- ಗ್ರಾಮಗಳ ಕಲ್ಯಾಣಕ್ಕಾಗಿ ಗ್ರಾಮದೇವರಿಗೆ ವಿಶೇಷ ಪೂಜೆ, ಸಾಮೂಹಿಕ ಪ್ರಾರ್ಥನೆ
ಲಕ್ಷ್ಮೀ ಕಾಂತ್ ಕೊಮಾರಪ್ಪ
ಸೋಮವಾರಪೇಟೆ: ಉತ್ತರ ಕೊಡಗಿನ ಗ್ರಾಮೀಣ ಭಾಗಗಳಲ್ಲಿ ಈಗ ಸುಗ್ಗಿ ಉತ್ಸವದ ಸಂಭ್ರಮ ಮನೆ ಮಾಡಿದೆ. ಜಾನಪದದ ವೈಶಿಷ್ಟ್ಯ ಒಳಗೊಂಡ ಈ ಆಚರಣೆಯಲ್ಲಿ ಸಾಂಪ್ರದಾ ಯಿಕ ಸುಗ್ಗಿ ಉತ್ಸವಗಳು ಪುಷ್ಪಗಿರಿ ಬೆಟ್ಟ ಶ್ರೇಣಿ ಯಲ್ಲಿರುವ ಗ್ರಾಮಗಳಲ್ಲಿ ನಡೆಯಲಿದ್ದು, ಗ್ರಾಮಸ್ಥರು ಸಂಭ್ರಮದಿಂದ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
ಮಲೆನಾಡ ಸುಗ್ಗಿ ಆಚರಿಸಲ್ಪಡುವ ವ್ಯಾಪ್ತಿಯ ಗ್ರಾಮಗಳ ಗ್ರಾಮದೇವರಾದ ಸಬ್ಬಮ್ಮ ದೇವಿಗೆ ಎಲ್ಲರೂ ಒಟ್ಟಿಗೆ ಸೇರಿ ವರ್ಷಕ್ಕೊಮ್ಮೆ ಪೂಜೆ ಸಲ್ಲಿಸುವ ಸಂಪ್ರದಾಯ ತಲತಲಾಂತರದಿಂದ ನಡೆದುಕೊಂಡು ಬಂದಿದೆ. ಮಳೆಗಾಲ ಪ್ರಾರಂಭವಾಗಿ ಗ್ರಾಮೀಣ ಭಾಗದ ಜನರು ಕೃಷಿ ಕಾರ್ಯಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಸಮಯ ಹತ್ತಿರ ವಾದಾಗ ಕೃಷಿ ಕಾರ್ಯಗಳಿಗೆ ಯಾವುದೇ ತೊಂದರೆಯಾಗಬಾರದು, ಗ್ರಾಮ ಸುಭೀಕ್ಷೆ ಯಿಂದ ಕೂಡಿರಬೇಕು ಎಂದು ಗ್ರಾಮದ ಕಲ್ಯಾಣಕ್ಕಾಗಿ ಗ್ರಾಮದೇವರಿಗೆ ಹಾಗೂ ಪ್ರಕೃತಿದೇವಿಗೆ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವ ವಿಶಿಷ್ಟ ಹಬ್ಬವಾದ ಸುಗ್ಗಿ ಉತ್ಸವಗಳು ಸೋಮವಾರಪೇಟೆ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ಆರಂಭಗೊಂಡಿವೆ.
ಉತ್ಸವದಲ್ಲಿ ಪಾಲ್ಗೊಳ್ಳಲು ಗ್ರಾಮದ ಹೊರಭಾಗಗಳಲ್ಲಿ ನೆಲೆಸಿರುವವರೂ ಗ್ರಾಮಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಇಡೀ ಗ್ರಾಮ ಸಂಭ್ರಮದಲ್ಲಿ ರುತ್ತದೆ. ಸುಗ್ಗಿ ಉತ್ಸವ ಪ್ರಾರಂಭವಾಗುತ್ತಿದ್ದಂತೆ ಗ್ರಾಮದ ಜನರ ಮನೆಗಳಲ್ಲಿ ಗ್ರಾಮದೇವತೆಗಳ ಪೂಜೆಗಳು ಸಾಂಗವಾಗಿ ನಡೆಯುತ್ತವೆ. ಗ್ರಾಮದಲ್ಲಿ ರೋಗರುಜಿನಗಳು ಬರದಂತೆ, ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆ ನಡೆದು ಸಮೃದ್ಧ ಫಸಲು ಕೈಸೇರುವಂತೆ ಗ್ರಾಮ ದೇವತೆ ಗಳು ಹರಸಬೇಕೆಂದು ಪ್ರಾರ್ಥನೆ ಮಾಡುತ್ತಾರೆ.
