Mysore
21
few clouds

Social Media

ಗುರುವಾರ, 05 ಮಾರ್ಚ್ 2026
Light
Dark

ದಸರಾ: ಸಿಂಗಾರಗೊಳ್ಳುತ್ತಿರುವ ಸಾಂಸ್ಕೃತಿಕ ನಗರಿ

ಪ್ರಮುಖ ವೃತ್ತಗಳಿಗೆ ಸುಣ್ಣ-ಬಣ್ಣ, ದೀಪಾಲಂಕಾರ; ರಸ್ತೆ,ಫುಟ್‌ಪಾತ್‌ಗಳ ದುರಸ್ತಿ ಕಾರ್ಯ ಚುರುಕು

ಮೈಸೂರು: ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗುತ್ತಿದ್ದಂತೆಯೇ ಅರಮನೆ ನಗರಿ ಮೈಸೂರಿನಲ್ಲಿ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ.

ಅರಮನೆ ಸುತ್ತಮುತ್ತಲ ಪ್ರದೇಶಗಳಲ್ಲಿ ಅರಮನೆ ನಗರಿಯನ್ನು ಸುಂದರಗೊಳಿಸುವ ಕಾಮಗಾರಿಯನ್ನು ಮೈಸೂರು ನಗರಪಾಲಿಕೆ ಶುರು ಮಾಡಿದೆ. ಅರಮನೆ ಆವರಣದ ಜಯಮಾರ್ತಾಂಡ ದ್ವಾರ, ಬಲರಾಮ ದ್ವಾರ, ಅರಮನೆ ಮಂಡಳಿ ಕಚೇರಿ ಎದುರು, ಆನೆಗೆ ಅಂಬಾರಿ ಕಟ್ಟುವ ಜಾಗದಲ್ಲಿ ಅಳವಡಿಸಿರುವ ಗ್ರಿಲ್‌ಗಳಿಗೆ ಬಣ್ಣ ಬಳಿಯುವ ಕೆಲಸ ನಡೆಯುತ್ತಿದೆ. ಹಾಗೆಯೇ ಉದ್ಯಾನವನದಲ್ಲಿ ಹೊಸ ಹೂವಿನ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ.

ದಸರಾ ಉದ್ಘಾಟನೆ ಹೊತ್ತಿಗೆ ಅರಮನೆಯ ಎದುರಿನ ಅಂಗಳ, ಉದ್ಯಾನವನ್ನು ಹೂವುಗಳ ರಾಶಿಯಿಂದ ಕಂಗೊಳಿಸುವಂತೆ ಮಾಡುವ ಕೆಲಸ ನಡೆಯುತ್ತಿದೆ. ಅದೇ ರೀತಿ ಜಯ ಮಾರ್ತಾಂಡ ದ್ವಾರ ಮೊದಲಾದ ಕಡೆಗಳಲ್ಲಿ ಕೆಟ್ಟು ಹೋಗಿರುವ ವಿದ್ಯುತ್ ಬಲ್ಬ್‌ಗಳನ್ನು ಬದಲಿಸಿ ಹೊಸದಾಗಿ ಅಳವಡಿಸುವುದು, ಗೋಪುರಗಳಿಗೆ ಬಣ್ಣ ಬಳಿಯುವ ಕೆಲಸ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

೯ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ: ನಗರದ ಸೌಂದರ್ಯಕ್ಕೆ ಪ್ರಮುಖ ಪಾತ್ರ ವಹಿಸಿರುವ ನಗರ ಪಾಲಿಕೆಯು ೯ ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಆರಂಭಿಸಿದೆ. ಡಿ.ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಬನ್ನಿಮಂಟಪ ರಸ್ತೆ, ಕೋಟೆ ಮಾರಮ್ಮ ದೇವಸ್ಥಾನದ ರಸ್ತೆ, ಹಾರ್ಡಿಂಜ್ ವೃತ್ತ, ಮೈಸೂರು ವಿವಿ ರಸ್ತೆ, ಚಾಮರಾಜ ಜೋಡಿ ರಸ್ತೆ, ಕಲಾಮಂದಿರದ ರಸ್ತೆ, ಚಾಮುಂಡಿವಿಹಾರ ಕ್ರೀಡಾಂಗಣದ ರಸ್ತೆ ಬದಿಗಳಲ್ಲಿ ಇರುವ ಫುಟ್‌ಪಾತ್‌ಗಳ ದುರಸ್ತಿ, ಬಣ್ಣ ಬಳಿಯುವ ಕೆಲಸ ಮಾಡಲಾಗುತ್ತಿದೆ.

ನಗರದ ಪ್ರಮುಖ ವೃತ್ತಗಳಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ, ಚಾಮರಾಜೇಂದ್ರ ಒಡೆಯರ್ವೃತ್ತ, ಜಯಚಾಮರಾಜ ಒಡೆಯರ್ ವೃತ್ತಗಳಿಗೆ ಬಣ್ಣ ಬಣ್ಣದ ದೀಪಾಲಂಕಾರ ಮಾಡಲು ಕಾರ್ಮಿಕರು ಕಾಮಗಾರಿ ಆರಂಭಿಸಿ ಪಕ್ಷಿಗಳು ಕಟ್ಟಿದ್ದ ಗೂಡುಗಳನ್ನು ತೆಗೆದು ಶುಚಿಗೊಳಿಸಿ ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದಾರೆ

” ನಗರದಲ್ಲಿ ಅಂದ ಚೆಂದದಿಂದ ಕಣ್ಮನ ಸೆಳೆಯುವ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾರ್ಯದಲ್ಲಿ ೨೦೦ಕ್ಕೂ ಹೆಚ್ಚು ಕಾರ್ಮಿಕರು ತೊಡಗಿದ್ದಾರೆ. ಚಾಮರಾಜ ಜೋಡಿ ರಸ್ತೆ, ಹಾರ್ಡಿಂಜ್ ವೃತ್ತ, ರಾಮಸ್ವಾಮಿ ವೃತ್ತ, ಲಲಿತಮಹಲ್ ರಸ್ತೆ,ಸಯ್ಯಾಜಿರಾವ್ ರಸ್ತೆಯಲ್ಲಿರುವ ಮರಗಳಿಗೆ ದೀಪಾಲಂಕಾರ ಮಾಡಲಾಗುತ್ತಿದೆ. ಬಹುಬೇಗನೆ ಕೆಲಸ ಮುಗಿಸಲು ಸಣ್ಣ ಸಣ್ಣ ಮೊತ್ತದಿಂದ ದೊಡ್ಡ ಮೊತ್ತದವರೆಗೂ ಪ್ರತ್ಯೇಕ ಟೆಂಡರ್ ನೀಡಲಾಗಿದೆ. ಇದರಿಂದಾಗಿ ತಮಗೆ ಸಿಕ್ಕ ಪ್ರದೇಶಗಳಲ್ಲಿ ಗುತ್ತಿಗೆದಾರರು ಲೈಟಿಂಗ್ಸ್ ಅಳವಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.”

Tags:
error: Content is protected !!