Mysore
27
clear sky

Social Media

ಬುಧವಾರ, 22 ಏಪ್ರಿಲ 2026
Light
Dark

ಓದುಗರ ಪತ್ರ: ಬಾಂಗ್ಲಾದೇಶದ ಅರಾಜಕತೆ ಭಾರತಕ್ಕೆ ಎಚ್ಚರಿಕೆಯ ಘಂಟೆ

ಬಾಂಗ್ಲಾದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎನ್ನುವ ಬೆನ್ನಲ್ಲೆ ಅಲ್ಲಿ ಈಗ ಹಿಂಸಾಚಾರ ಭುಗಿಲೆದ್ದಿದೆ. ಮೀಸಲಾತಿಯನ್ನು ವಿರೋಧಿಸುವ ಹೆಸರಿನಲ್ಲಿ ಆರಂಭವಾದ ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾ ಚಾರಕ್ಕೆ ತಿರುಗಿದ್ದು, ನೂರಾರು ಮಂದಿ ಬಲಿಯಾಗಿದ್ದಾರೆ.

ಬಾಂಗ್ಲಾದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಅಧಿಕಾರದ ದಾಹ ಒಂದು ದೇಶವನ್ನು ಯಾವ ಮಟ್ಟಕ್ಕೆ ತಂದು ನಿಲ್ಲಿಸುತ್ತದೆ ಎಂಬುದಕ್ಕೆ ಬಾಂಗ್ಲಾದೇಶಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ರಾಷ್ಟ್ರಗಳಲ್ಲಿ ಸರ್ವಾಧಿಕಾರ ತೋರುವ ರಾಜಕಾರಣಿಗಳಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂಬುದಕ್ಕೆ ನಮ್ಮ ನೆರೆಯ ಬಾಂಗ್ಲಾದೇಶವೇ ಸಾಕ್ಷಿ. ಬಾಂಗ್ಲಾದೇಶದ ಆಡಳಿತ ವ್ಯವಸ್ಥೆ ಅಲ್ಲಿನ ಜನರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ಮಾಡುವ ಮತ್ತು ಜನರ ಧ್ವನಿಯನ್ನು ದಮನಿಸುವ ಪ್ರಯತ್ನ ಮಾಡಿತು. ಅದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿ ಹಿಂಸಾಚಾರಕ್ಕೆ ತಿರುಗಿದೆ.

ಸರ್ಕಾರದ ದುರಾಡಳಿತದ ವಿರುದ್ಧ ಪ್ರತಿಭಟಿಸಬೇಕು ನಿಜ. ಆದರೆ ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಅಮಾಯಕರು ಬಲಿಯಾಗುವಂತಾಗಬಾರದು. ಅದೇ ರೀತಿ ಅಧಿಕಾರದ ಚುಕ್ಕಾಣಿ ಹಿಡಿದಿರುವವರು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸಬೇಕೇ ವಿನಾ ಅದನ್ನು ದುರ್ಬಲಗೊಳಿಸಲು ಮುಂದಾದರೆ ಇಂತಹ ಹಿಂಸಾಚಾರಕ್ಕೆ ಕಾರಣವಾಗಬಹುದು. ಆದ್ದರಿಂದ ನೆರೆಯ ಬಾಂಗ್ಲಾದೇಶದ ರಾಜಕೀಯ ಅರಾಜಕತೆ ನಮಗೆ ಎಚ್ಚರಿಕೆಯ ಘಂಟೆಯಾಗಿದೆ. ಅದನ್ನು ಅರಿತು ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ ನಡೆದುಕೊಳ್ಳಬೇಕು.

-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.

 

Tags:
error: Content is protected !!