ಸುಗ್ಗಿ ಉತ್ಸವ ಪ್ರಾರಂಭದ ದಿನದಿಂದ ಸುಗ್ಗಿ ಸಾರು (ಕಟ್ಟು) ಎಂಬ ಕಟ್ಟುನಿಟ್ಟಿನ ಆಚರಣೆ ಮಾಡಲಾಗುತ್ತದೆ. ಉತ್ಸವ ನಡೆಯುವ 15 ದಿನಗಳಲ್ಲಿ ಹಸಿ ಮರ ಕಡಿಯುವುದು, ಒಣಗಿದ ಗಿಡ -ಬಳ್ಳಿಗಳನ್ನು ಮುರಿಯದಂತೆ ಎಚ್ಚರ ವಹಿಸುತ್ತಾರೆ. ಹಗಲು ವೇಳೆ ನೆಂಟರಿಷ್ಟರು ಮನೆ ಸೇರದಂತೆ ನಿರ್ಬಂಧ ವಿಧಿಸುತ್ತಾರೆ. ನಕ್ಷತ್ರಗಳು ಕಂಡ ನಂತರವೇ ಮನೆಯೊಳಕ್ಕೆ ಬರಮಾಡಿಕೊಳ್ಳುತ್ತಾರೆ. ಹಗಲಿನ ವೇಳೆ ಹೊರಗಡೆಯಿಂದ ಆಹಾರ ಸಾಮಗ್ರಿಗಳನ್ನು ಖರೀದಿಸುವಂತಿಲ್ಲ. ಇಂತಹ ಕಟ್ಟುಪಾಡುಗಳು ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಸುಗ್ಗಿ ಸಂದರ್ಭದಲ್ಲೂ ಚಾಲ್ತಿಯಲ್ಲಿವೆ.
ಕೂತಿ ನಾಡು ಶ್ರೀ ಸಬ್ಬಮ್ಮ ದೇವಿಯ(ಲಕ್ಷ್ಮಿ) ಉತ್ಸವ ಎಂದೇ ಹೆಸರಾಗಿರುವ ನಗರಳ್ಳಿ ಸುಗ್ಗಿ ಹಲವು ವೈಶಿಷ್ಟ್ಯಗಳೊಂದಿಗೆ ಕೂಡಿರುತ್ತದೆ. ಕೂತಿ ನಾಡು ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಕೂತಿ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೀಕಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಹಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡಳ್ಳಿ, ತಡ್ಡಿಕೊಪ್ಪ ಹಾಗೂ ಸಕಲೇಶಪುರ ತಾಲ್ಲೂಕಿನ ಓಡಳ್ಳಿ ಸೇರಿದಂತೆ ಒಟ್ಟು 18 ಗ್ರಾಮಗಳ ಜನರು ಒಂದೆಡೆ ಕಲೆತು ಗ್ರಾಮ ದೇವತೆ ಸಬ್ಬಮ್ಮ ದೇವಿಗೆ ಅನಾದಿಕಾಲದಿಂದ ನಡೆದುಬಂದ ಸಾಂಪ್ರ ದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ. ಉತ್ಸವದ ಕೊನೆಯ ದಿನ ನಗರಳ್ಳಿಯ ಸುಗ್ಗಿ ದೇವರ ಬನದಲ್ಲಿ ಸ್ಥಾಪಿಸಲಾಗಿರುವ ಬೃಹತ್ ಕಲ್ಲಿನ ಕಂಬದಲ್ಲಿ 4 ಮಂದಿ ದೇವರ ಒಡೆಕಾರರನ್ನು ಬೆತ್ತದ ಉಯ್ಯಾಲೆಯಲ್ಲಿ ತೂಗುವ ಜಾನಪದ ಸಂಸ್ಕೃತಿ ಗ್ರಾಮೀಣ ಭಾಗದ ಜನರು ಗ್ರಾಮ ದೇವತೆಯ ಮೇಲಿಟ್ಟಿರುವ ಭಕ್ತಿಭಾವದ ಪ್ರತೀಕವೇ ಆಗಿರುತ್ತದೆ.
