ದಮ್ಮನಕಟ್ಟೆಯ ಸಫಾರಿ ವಲಯವನ್ನು ವೀಕ್ಷಣೆ ಮಾಡಿದ್ದಾರೆ.
ಈ ವೇಳೆ ಹುಲಿ, ಚಿರತೆ, ಆನೆ, ಜಿಂಕೆ, ಕಡವೆ ಇನ್ನಿತರ ಪ್ರಾಣಿಗಳು ಕಾಣಿಸಿಕೊಂಡಾಗ ಖುಷಿ ವ್ಯಕ್ತಪಡಿಸಿದ್ದಾರೆ.
ಅರಣ್ಯದ ಉತ್ತಮವಾದ ವಾತಾವರಣ ನೋಡಿ ಎಲ್ಲರೂ ಖುಷಿಪಟ್ಟಿದ್ದಾರೆ. ಸಂಜೆ ಕಬಿನಿ ಹಿನ್ನೀರಿನಲ್ಲಿ ಬೋಟ್ ಸಫಾರಿ ನಡೆಸಿ ಆನಂದಪಟ್ಟಿದ್ದಾರೆ.
ತದನಂತರ ಕುಟುಂಬಸ್ಥರು ಡಿ. ಕೆ. ಶಿವಕುಮಾರ್ ಅವರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದರು. ತೆರೆದ ವಾಹನದಲ್ಲಿ ಸಫಾರಿಗೆ ಹೋಗುತ್ತಿದ್ದಾಗ ಅಕ್ಕ ಪಕ್ಕದ ಗ್ರಾಮಸ್ಥರು, ನಿವಾಸಿಗಳು ಡಿ. ಕೆ. ಶಿವಕುಮಾರ್ ಅವರಿಗೆ ಜೈಕಾರ ಕೂಗಿ ಮುಂದಿನ ಮುಖ್ಯಮಂತ್ರಿ ನೀವೇ ಎಂದು ಘೋಷಣೆ ಕೂಗಿದರು. ಈ ವೇಳೆ ಡಿಕೆಶಿ ಎಲ್ಲರತ್ತ ಕೈ ಬೀಸಿ ವಿಶ್ ಮಾಡಿದರು.
ಡಿ. ಕೆ. ಶಿವಕುಮಾರ್ ಅವರು ಉಪಮುಖ್ಯಮಂತ್ರಿ ಆದ ನಂತರ ತಮ್ಮ ಕುಟುಂಬ ಸಮೇತವಾಗಿ ತಾಲ್ಲೂಕಿನಲ್ಲಿ ಮೂರು ದಿನಗಳ ಕಾಲ ವಾಸ್ತವ್ಯ ಹೂಡಿರುವುದು ಇದೇ ಮೊದಲು.
ಈ ವರ್ಷ ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಕಬಿನಿಯಲ್ಲಿ ಕಾಲ ಕಳೆಯುವ ಮೂಲಕ ಆಚರಿಸಿದೆ. ಪ್ರಕೃತಿಯೊಂದಿಗೆ ಒಂದಾದ ಭಾವ, ಕಬಿನಿಯ ಸೌಂದರ್ಯ, ವನ್ಯ ಸಂಪತ್ತನ್ನು ಕಣ್ತುಂಬಿಕೊಂಡು ಪ್ರಶಾಂತವಾದ ಜಗತ್ತಿಗೆ ಕಾಲಿಟ್ಟ ಅನುಭವವಾಯಿತು. ಡಿ. ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ





