Mysore
25
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಅರೆಬರೆ ಸ್ಥಳಾಂತರಗೊಂಡಿರುವ ಬೊಕ್ಕಹಳ್ಳಿ

ಅಲ್ಲಿದೆ ಹೊಸ ಊರು, ನದಿ ಮಗ್ಗುಲಿನಲ್ಲೇ ಉಳಿದಿದೆ ಹಳೇ ಊರು

ಮೈಸೂರು/ನಂಜನಗೂಡು: ಈ ಊರಿನ ಅಂಚಿನಲ್ಲಿ ನಿಂತು ನೋಡಿದರೆ ಕಪಿಲಾ ನದಿಯ ವಿಹಂಗಮ ನೋಟ ಕಣ್ಣಿಗೆ ದಕ್ಕುತ್ತದೆ. ನೀರು ಯಾರ ಹಂಗೂ ಇಲ್ಲದೆ ಓಡುತ್ತಿರುತ್ತದೆ. ಹೊಸದಾಗಿ ನೋಡಿದವರಿಗೆ ಮನೋಲ್ಲಾಸ. ಆದರೆ, ಸ್ಥಳೀಯರಿಗೂ ಪ್ರವಾಹದ ಭೀತಿ ನಿರಂತರವಾಗಿ ಕಾಡುತ್ತದೆ.

ನೇರವಾಗಿ ಊರಿನಲ್ಲೇ ಮಳೆಯಾದರೆ ಚಿಂತೆ ಇಲ್ಲ. ಆದರೆ, ದೂರದ ಕೇರಳದ ವಯನಾಡಿನಲ್ಲಿ ಮಳೆ ಬಂದರೆ ಈ ಗ್ರಾಮದ ಜನರಿಗೆ ಚಿಂತೆ. ಏಕೆಂದರೆ ಅಲ್ಲಿ ಜೋರಾಗಿ ಮಳೆ ಸುರಿದರೆ, ಕಬಿನಿ ಅಣೆಕಟ್ಟೆಯಿಂದ ನೀರಿನ ಹೊರಹರಿವು ಹೆಚ್ಚಳವಾಗುತ್ತದೆ. ಕಪಿಲಾ ನದಿಯು ಈ ಗ್ರಾಮದ ಮನೆಗಳಿಗೆ ನುಗ್ಗಿ ತುಂಟಾಟವಾಡುತ್ತದೆ. ಸ್ಥಳೀಯ ನಿವಾಸಿಗಳಿಗೆ ಅದು ಸಂಕಟಕ್ಕೆ ಕಾರಣವಾಗುತ್ತದೆ. ನಂಜನಗೂಡು ತಾಲ್ಲೂಕಿನ ಬೊಕ್ಕಹಳ್ಳಿ ಗ್ರಾಮಕ್ಕೆ ಪ್ರವಾಹ ಪರಿಸ್ಥಿತಿ ಸಂತ್ರಸ್ತರ ಪಾಡು ವರದಿಗಾಗಿ ‘ಆಂದೋಲನ’ ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ರಲ್ಲಿ ಕೋಟಿ ಅವರ ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿದ್ದ ‘ಆಂದೋಲನ’ ದಿನಪತ್ರಿಕೆಯ ತಂಡವನ್ನು ಕಂದಾಯ ಇಲಾಖೆ ಅಧಿಕಾರಿಗಳು ಎಂದು ಸ್ಥಳೀಯರು ಭಾವಿಸಿದಂತೆ ಇತ್ತು.

ವಾಸ್ತವ ವಿಷಯವನ್ನು ಹೇಳಿದ ನಂತರ ಅವರ ಕುತೂಹಲ ಬೇರೆ ಮಜಲಿಗೆ ಹೊರಳಿತು. ಈಗ ಕೆಲ ದಿನಗಳ ಹಿಂದೆ ಬಂದಿತ್ತಲ್ಲ ಪ್ರವಾಹ ಆಗ ನೀರು ಈ ಅಂಬೇಡ್ಕ‌ರ್ ಸಮುದಾಯ ಭವನವನ್ನು ದಾಟಿ, ಊರೊಳಗಿರುವ ಹಲವು ಮನೆಗಳಿಗೆ ನುಗ್ಗಿತ್ತು. ನಮ್ಮ ಮನೆಗೂ ಬಂದಿತ್ತು. ಅವತ್ತು ರಾತ್ರಿ ನಮ್ಮ ತಾಯಿಯನ್ನು ಸುರಕ್ಷಿತವಾಗಿದ್ದ ಬಂಧುಗಳ ಮನೆಗೆ ಕಳುಹಿಸಿ, ನಾನು ಮಾತ್ರ ಮನೆಯಲ್ಲೇ ಮಲಗಿದ್ದೆ ಎಂದವರು ಗ್ರಾಮದ ರಂಗಸ್ವಾಮಿ. ಇತ್ತೀಚೆಗೆ ನದಿಯಲ್ಲಿ ಪ್ರಳಯೋಪಾದಿಯಲ್ಲಿ ಪ್ರವಾಹ ಉಕ್ಕೇರಿತು.
ನಮ್ಮ ಊರಿನ ಸಮಸ್ಯೆಯ ಬಗ್ಗೆ ಹಲವು ವರ್ಷಗಳಿಂದಲೂ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತರುತ್ತಲೇ ಇದ್ದೇವೆ. ಪ್ರಯೋಜನವಾಗಿಲ್ಲ ಎಂಬುದು ಗ್ರಾಮದ ಯುವಕ ಪ್ರಜ್ವಲ್ ಅಳಲು.‌

