ಗಂಡು ಕಲೆಯೆಂದೇ ಹೆಸರಾದ ಬೀಸು ಕಂಸಾಳೆ ನೃತ್ಯ ಪ್ರದರ್ಶನ ನೀಡಲಿರುವ ವಿದ್ಯಾರ್ಥಿನಿಯರ ತಂಡ
ಯಳಂದೂರು: ಮಧ್ಯಪ್ರದೇಶದ ಭೋಪಾಲ್ನಲ್ಲಿ ಡಿ.೫, ೬ರಂದು ನಡೆಯಲಿರುವ ರಾಷ್ಟ್ರೀಯ ಬಾಲರಂಗೋತ್ಸವಕ್ಕೆ ತಾಲ್ಲೂಕಿನ ಮೆಳ್ಳಹಳ್ಳಿ ಗ್ರಾಮದ ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿನಿಯರು ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ನಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಮಾನವ ಕುಲದ ವಸ್ತು ಸಂಗ್ರಹಾಲಯ ಪ್ರತಿ ವರ್ಷವೂ ಈ ಉತ್ಸವವನ್ನು ರಾಷ್ಟ್ರ ಮಟ್ಟದಲ್ಲಿ ಆಯೋಜನೆ ಮಾಡುತ್ತದೆ. ಇದಕ್ಕೆ ಪ್ರತಿ ರಾಜ್ಯದಿಂದಲೂ ಒಂದೊಂದು ಶಾಲೆಯನ್ನು ಆಯ್ಕೆ ಮಾಡಲಾಗುತ್ತದೆ. ನಮ್ಮ ರಾಜ್ಯದಿಂದ ಈ ಬಾರಿ ಯಳಂದೂರು ತಾಲ್ಲೂಕಿನ ಮೆಳ್ಳಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ.
ಗಂಡು ಕಲೆ ಎಂದೇ ಹೆಸರಾಗಿರುವ ಬೀಸು ಕಂಸಾಳೆ ನೃತ್ಯವನ್ನು ಈ ಶಾಲೆಯ ೧೫ ಮಂದಿ ವಿದ್ಯಾರ್ಥಿನಿಯರು ಪ್ರದರ್ಶಿಸಲಿದ್ದಾರೆ. ಇಲ್ಲಿನ ಜಾನಪದರ ಆರಾಧ್ಯ ದೈವ ಮಲೆಮಹದೇಶ್ವರನ ಜಾನಪದ ಗೀತೆಗೆ ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಇವರಲ್ಲಿ ಆರ್.ಅಪೂರ್ವ, ವಿನುತ, ಸುನೀತಾ ಎಂಬವರು ಕಂಜರ, ತಮಟೆ ಬಾರಿಸಿ ಹಾಡು ಹಾಡಿದರೆ, ರಶ್ಮಿಕಾ, ವಿ. ಜಗನ್ಯ, ಆರ್.ಗಗನ, ಮೋನಿಷಾ, ಸಾಧನಾ ಎಸ್.ಗೌಡ, ಆರ್.ರಶ್ಮಿ, ಸಿ.ಕೃತಿಕಾ, ಬಿ.ರಂಜಿತಾ, ಜಾಹ್ನವಿ, ಬಿ.ಋತಿಕಾ, ಡಿ. ಭೂಮಿಕಾ, ಕೆ.ಎಂ.ಭುವನೇಶ್ವರಿ ನೃತ್ಯ ಮಾಡಲಿದ್ದಾರೆ. ಇದಕ್ಕಾಗಿ ಕಳೆದ ಒಂದು ತಿಂಗಳಿಂದಲೂ ಇವರು ಇಲ್ಲಿನ ನಾಟಕ ಶಿಕ್ಷಕ ಎಸ್.ಮಧುಕರ್ ಮಳವಳ್ಳಿರವರ ಮಾರ್ಗ ದರ್ಶನದಲ್ಲಿ ಹಾಡು ನೃತ್ಯವನ್ನು ಅಭ್ಯಾಸ ಮಾಡುತ್ತಿದ್ದಾರೆ.