ಇದರೊಂದಿಗೆ ಸಮೀಪದ ತೋಳೂರು ಶೆಟ್ಟಳ್ಳಿ ಸಬ್ಬಮ್ಮ ದೇವರ ವಾರ್ಷಿಕ ಸುಗ್ಗಿ ಉತ್ಸವ ಕೂಡ ಈ ವ್ಯಾಪ್ತಿಯಲ್ಲಿ ನಡೆಯುವ ದೊಡ್ಡ ಸುಗ್ಗಿ ಉತ್ಸವವಾಗಿದೆ. ಬೀರೇ ದೇವರ ಹಬ್ಬ ಆಚರಣೆ ಯೊಂದಿಗೆ ಸುಗ್ಗಿ ಪ್ರಾರಂಭವಾಗಲಿದ್ದು, ಗುಮ್ಮನ ಮರಿ ಪೂಜೆ, ಸಾಮೂಹಿಕ ಭೋಜನ, ಊರೊಡೆಯನ ಪೂಜೆ, ಬೆಂಕಿಕೊಂಡ ಹಾಯುವುದು, ಮೊದಲ ಬೇಟೆ ನಂತರ ಊರ ಸುಗ್ಗಿ, ದೇವರ ಗಂಗಾಸ್ನಾನ ಹಾಗೂ ದೊಡ್ಡ ಪೂಜೆಗಳು ಸುಗ್ಗಿ ಉತ್ಸವದ ಪ್ರಮುಖ ಆಚರಣೆಗಳಾಗಿವೆ.
ಇದರೊಂದಿಗೆ ತಾಲ್ಲೂಕು ವ್ಯಾಪ್ತಿಯ ಚೌಡ್ಲು, ಯಡೂರು, ಹಾನಗಲ್ಲು ಶೆಟ್ಟಳ್ಳಿ ಗ್ರಾಮಗಳಲ್ಲೂ ಸುಗ್ಗಿ ಉತ್ಸವ ನಡೆಯುತ್ತದೆ. ಇದೀಗ ಎಲ್ಲೆಡೆ ಭತ್ತದ ಕೃಷಿ ಮುಗಿದಿದ್ದು, ಮುಂದಿನ ಕೃಷಿ ಚಟುವಟಿಕೆಗೆ ಮಳೆ ಆಗಮಿಸಬೇಕಾಗಿದೆ. ಈ ಅವಧಿಯಲ್ಲಿ ಪ್ರಕೃತಿ ದೇವಿ ಮುನಿಸಿಕೊಳ್ಳದೆ ಕಾಲಕಾಲಕ್ಕೆ ತಕ್ಕಂತೆ ಮಳೆ -ಬೆಳೆಯನ್ನು ಕರುಣಿಸಲಿ ಎಂದು ಗ್ರಾಮದೇವರಲ್ಲಿ ಪೂಜಿಸಿ ಕೃಷಿಕಾರ್ಯದಲ್ಲಿ ತೊಡಗಲು ಸಿದ್ಧತೆ ನಡೆಸುವ ಗ್ರಾಮೀಣ ರೈತರ ಸಂಭ್ರಮದ ಸುಗ್ಗಿಯ ಹಿಗ್ಗು ಎಲ್ಲೆಡೆ ಮನೆ ಮಾಡಿದೆ.
