Mysore
26
few clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ದಸರಾ; ನೈಋತ್ಯ ರೈಲ್ವೆಗೆ ದಾಖಲೆ ಆದಾಯ

ಚಿರಂಜೀವ ಸಿ.ಹುಲ್ಲಹಳ್ಳಿ

ಜಂಬೂ ಸವಾರಿ ಒಂದೇ ದಿನ ೧ ಲಕ್ಷ ಮಂದಿ ರೈಲು ಪ್ರಯಾಣ

ದಸರಾಗಾಗಿ ೩೮ ವಿಶೇಷ ರೈಲುಗಳು ಸಂಚಾರ

೯,೪೦,೭೫೮ ಜನರು ರೈಲುಗಳಲ್ಲಿ ಯಾನ ಹಿಂದಿನ ವರ್ಷಕ್ಕಿಂತ ೨ ಕೋಟಿ ರೂ. ಹೆಚ್ಚುವರಿ ಗಳಿಕೆ

ನಾಡಹಬ್ಬ ದಸರಾದಲ್ಲಿ ಮೊದಲ ಬಾರಿ ೯ ಕೋಟಿ ರೂ. ವರಮಾನ 

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅವಧಿಯಲ್ಲಿ ಅರಮನೆ ನಗರಿಯ ಸೌಂದರ್ಯವನ್ನು ಕಣ್ತುಂಬಿ ಕೊಳ್ಳಲು ರಾಜ್ಯ-ಅಂತಾರಾಜ್ಯಗಳಿಂದ ಲಕ್ಷಾಂತರ ಪ್ರವಾಸಿಗರ ದಂಡು ಹರಿದುಬಂದಿದ್ದು, ಪ್ರಯಾಣಕ್ಕಾಗಿ ರೈಲು ಗಾಡಿಗಳನ್ನು ಗಣನೀಯ ಪ್ರಮಾಣದಲ್ಲಿ ಸಾರ್ವಜನಿಕರು ಉಪಯೋಗಿಸಿದ್ದಾರೆ. ಪರಿಣಾಮವಾಗಿ ನೈಋತ್ಯ

ರೈಲ್ವೆ ವಿಭಾಗಕ್ಕೂ ದಾಖಲೆ ಮಟ್ಟದ ಆದಾಯ ಹರಿದು ಬಂದಿದ್ದು, ರೈಲ್ವೆ ಇಲಾಖೆಗೆ ದಸರಾ ಬೂಸ್ಟರ್ ಆಗಿದೆ. ಈ ಬಾರಿ ದಸರಾ ಹಬ್ಬವು ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ತಂದಿದೆ. ದಸ ರೆಯ ೧೧ ದಿನಗಳಲ್ಲಿ ೯,೪೦,೭೫೮ ಪ್ರಯಾಣಿಕರು ಓಡಾಟಕ್ಕೆ ರೈಲನ್ನು ಅವಲಂಬಿಸಿದ್ದಾರೆ. ಹಾಗಾಗಿ ಇದೇ ಮೊದಲ ಬಾರಿಗೆ ಸರಿ ಸುಮಾರು ೯ ಕೋಟಿ ರೂ. ದಾಖಲೆ  ಪ್ರಮಾಣದ ಆದಾಯ ಸಂಗ್ರಹವಾಗಿದೆ.

ಮೈಸೂರಿನಲ್ಲಿ ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ವೀಕ್ಷಣೆಗೆ ಜನರು ಸಾಗರೋ ಪಾದಿಯಲ್ಲಿ ಹರಿದು ಬಂದಿದ್ದರು. ಅಲ್ಲದೆ, ದಸರಾ ಅವಧಿಯಲ್ಲಿ ಸಾಂಸ್ಕ ತಿಕ ಕಾರ್ಯ ಕ್ರಮಗಳನ್ನು ಏರ್ಪಡಿಸಲಾಗಿತ್ತು. ಯುವ ದಸರಾ ಕಾರ್ಯಕ್ರಮದಲ್ಲಿ ಬಾಲಿವುಡ್, ಸ್ಯಾಂಡಲ್‌ವುಡ್, ಟಾಲಿವುಡ್ ಗಾಯಕರು ಹಾಗೂ ಅರಮನೆ ಮುಂಭಾಗ ಸಂಗೀತ ವಿದ್ವಾಂಸರ ಸಾಂಸ್ಕ ತಿಕ ಕಾರ್ಯಕ್ರಮ ಗಳನ್ನೂ ಆಯೋಜಿಸಲಾಗಿತ್ತು. ಅಲ್ಲದೆ, ಮೈಸೂರು ನಗರದ ಬಹತೇಕ ವೃತ್ತಗಳು, ರಸ್ತೆಗಳು ಮತ್ತು ಕಟ್ಟಡಗಳನ್ನು ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿತ್ತು. ಜತೆಗೆ ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ, ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಹೆಚ್ಚಿನ ಪ್ರವಾಸಿಗರು ನಿರೀಕ್ಷೆ ಮೀರಿ ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು. ಹೀಗಾಗಿ ದಸರೆ ನೈಋತ್ಯ ರೈಲ್ವೆಗೆ ಭರ್ಜರಿ ವರಮಾನ ತಂದಿದೆ.

