Mysore
23
broken clouds

Social Media

ಮಂಗಳವಾರ, 31 ಮಾರ್ಚ್ 2026
Light
Dark

ಅರ್ಜುನಹಳ್ಳಿ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ  

ಎರಡನೇ ಬಾರಿ ಪ್ರಶಸ್ತಿ ಪಡೆದು ಗಮನಸೆಳೆದ ಪಂಚಾಯಿತಿ

ಭೇರ್ಯ ಮಹೇಶ್

ಕೆ.ಆರ್.ನಗರ : ತಾಲೂಕಿನ ಅರ್ಜುನಹಳ್ಳಿ ಗ್ರಾಮ ಪಂಚಾಯಿತಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್ ರಾಜ್ ಇಲಾಖೆಯ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಗಾಂಧಿ ಗ್ರಾಮ ಪುರಸ್ಕಾರಕ್ಕೆ (ಮೊದಲ ಬಾರಿಗೆ ೨೦೨೪- ೨೫ನೇ ಸಾಲಿನಲ್ಲಿ) ಎರಡನೇ ಬಾರಿಗೆ ಆಯ್ಕೆಯಾಗುವ ಮೂಲಕ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದೆ.

ಗ್ರಾಮ ಪಂಚಾಯಿತಿಯ ಸರ್ವತೋಮುಖ ಅಭಿವೃದ್ಧಿ, ಪಾರದರ್ಶಕ ಆಡಳಿತ ಮತ್ತು ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ತೋರಿದ ಅಪ್ರತಿಮ ಕಾರ್ಯಕ್ಷಮತೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.

ಯಶಸ್ಸಿನ ಹಿಂದಿನ ಶಕ್ತಿಗಳು: ಈ ಐತಿಹಾಸಿಕ ಸಾಧನೆಯ ಹಿಂದೆ ಗ್ರಾಮ ಪಂಚಾಯಿತಿಯ ನೋಡಲ್ ಅಧಿಕಾರಿ ಮೇಘನಾ ಅವರ ಮಾರ್ಗ ದರ್ಶನ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿ.ಟಿ.ಸಂತೋಷ್ ಅವರ ದಕ್ಷ ಕಾರ್ಯವೈಖರಿ ಅಡಗಿದೆ. ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲಾ ಸದಸ್ಯರು ಹಾಗೂ ಸಿಬ್ಬಂದಿ ವರ್ಗದ ಸಂಘಟಿತ ಪ್ರಯತ್ನದಿಂದಾಗಿ ಅರ್ಜುನಹಳ್ಳಿ ಪಂಚಾಯಿತಿಯು ಮಾದರಿ ಪಂಚಾಯಿತಿಯಾಗಿ ಹೊರಹೊಮ್ಮಿದೆ.

ಅಧಿಕಾರಿಗಳ ಹರ್ಷ: ಈ ಸಂದರ್ಭದಲ್ಲಿ ಮಾತನಾಡಿದ ಆಡಳಿತ ಅಧಿಕಾರಿ ಮೇಘನಾ ಅವರು, ಸತತ ಎರಡನೇ ಬಾರಿಗೆ ಈ ಪ್ರಶಸ್ತಿ ಲಭಿಸಿರುವುದು ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಇದು ಸಾರ್ವಜನಿಕರ ಸಹಕಾರ ಮತ್ತು ಆಡಳಿತ ಮಂಡಳಿಯ ಶ್ರಮಕ್ಕೆ ಸಂದ ಗೌರವ ಎಂದು ಸಂತಸ ವ್ಯಕ್ತಪಡಿಸಿದರು.

ಆಯ್ಕೆಗೆ ಕಾರಣವಾದ ಪ್ರಮುಖ ಅಂಶಗಳು: 

ಸ್ವಚ್ಛ ಭಾರತ್ ಮಿಷನ್: ಗ್ರಾಮದಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಮತ್ತು ನೈರ್ಮಲ್ಯ ಕಾಪಾಡುವಲ್ಲಿ ಯಶಸ್ವಿ ಅನುಷ್ಠಾನ

ಜಲ ಜೀವನ್ ಮಿಷನ್: ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿರುವುದು

ತೆರಿಗೆ ಸಂಗ್ರಹ: ಶೇ.೧೦೦ ರಷ್ಟು ತೆರಿಗೆ ಸಂಗ್ರಹಣೆ ಮಾಡುವ ಮೂಲಕ ಆರ್ಥಿಕ ಶಿಸ್ತು ಕಾಪಾಡಿರುವುದು

ಡಿಜಿಟಲೀಕರಣ: ಪಂಚಾಯತ್ ಸೌಲಭ್ಯಗಳನ್ನು ಆನ್‌ಲೈನ್ ಮೂಲಕ ಶೀಘ್ರವಾಗಿ ಜನರಿಗೆ ತಲುಪಿಸುತ್ತಿರುವುದು.

ಮೂಲಸೌಕರ್ಯ: ರಸ್ತೆ, ಚರಂಡಿ ಹಾಗೂ ಬೀದಿ ದೀಪಗಳ ಸುಸಜ್ಜಿತ ನಿರ್ವಹಣೆ

” ಸರ್ಕಾರದ ಪ್ರತಿಯೊಂದು ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದೇ ನಮ್ಮ ಗುರಿ. ಹಾಗಾಗಿ ಅರ್ಜುನಹಳ್ಳಿ ಗ್ರಾಮ ಪಂಚಾಯತಿ ೨೦೨೩-೨೪ನೇ ಸಾಲಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿ ಪ್ರಶಸ್ತಿ ಪಡೆದಿತ್ತು. ಪ್ರಶಸ್ತಿಯ ನಗದು ಹಣ ಐದು ಲಕ್ಷ ರೂ. ಅನ್ನು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಅಭಿವೃದ್ಧಿಗೆ ಬಳಸಲಾಗಿದೆ. ಎರಡನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಲು ಸಹಕರಿಸಿದ ಮೇಲಧಿಕಾರಿಗಳಿಗೆ ಮತ್ತು ಗ್ರಾಮಸ್ಥರಿಗೆ ಧನ್ಯವಾದಗಳು.”

ಜಿ.ಟಿ ಸಂತೋಷ್, ಅರ್ಜುನಹಳ್ಳಿ ಗ್ರಾಪಂ ಪಿಡಿಒ

” ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಯು ಗ್ರಾಮದ ಜನರಲ್ಲಿ ಹರ್ಷ ತಂದಿದ್ದು, ಅರ್ಜುನಹಳ್ಳಿ ಗ್ರಾಮ ಪಂಚಾಯಿತಿಯು ತಾಲ್ಲೂಕಿಗೆ ಮಾತ್ರವಲ್ಲದೆ ಜಿಲ್ಲೆಗೇ ಮಾದರಿಯಾಗಿದೆ. ಕೆ.ಆರ್.ನಗರ ತಾಲ್ಲೂಕಿನಲ್ಲಿ ಮುಂದೆಯೂ ಇದೇ ರೀತಿಯಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳು ಸಾಧನೆಯ ಹಾದಿಯಲ್ಲಿ ಸಾಗಲಿ.”

-ವಿ.ಪಿ.ಕುಲದೀಪ್, ಕೆ.ಆರ್.ನಗರ ತಾಪಂ ಇಒ

 

 

Tags:
error: Content is protected !!