Mysore
25
overcast clouds

Social Media

ಶನಿವಾರ, 28 ಮಾರ್ಚ್ 2026
Light
Dark

ಇಂದು ಶನಿವಾರಸಂತೆ ಬಸ್ ನಿಲ್ದಾಣ ಉದ್ಘಾಟನೆ

ಲಕ್ಷ್ಮೀಕಾಂತ್ ಕೊಮಾರಪ್ಪ

ಜನತೆಯ ೩೦ ವರ್ಷಗಳ ಕನಸು ಕೊನೆಗೂ ನನಸು; ೧.೦೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನಿಲ್ದಾಣ

ಸೋಮವಾರಪೇಟೆ: ತಾಲ್ಲೂಕಿನ ಶನಿವಾರ ಸಂತೆ ಭಾಗದ ಜನರ ೩೦ ವರ್ಷಗಳ ಕನಸು ಕೊನೆಗೂ ನನಸಾಗಿದ್ದು, ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ವತಿಯಿಂದ ೧.೦೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಬಸ್ ನಿಲ್ದಾಣ ಇಂದು ಉದ್ಘಾಟನೆಯಾಗಲಿದೆ.

ಬೆಂಗಳೂರು, ಮೈಸೂರು, ಮಂಗಳೂರು, ದಾವಣಗೆರೆ ಮುಂತಾದ ಕಡೆಗಳಿಗೆ ಹಾಗೂ ಹಾಸನ, ಮಡಿಕೇರಿ, ಅರಕಲಗೂಡು, ಕುಶಾಲನಗರ ಕಡೆಗಳಿಗೆ ಶನಿವಾರಸಂತೆ ಮಾರ್ಗವಾಗಿ ಪ್ರತಿ ದಿನ ಸುಮಾರು ೬೦ ಕೆಎಸ್‌ಆರ್‌ಟಿಸಿ ಬಸ್ಗಳು ಸಂಚರಿಸುತ್ತವೆ. ಆದರೆ ಇಷ್ಟೊಂದು ಸಂಖ್ಯೆ ಯಲ್ಲಿ ರಸ್ತೆ ಸಾರಿಗೆ ಬಸ್‌ಗಳು ಸಂಚರಿಸುತ್ತಿದ್ದರೂ ಶನಿವಾರಸಂತೆ ಪಟ್ಟಣದಲ್ಲಿ ಪ್ರತೇಕವಾದ ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣ ಇಲ್ಲದ ಕಾರಣ ಪ್ರಯಾಣಿಕರು ಪರದಾಡುತ್ತಿದ್ದರು.

ಹಲವು ವರ್ಷಗಳಿಂದ ಪಟ್ಟಣದ ಕೆಆರ್‌ಸಿ ವೃತ್ತದಲ್ಲಿ ರಸ್ತೆ ಸಾರಿಗೆ, ಖಾಸಗಿ ಬಸ್‌ಗಳು ಒಂದೆ ಕಡೆಗಳಲ್ಲಿ ನಿಲುಗಡೆಗೊಳ್ಳುತ್ತಿದ್ದರಿಂದ ಇಲ್ಲಿ ದಿನನಿತ್ಯ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿತ್ತು. ಇದೀಗ ೩೦ ವರ್ಷಗಳ ಬಸ್ ನಿಲ್ದಾಣದ ಕನಸು ನನಸಾಗಿದ್ದು, ಇಂದು ಉದ್ಘಾಟನಾ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಶನಿವಾರಸಂತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ೨೦೨೩ರಲ್ಲಿ ಸರ್ಕಾರದಿಂದ ಹಸಿರು ನಿಶಾನೆ ಸಿಕ್ಕಿತ್ತು. ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಪ್ರವಾಸಿ ಮಂದಿರ(ಐಬಿ) ಬಳಿಯಲ್ಲಿರುವ ಒಂದು ಎಕರೆ ಜಾಗದಲ್ಲಿ ನಿಲ್ದಾಣ ನಿರ್ಮಿಸಲು ಗ್ರಾಪಂನಿಂದ ಸ್ಥಳ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಕೆಎಸ್‌ಆರ್‌ಟಿಸಿ ಸಂಸ್ಥೆಯ ಪುತ್ತೂರು ವಿಭಾಗದ ವತಿಯಿಂದ ಬಸ್ ನಿಲ್ದಾಣ ನಿರ್ಮಿಸಲು ಸರ್ಕಾರ ಆದೇಶ ನೀಡಿತ್ತು.