ಕೃಷಿ ಕಾರ್ಯಗಳಿಗೆ ಯಾವುದೇ ತೊಂದರೆ ಆಗಬಾರದು ಮತ್ತು ಉತ್ತಮ ಮಳೆಯಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಮುಂದಿನ ಪೀಳಿಗೆ ಸುಗ್ಗಿ ಉತ್ಸವ ಆಚರಣೆಯನ್ನು ಮುಂದುವರಿಸಿಕೊಂಡು ಹೋಗಬೇಕಿದೆ. ಸುಗ್ಗಿ ಉತ್ಸವ ಈ ಭಾಗದ ರೈತರ ಸಾಂಪ್ರದಾಯಿಕ ಆಚರಣೆಯಾಗಿದೆ. ಅದನ್ನು ನಮ್ಮ ಪೂರ್ವಿಕರ ಕಾಲದಿಂದಲೂ ಆಚರಿಸಲಾಗುತ್ತದೆ. -ಕೆ.ಬಿ.ಜಗದೀಶ್, ಅಧ್ಯಕ್ಷರು, ಕೂತಿನಾಡು ಶ್ರೀ ಸಬ್ಬಮ್ಮ ಸಮಿತಿ
ಸುಗ್ಗಿ ಉತ್ಸವ ಪ್ರಾರಂಭವಾಗುತ್ತಿದ್ದಂತೆ ನಾವು ಗ್ರಾಮ ದೇವತೆಯ ಆರಾಧನೆಯಲ್ಲಿ ತೊಡಗುತ್ತೇವೆ. ಸುಗ್ಗಿ ಉತ್ಸವವನ್ನು ಕಟ್ಟುನಿಟ್ಟಾಗಿ ಆಚರಣೆ ಮಾಡಿದರೆ ಉತ್ತಮ ಮಳೆ -ಬೆಳೆಯಾಗುತ್ತದೆ ಎಂಬ ನಂಬಿಕೆಯಿದೆ. ಸುಗ್ಗಿ ದಿನದಂದು ಮಳೆಯಾದ ನಿದರ್ಶನವೂ ಇದೆ. ಸರ್ಕಾರ ಅನುದಾನ ನೀಡುವುದರ ಮೂಲಕ ಸುಗ್ಗಿ ಕಟ್ಟೆ ಹಾಗೂ ಬನಗಳನ್ನು ನವೀಕರಿಸಿ, ರೈತ ಸಂಕುಲದ ಈ ವಿಶಿಷ್ಟ ಆಚರಣೆಯನ್ನು ಪ್ರೋತ್ಸಾಹಿಸಬೇಕು. -ರಾಜ್ ಗೋಪಾಲ್, ಅಧ್ಯಕ್ಷರು, ತೋಳೂರು ಶೆಟ್ಟಳ್ಳಿ ಸುಗ್ಗಿ ಸಮಿತಿ
ಪುಷ್ಪಗಿರಿ ಬೆಟ್ಟ ಶ್ರೇಣಿಯ ತಪ್ಪಲಲ್ಲಿರುವ ಗ್ರಾಮೀಣ ಭಾಗದಲ್ಲಿ ಸುಗ್ಗಿ ಉತ್ಸವವನ್ನು ಹಿಂದಿ
ನಿಂದಲೂ ಆಚರಿಸಲಾಗುತ್ತಿದೆ. ಪ್ರಕೃತಿಯ ಆರಾಧನೆಯೇ ಸುಗ್ಗಿ ಉತ್ಸವ. ವರ್ಷಕ್ಕೊಮ್ಮೆ ನಡೆಯುವ ಉತ್ಸವವು ಸ್ಥಳೀಯ ಜಾನಪದ ಕಲೆಯನ್ನು ಬಿಂಬಿಸಲು ವೇದಿಕೆಯಾಗುತ್ತದೆ. ಸುಗ್ಗಿಕುಣಿತ ಎಲ್ಲರನ್ನೂ ರಂಜಿಸುತ್ತದೆ. ಮುಂದಿನ ಪೀಳಿಗೆಯೂ ಈ ಸುಗ್ಗಿ ಕುಣಿತವನ್ನು ಮುಂದುವರಿಸಬೇಕೆಂಬ ನಿಟ್ಟಿನಲ್ಲಿ ಯುವಕರಿಗೆ ತರಬೇತಿ ನೀಡಲಾಗುತ್ತಿದೆ. -ಎಸ್.ಕೆ. ಬಸವರಾಜು, ಸುಗ್ಗಿ ಕುಣಿತ ತಂಡದ ಹಿರಿಯ ಸದಸ್ಯರು, ತೋಳೂರು ಶೆಟ್ಟಳ್ಳಿ