೩೮ ವಿಶೇಷ ರೈಲುಗಳು: ದಸರಾ ವಿಶೇಷವಾಗಿ ರೈಲ್ವೆ ಇಲಾಖೆಯಿಂದ ೩೮ ಹೆಚ್ಚುವರಿ ರೈಲು ಗಾಡಿಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅವುಗಳಲ್ಲಿ ೧೧ ಕಾಯ್ದಿರಿಸಿದ ವಿಶೇಷ ರೈಲುಗಳು ಮತ್ತು ೨೭ ಎಕ್ಸ್ ಪ್ರೆಸ್ ರೈಲುಗಳು ಸೇರಿದ್ದವು. ಬೆಂಗಳೂರು, ಯಶವಂತಪುರ, ಬೆಳಗಾವಿ, ವಿಜಯಪುರ, ಅರಸೀಕೆರೆ, ರಾಮನಾಥಪುರ, ಚಾಮರಾಜ ನಗರ, ತಾಳಗುಪ್ಪ, ತಿರುವೈನಲ್ಲಿ  ಭಾಗದಿಂದ ಹೆಚ್ಚಿನ ಪ್ರವಾಸಿಗರು ಮೈಸೂರಿಗೆ ಆಗಮಿಸಿದ್ದರು.

ಸೆ.೨೨ರಿಂದ ಅ.೨ರ ವರೆಗೆ ದಸರಾದಲ್ಲಿ ೯,೪೦,೨೫೮ ಮಂದಿ ಲಕ್ಷ ಪ್ರಯಾಣಿಕರು ಸಂಚಾರ ಮಾಡಿ ೯,೦೧,೦೩,೫೫೫ ರೂ. ಆದಾಯ ಸಂಗ್ರಹವಾಗಿದೆ. ಕಳೆದ ವರ್ಷದ ದಸರಾಗಿಂತ ಈ ಬಾರಿ ೨ ಕೋಟಿ ರೂ.ಹೆಚ್ಚು ಆದಾಯ ಹರಿದುಬಂದಿದೆ. ೨೦೨೪ನೇ ಸಾಲಿನ ದಸರಾದಲ್ಲಿ ೭,೮೩,೪೮,೦೯೦ ರೂ.ಆದಾಯ ಬಂದಿತ್ತು ಎಂದು ನೈಋತ್ಯ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ್ ಧರ್ಮರಾಜ್ ಕಲಗೊಂಡ ಮಾಹಿತಿ ನೀಡಿದ್ದಾರೆ.

೭ ಸಾವಿರ ಮಂದಿ ಮೇಲೆ ಕೇಸ್: ದಸರಾ ಸಂದರ್ಭದಲ್ಲಿ ಜನದಟ್ಟಣೆ ಹಿನ್ನೆಲೆಯಲ್ಲಿ ಟಿಕೆಟ್ಖರೀದಿಸದೆ ಸಂಚರಿಸಿ ೭,೯೪೦ ಪ್ರಯಾಣಿಕರನ್ನು ದಸ್ತಗಿರಿ ಮಾಡಿ ಸುಮಾರು ೪೪,೦೪,೯೮೫ ರೂ. ದಂಡ ವಿಧಿಸಲಾಗಿದೆ. ಕಳೆದ ವರ್ಷ ಇದೇ ವೇಳೆ ಟಿಕೆಟ್ ಪಡೆಯದೆ ಪ್ರಯಾಣ ಮಾಡಿದ ಸುಮಾರು ೫,೮೪೬ ಪ್ರಯಾಣಿಕರ ಮೇಲೆ ಕೇಸ್ ಹಾಕಿ ೨೪,೮೫,೦೦೦ ದಂಡ ವಿಧಿಸಲಾಗಿತ್ತು ಎನ್ನಲಾಗಿದೆ.