1962ರಲ್ಲೇ ಸ್ಥಳಾಂತರ; ಅಪೂರ್ಣ
ಕಪಿಲಾ ನದಿಯ ಅಂಚಿನಲ್ಲಿರುವ ಈ ಊರೇ ಹಳೇ ಬೊಕ್ಕಹಳ್ಳಿ. 1962ರಲ್ಲೇ ನದಿಯಲ್ಲಿ ಉಂಟಾಗುತ್ತಿದ್ದ ಪ್ರವಾಹದಿಂದ ಜನರು ತಾಪತ್ರಯ ಪಡುತ್ತಿದ್ದುದನ್ನು ಗಮನಿಸಿದ ಜನಪ್ರತಿನಿಧಿಗಳು, ಇಲ್ಲಿಂದ ಸುಮಾರು 2 ಕಿ.ಮೀ. ದೂರದಲ್ಲಿರುವ ಸುರಕ್ಷಿತ ಸ್ಥಳದಲ್ಲಿ ಈ ಊರಿನವರೆಲ್ಲರಿಗೂ ನಿವೇಶನ ಒದಗಿಸಿದ್ದರು. ಹಲವರು ಅಲ್ಲಿಗೆ ಹೋಗಿ ನೆಲೆಸಿದರು. ಅದು ಹೊಸ ಬೊಕ್ಕಹಳ್ಳಿ ಎಂದಾಯಿತು. ಆದರೆ, ಒಂದೊಂದು ಕುಟುಂಬದಲ್ಲಿ ಮೂರಾಲ್ಕು ಮಕ್ಕಳಿದ್ದು, ಅವರ ಪೈಕಿ ಒಬ್ಬರು ಅಥವಾ ಇಬ್ಬರ ಕುಟುಂಬಗಳು ಮಾತ್ರ ಹೊಸ ಬೊಕ್ಕಹಳ್ಳಿಗೆ ತೆರಳಿದವು. ಇತರರು ಹಳೇ ಊರಿನಲ್ಲೇ ನೆಲೆಸಿದರು. ಪ್ರವಾಹ ಮಾತ್ರ ನಿರಂತರವಾಗಿ ಹಳೇ ಊರನ್ನು ಕಾಡುತ್ತಲೇ ಇದೆ ಎನ್ನುತ್ತಾರೆ ಗ್ರಾಮದ 70 ವರ್ಷ ವಯಸ್ಸಿನ ದೊಡ್ಡಯ್ಯ ಅವರು. ಯಾರಾದರೂ ನಮ್ಮ ಸಮಸ್ಯೆ ಬಗೆಹರಿಸಿ ಬಿಡಲಿ ಎಂಬ ಆಶಾಭಾವನೆ ಅವರ ಕಣ್ಣಲ್ಲಿ ಕಂಡಂತಾಯಿತು.

ಜಲಾವೃತವಾಗಿದ್ದ ಸಂದರ್ಭದಲ್ಲಿ ಬೊಕ್ಕಹಳ್ಳಿ ಗ್ರಾಮದಲ್ಲಿ ಜನ ಸಂಚಾರ ಜನಪ್ರತಿನಿಧಿಗಳು ಮನಸ್ಸು ಮಾಡಬೇಕು ನಮ್ಮ ಅಣ್ಣತಮ್ಮಂದಿರು ಹೊಸ ಊರಿನಲ್ಲಿ ಇದ್ದಾರೆ. ಈಗ ನಾವು ಕೂಡ ಸ್ಥಳಾಂತರಗೊಳ್ಳಲು ಸಿದ್ಧವಾಗಿದ್ದೇವೆ. ಇದಕ್ಕೆ ಜನಪ್ರತಿನಿಧಿಗಳು ಸಹಾಯ ಮಾಡಲು ಮುಂದಾಗಬೇಕು.
-ಪುಟ್ಟಸ್ವಾಮಿ, ಬೊಕ್ಕಹಳ್ಳಿ.

ಹೊಸ ಜಾಗಕ್ಕೆ ಹೋಗುವುದಕ್ಕೆ ಸಿದ್ಧ ಈ ಹಳೇ ಬೊಕ್ಕಹಳ್ಳಿಯಲ್ಲಿ ಸುಮಾರು 80 ಕುಟುಂಬಗಳಿವೆ. ನಮ್ಮನ್ನು ಸ್ಥಳಾಂತರ ಮಾಡುವುದಕ್ಕೆ ಈಗಾಗಲೇ 6 ಎಕರೆ ಜಾಗ ಗುರುತಿಸಿದ್ದಾರೆ. ಅದು ಸಾಕಾಗುವು ದಿಲ್ಲ. ಕನಿಷ್ಠ ಇನ್ನೂ ಎರಡೂವರೆ ಎಕರೆಗಳ ಷ್ಟಾದರೂ ಸೇರಿಸಿ ಕೊಟ್ಟರೆ ಇಲ್ಲಿರುವ ಎಲ್ಲರೂ ಹೊಸ ಜಾಗಕ್ಕೆ ಹೋಗುವುದಕ್ಕೆ ಸಿದ್ಧವಾಗಿದ್ದೇವೆ.
-ದೊಡ್ಡಯ್ಯ, ಬೊಕ್ಕಹಳ್ಳಿ.

Tags:
error: Content is protected !!