೨೦೨೪ರಲ್ಲಿ ಪುತ್ತೂರು ವಿಭಾಗವು ಪ್ರಾರಂಭಿಕ ಹಂತವಾಗಿ ಬಸ್ ನಿಲ್ದಾಣದ ಕಟ್ಟಡ ಕಾಮಗಾರಿಗಾಗಿ ೧ ಕೋಟಿ ೫ ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿ ಕಟ್ಟಡ ಕಾಮಗಾರಿಗೆ ಟೆಂಡರ್ ನೀಡಿತ್ತು. ಈ ಸಂದರ್ಭದಲ್ಲಿ ೨೦೨೪ರ ನ.೯ರಂದು ರಸ್ತೆ ಸಾರಿಗೆ ಸಚಿವ ಬಿ.ರಾಮಲಿಂಗಾರೆಡ್ಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಕಟ್ಟಡ, ಪ್ಲೋರಿಂಗ್ ಸೇರಿದಂತೆ ಸಂಪೂರ್ಣವಾಗಿ ಕಾಮಗಾರಿ ಮುಕ್ತಾಯಗೊಂಡಿದೆ.

ಹೆಚ್ಚುವರಿ ಅಭಿವೃದ್ಧಿ ಕಾಮಗಾರಿಗೆ ಕೆಎಸ್ ಆರ್‌ಟಿಸಿ ಪುತ್ತೂರು ವಿಭಾಗವು ಮತ್ತೆ ಸರ್ಕಾರಕ್ಕೆ ೧ ಕೋಟಿ ೪೫ ಲಕ್ಷ ರೂ.ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಸಂಬಂಧ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಅವರು ಬೇಡಿಕೆಗೆ ಸ್ಪಂದಿಸಿದ್ದು, ಈಗ ಅನುದಾನ ಮಂಜೂರಾಗಿದೆ.

ಇಂದು ಉದ್ಘಾಟನಾ ಕಾರ್ಯಕ್ರಮ:  ಶನಿವಾರಸಂತೆಯಲ್ಲಿ ೦.೬೫ ಎಕರೆ ವಿಸ್ತೀರ್ಣ ದಲ್ಲಿ ೧೦೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಬಸ್ ನಿಲ್ದಾಣದ ಉದ್ಘಾಟನಾ ಸಮಾರಂಭವು ಇಂದು ಬೆಳಿಗ್ಗೆ ೧೧.೩೦ ಗಂಟೆಗೆ ನಡೆಯಲಿದೆ. ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸ ರಾಜು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್, ಶಾಸಕರಾದ ಡಾ.ಮಂಥರ್ ಗೌಡ, ಎ.ಎಸ್.ಪೊನ್ನಣ್ಣ, ಸಂಸದ ಯದುವೀರ್, ರಾಜ್ಯಸಭಾ ಸದಸ್ಯ ಅಜಯ್ ಮಾಕನ್, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ, ಎಸ್. ಎಲ್.ಭೋಜೇಗೌಡ, ಡಾ.ಧನಂಜಯ ಸರ್ಜಿ, ಮೊಹಮ್ಮದ್ ರಿಜ್ವಾನ್ ನವಾಬ್, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ, ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷರಾದ ಗೀತಾ ಹರೀಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಟಿ.ಎಂ.ಧರ್ಮಜಾ ಉತ್ತಪ್ಪ, ಇತರರು ಪಾಲ್ಗೊಳ್ಳಲಿದ್ದಾರೆ.

