Mysore
33
scattered clouds

Social Media

ಭಾನುವಾರ, 22 ಮಾರ್ಚ್ 2026
Light
Dark

ವಾಣಿಜ್ಯ ಗ್ಯಾಸ್ ಕೊರತೆ; ತರಕಾರಿ ಬೆಲೆ ಕುಸಿತ

ಮೈಸೂರು: ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಗಳ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವ ಪರಿಣಾಮವಾಗಿ ಹಾಗೂ ಮಧ್ಯಮ ವರ್ಗದ ಹೋಟೆಲ್‌ಗಳಿಗೆ ಸಿಲಿಂಡರ್ ಕೊರತೆಯಾಗಿ ಹೋಟೆಲ್‌ಗಳು ಸರಿಯಾಗಿ ನಡೆಯದ ಕಾರಣ ಜಿಲ್ಲೆಯಲ್ಲಿ ತರಕಾರಿ ಬೆಳೆಗಳಿಗೆ ಬೇಡಿಕೆ ಕುಸಿಯಲು ಪ್ರಾರಂಭವಾಗಿದೆ. ಪರಿಸ್ಥಿತಿ ಇದೇ ರೀತಿ ಕೆಲವು ದಿನಗಳ ಕಾಲ ಮುಂದುವರಿದರೆ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ತರಕಾರಿ  ಬೆಳೆಯುತ್ತಾರೆ. ಈ ತರಕಾರಿ ಕೇವಲ ಜಿಲ್ಲೆಯ ಜನರು ಖರೀದಿಸುವುದು ಮಾತ್ರವಲ್ಲದೆ ಕೊಡಗು, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳ ರಾಜ್ಯಕ್ಕೆ ಹೆಚ್ಚಿನ ಪ್ರಮಾಣ ದಲ್ಲಿ ಪೂರೈಕೆಯಾಗುತ್ತದೆ. ಆದರೆ, ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಯುದ್ಧ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗ್ಯಾಸ್ ಪೂರೈಕೆಯಲ್ಲಿ ದೊಡ್ಡ ಪ್ರಮಾಣದ ವ್ಯತ್ಯಯ ಉಂಟಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

ಸಿಲಿಂಡರ್ ದೊರೆಯದ ಹಿನ್ನೆಲೆಯಲ್ಲಿ ಸಾಕಷ್ಟು ಹೋಟೆಲ್‌ಗಳು ಹಾಗೂ ರಸ್ತೆ ಬದಿ ವ್ಯಾಪಾರಿಗಳು ತರಕಾರಿಯ ಬಳಕೆ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ತರಕಾರಿಗೆ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಬೆಲೆ ಕುಸಿತ ಕಾಣಲು ಪ್ರಾರಂಭವಾಗಿದೆ. ಜಿಲ್ಲೆಯ ರೈತರು ಉತ್ತಮ ಬೆಲೆ ದೊರೆಯುವ ನಿರೀಕ್ಷೆಯಲ್ಲಿ ತರಕಾರಿ ಬೆಳೆಗಳನ್ನು ಬೆಳೆದಿದ್ದರು. ಆದರೆ, ಇದೀಗ ತರಕಾರಿಯ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ರೈತರು ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಲೆ ಕುಸಿತ: ಜಿಲ್ಲೆಯಲ್ಲಿ ಮಾರ್ಚ್ ೧೦ರ ನಂತರ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಯಿತು. ನಂತರ, ರಾಜ್ಯ ಸರ್ಕಾರ ಶೇ.೨೦ರಷ್ಟು ಕಮರ್ಷಿಯಲ್ ಸಿಲಿಂಡರ್ ಪೂರೈಸಲು ಅಗತ್ಯ ಕ್ರಮಕೈಗೊಂಡರೂ ಕೆಲವು ಹೋಟೆಲ್‌ಗಳಿಗೆ ಸಾಕಾಗದೆ ತಿಂಡಿ ಪದಾರ್ಥಗಳ ತಯಾರಿಯನ್ನು ಕಡಿಮೆ ಮಾಡಿವೆ.

ಹೀಗಾಗಿ ಮಾ.೧೦ ರವರೆಗೆ ಜಿಲ್ಲೆಯಲ್ಲಿ ತರಕಾರಿಗೆ ಉತ್ತಮ ಬೆಲೆ ಇತ್ತು. ನಂತರ ಬೆಲೆ ಕುಸಿಯಲು ಪ್ರಾರಂಭವಾಯಿತು. ವಿಶೇಷವಾಗಿ ಬೀನ್ಸ್ ಬೆಲೆ ಪಾತಾಳಕ್ಕೆ ಕುಸಿಯಲು ಪ್ರಾರಂಭವಾಗಿದ್ದು, ಉಳಿದ ತರಕಾರಿಗಳ ಬೆಲೆಯಲ್ಲಿ ಅಲ್ಪ ಕುಸಿತ ಹಾಗೂ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ.

” ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳು ಪೂರೈಕೆಯಾಗದ ಹಿನ್ನೆಲೆಯಲ್ಲಿ ಹೋಟೆಲ್ ಹಾಗೂ ರಸ್ತೆ ಬದಿ ವ್ಯಾಪಾರಿಗಳು ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳನ್ನು ಖರೀದಿಸುತ್ತಿಲ್ಲ. ನಾನು ಟೊಮೆಟೊ, ಬೀನ್ಸ್, ಹೀರೇಕಾಯಿಯನ್ನು ಬೆಳೆಯುತ್ತಿದ್ದೇನೆ. ಆದರೆ, ತರಕಾರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯುತ್ತಿಲ್ಲ.”

-ಬರಡನಪುರ ಮಹೇಶ್, ರೈತ

” ಗ್ಯಾಸ್ ಸಿಲಿಂಡರ್ ಪೂರೈಕೆ ಇಲ್ಲದ ಕಾರಣ ಕೆಲವು ಹೋಟೆಲ್‌ಗಳನ್ನು ಈಗಾಗಲೇ ಮುಚ್ಚಲಾಗಿದೆ. ಹೋಟೆಲ್‌ಗಳಿಗೆ ಶೇ.೫೦ರಷ್ಟು ಪ್ರಮಾಣದಲ್ಲಾದರೂ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಹಲವರು ಇಂಡಕ್ಷನ್ ಸ್ಟೌ, ಸೌದೆ ಒಲೆಯ ಮೂಲಕ ಹೋಟೆಲ್‌ನ್ನು ಮುನ್ನಡೆಸುತ್ತಿದ್ದಾರೆ. ಸರ್ಕಾರ ಕೂಡಲೇ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಬೇಕು.”

-ಸಿ.ನಾರಾಯಣ ಗೌಡ, ಅಧ್ಯಕ್ಷ, ಜಿಲ್ಲಾ ಹೋಟೆಲ್ ಮಾಲೀಕರ ಸಂಘ, ಮೈಸೂರು

 

 

Tags:
error: Content is protected !!