ಡಿ.೫ ಮತ್ತು ೬ರಂದು ಕಾರ್ಯಕ್ರಮ: ಈ ಕಾರ್ಯಕ್ರಮವು ಡಿ.೫, ೬ರಂದು ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆಯಲಿದೆ. ಮೂವರು ಶಿಕ್ಷಕರೂ ಸೇರಿದಂತೆ ಒಟ್ಟು ೧೮ ಜನರ ತಂಡವು ಡಿ.೨ರಂದು ಪ್ರಯಾಣ ಬೆಳೆಸಲಿದ್ದು, ಈಗಾಗಲೇ ರೈಲು ಟಿಕೆಟ್ಗಳನ್ನು ಬುಕ್ ಮಾಡಲಾಗಿದೆ. ಚಾಮರಾಜನಗರ ಜಿಲ್ಲೆಗೆ ಪ್ರಥಮ ಬಾರಿ ರಾಜ್ಯವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದೆ. ಅದರಲ್ಲೂ ಹೆಣ್ಣು ಮಕ್ಕಳು ಇದರ ನೇತೃತ್ವವನ್ನು ವಹಿಸುತ್ತಿರುವುದು ಇಲ್ಲಿನ ಶಿಕ್ಷಕರು, ಪೋಷಕರಲ್ಲಿ ಅತೀವ ಸಂತಸ ತಂದಿದೆ.
” ನಮ್ಮ ಶಾಲೆಯ ಮಕ್ಕಳು ರಾಷ್ಟ್ರ ಮಟ್ಟದ ಕಾರ್ಯಕ್ರಮಕ್ಕೆ ತೆರಳುತ್ತಿರುವುದು ಅತೀವ ಸಂತಸ ತಂದಿದೆ. ಈಗಾಗಲೇ ನಮ್ಮ ಮಕ್ಕಳು ರಾಜ್ಯ ಮಟ್ಟದ ಅನೇಕ ನಾಟಕ, ಸಂಗೀತ, ಇತರೆ ಕಾರ್ಯಕ್ರಮಗಳಲ್ಲಿ ಭಾಗ ವಹಿಸಿ ಹಲವು ಪ್ರಶಸ್ತಿಯನ್ನು ಪಡೆದಿದ್ದಾರೆ. ಮಕ್ಕಳು ತೆರಳಲು ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲೂ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ಭರವಸೆ ಇದೆ.”
ಗುರುಪ್ರಸಾದ್, ಮುಖ್ಯ ಶಿಕ್ಷಕರು, ಆದರ್ಶ ಶಾಲೆ
” ನಮ್ಮ ಶಾಲೆಯ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿಕೊಂಡು ಕಂಸಾಳೆ ನೃತ್ಯ ಮಾಡಿಸುವ ಬಗ್ಗೆ ವಿಭಿನ್ನವಾಗಿ ಯೋಚಿಸಿದ್ದೆವು. ನಮ್ಮ ಶಾಲೆಗೆ ಆಯ್ಕೆ ಸಮಿತಿ ಸದಸ್ಯರು ಬಂದು ಹೋಗಿದ್ದರು. ಆದರೆ ಇಡೀ ರಾಜ್ಯದಲ್ಲೇ ನಮ್ಮ ಶಾಲೆ ಆಯ್ಕೆಯಾಗುತ್ತದೆ ಎಂದು ನಮಗೆ ಅನಿಸಿರಲಿಲ್ಲ. ಶಾಲೆ ಆಯ್ಕೆಯಾಗಿರುವ ವಿಚಾರ ತಿಳಿದಾಗ ಬಹಳಸಂತಸವಾಯಿತು. ಹೊಸ ಕಂಸಾಳೆಯನ್ನು ಮಕ್ಕಳಿಗೆ ಕೊಡಿಸಿದ್ದೇವೆ. ರೈಲಿನ ಟಿಕೆಟ್ ಬುಕ್ ಮಾಡಲಾಗಿದೆ. ನಮ್ಮ ಕನ್ನಡದ ಬಾವುಟದ ಕೆಂಪು ಹಾಗೂ ಹಳದಿ ವಸ್ತ್ರಗಳು, ಕೊರಳಲ್ಲಿ ರುದ್ರಾಕ್ಷಿ ಮಾಲೆ, ಹಣೆಗೆ ವಿಭೂತಿ ಪಟ್ಟೆ ಧರಿಸಿ, ಬೀಸು ಕಂಸಾಳೆಯ ವಿಭಿನ್ನ ಆಯಾಮಗಳಲ್ಲಿ ಮಕ್ಕಳು ನೃತ್ಯ ಮಾಡಲಿದ್ದಾರೆ. ಮೂವರು ಗಾಯನ, ಸಂಗೀತ ನೀಡಲಿದ್ದಾರೆ.”
ಮಧುಕರ್ ಮಳವಳ್ಳಿ, ನಾಟಕ ಶಿಕ್ಷಕ