ಜಂಬೂ ಸವಾರಿ ದಿನ ೧ಲಕ್ಷ ಮಂದಿ ಪ್ರಯಾಣ:  ಸಾಮಾನ್ಯವಾಗಿ ಪ್ರತಿ ದಿನ ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ೫೦ ರಿಂದ ೫೨ ಸಾವಿರ ಪ್ರಯಾಣಿಕರು ಸಂಚರಿಸುತ್ತಾರೆ. ದಸರಾ ಅವಽಯ ೧೧ ದಿನಗಳಲ್ಲಿ ಪ್ರತಿನಿತ್ಯ ೬೫-೭೦ ಸಾವಿರ ಮಂದಿ ಪ್ರಯಾಣಿಸಿದ್ದಾರೆ. ದಸರಾ ಮಹೋತ್ಸವ ಆಕರ್ಷಣೆಯಾದ ಜಂಬೂ ಸವಾರಿಯನ್ನು ಕಣ್ತುಂಬಿಕೊಳ್ಳಲು ಒಂದೇ ದಿನ ೧ ಲಕ್ಷದ ೭ ಸಾವಿರ ಪ್ರಯಾಣಿಕರು ರೈಲಿನ ಮೂಲಕ ಸಾಂಸ್ಕೃತಿಕ ನಗರಿಗೆ ಕಾಲಿಟ್ಟು ದಾಖಲೆ ನಿರ್ಮಿಸಿದ್ದಾರೆ.

ರೈಲ್ವೆ ಆಪ್‌ನಲ್ಲಿ ದೂರುಗಳು ಕಡಿಮೆ:  ಪ್ರಯಾಣಿಕರು ರೈಲಿನಲ್ಲಿರುವ ಸಮಸ್ಯೆ ಗಳನ್ನು ಕುರಿತು ರೈಲ್ವೆ ಆಪ್ ಮೂಲಕ ದೂರು ದಾಖಲಿಸಬಹುದು. ಈ ಬಾರಿ ಜಂಬೂ ಸವಾರಿ ವೇಳೆ ಕೇವಲ ೧೫ ದೂರುಗಳು ಮಾತ್ರ ಆಪ್‌ನಲ್ಲಿ ದಾಖಲಾಗಿವೆ. ನೀರು, ಶೌಚಾಲಯ ಸ್ವಚ್ಛತೆ, ಎಸಿ ಸಮಸ್ಯೆ ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ದೂರು ನೀಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಕಳೆದ ಬಾರಿ ಜಂಬೂಸವಾರಿ ಮೆರವಣಿಗೆ ದಿನವೇ ೬೫ ದೂರುಗಳು ಆಪ್ ಮೂಲಕ ದಾಖಲಾಗಿದ್ದವು.

” ದಸರಾ ಸಂದರ್ಭದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಹೆಚ್ಚಿನ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಿಕೊಂಡು ಯಾವ ಲೋಪವಾಗದಂತೆ ಯಶಸ್ವಿಯಾಗಿ ಕಾರ್ಯನಿರ್ವಹಿಸಲಾಗಿದೆ. ಹುಬ್ಬಳ್ಳಿ, ಬೆಂಗಳೂರು ಇತರೆ ಸ್ಥಳಗಳಿಂದ ಹೆಚ್ಚುವರಿ ಸಿಬ್ಬಂದಿಯನ್ನು ದಸರಾ ಕರ್ತವ್ಯಕ್ಕಾಗಿ ನಿಯೋಜನೆ ಮಾಡಲಾಗಿತ್ತು. ಈ ಬಾರಿ ಹೆಚ್ಚಿನ ಆದಾಯ ಕೂಡ ಬಂದಿದೆ.

– ಗಿರೀಶ್ ಧರ್ಮರಾಜ್ ಕಲಗೊಂಡ, ಸಾರ್ವಜನಿಕ ಸಂಪರ್ಕ ಅಧಿಕಾರಿ, ನೈಋತ್ಯ ರೈಲ್ವೆ ವಿಭಾಗ, ಮೈಸೂರು

Tags:
error: Content is protected !!