” ಶನಿವಾರಸಂತೆ ಪ್ರತ್ಯೇಕ ಬಸ್ ನಿಲ್ದಾಣ ಇರಲಿಲ್ಲ. ಪಟ್ಟಣದಲ್ಲಿ ಸರ್ಕಾರಿ ಬಸ್ ನಿಲ್ದಾಣದ ಅವಶ್ಯ ಇತ್ತು. ಈ ಸಂಬಂಧ ೩೦ ವರ್ಷಗಳ ಸಾರ್ವಜನಿಕರ, ಪ್ರಯಾಣಿಕರ ಕೂಗಿಗೆ ತಡವಾಗಿದ್ದರೂ ಈಗ ಸ್ಪಂದನೆ ಸಿಕ್ಕಿದ್ದು, ಸಾರ್ವಜನಿಕರ ಕನಸು ಈಗ ನನಸಾಗಿದೆ. ಈಗಿನ ಹಾಲಿ ಶಾಸಕರ ಪ್ರಯತ್ನದಿಂದ ಶನಿವಾರಸಂತೆಯಲ್ಲಿ ಸರ್ಕಾರಿ ಬಸ್ ನಿಲ್ದಾಣ ನಿರ್ಮಾಣವಾಗಿರುವುದು ನಮ್ಮೆಲ್ಲರಿಗೂ ಸಂತಸ ತಂದಿದೆ.”

-ನಿಶ್ಚಲ್ ಗೌಡ, ವರ್ತಕ, ಶನಿವಾರಸಂತೆ

” ಶನಿವಾರಸಂತೆಯಲ್ಲಿ ಪ್ರಯಾಣಿಕರ ಹಲವಾರು ವರ್ಷಗಳ ಬೇಡಿಕೆಯಂತೆ ಈಗ ಪಟ್ಟಣದ ಬೈಪಾಸ್ ರಸ್ತೆ ಸಮೀಪದ ಜಾಗದಲ್ಲಿ ಸರ್ಕಾರಿ ಬಸ್ ನಿಲ್ದಾಣವನ್ನು ಸರ್ಕಾರ ಮತ್ತು ರಸ್ತೆ ಸಾರಿಗೆಯ ಪುತ್ತೂರು ವಿಭಾಗದ ವತಿಯಿಂದ ನಿರ್ಮಿಸಲಾಗಿದೆ. ಬಸ್ಸು ನಿಲ್ದಾಣದ ಕಾಮಗಾರಿ ಸಂಪೂರ್ಣವಾಗಿ ಮುಗಿದಿದ್ದು, ಇಂದು ಲೋಕಾರ್ಪಣೆಗೊಳ್ಳಲಿದೆ.”

-ಗೀತಾ ಹರೀಶ್, ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷೆ

” ಶನಿವಾರಸಂತೆಯಲ್ಲಿ ಸರ್ಕಾರದ ಅನುದಾನದ ಮೂಲಕ ಮತ್ತು ಕೆಎಸ್‌ಆರ್ಟಿಸಿ ಪುತ್ತೂರು ವಿಭಾಗದ ವತಿಯಿಂದ ೧ ಕೋಟಿ ೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬಸ್ ನಿಲ್ದಾಣದ ಮೊದಲ ಹಂತದ ಕಾಮಗಾರಿ ಈಗ ಸಂಪೂರ್ಣವಾಗಿ ಮುಗಿದಿದೆ. ಎಲ್ಲರ ಸಹಕಾರದಿಂದ ಈ ಭಾಗದ ಜನರ ಕನಸು ನನಸಾಗಿದೆ.”

-ಡಾ.ಮಂಥರ್ ಗೌಡ, ಶಾಸಕ, ಮಡಿಕೇರಿ ಕ್ಷೇತ್ರ

 

 

Tags:
error: Content is protected !!