Mysore
18
few clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಸದ್ದು ಮಾಡುತ್ತಿರುವ ಹಕ್ಕಿಗೊಂದು ಗುಟುಕು ಅಭಿಯಾನ

ಸೋಮವಾರಪೇಟೆ ‘ನಾವು’ ಪ್ರತಿಷ್ಠಾನ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ; ಪಕ್ಷಿ ಸಂಕುಲ ಉಳಿವಿಗೆ ಕರೆ. 

 ಲಕ್ಷಿ ಕಾಂತ್ ಕೊಮಾರಪ್ಪ

ಸೋಮವಾರಪೇಟೆ: ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಳಿದಾಡುತ್ತಿದ್ದ ಗುಬ್ಬಚ್ಚಿಗಳು ಈ ನಡುವೆ ಕಾಣುವುದೇ ಅಪರೂಪ ಆಗಿಬಿಟ್ಟಿದೆ. ಬೇರೆ ಪಕ್ಷಿಗಳು ಹೀಗೆ ಆಗುವುದು ಬೇಡ ಎಂಬಕಾಳಜಿಯೊಂದಿಗೆ ಸೋಮವಾರಪೇಟೆ ತಾಲ್ಲೂಕಿನ ನಾವು ಪ್ರತಿಷ್ಠಾನ ಸಂಸ್ಥೆಯು ನಡೆಸುತ್ತಿರುವ ‘ಹಕ್ಕಿಗೊಂದು ಗುಟುಕು’ ಅಭಿಯಾನ ಕೊಡಗು ಜಿಲ್ಲೆಯಲ್ಲಿ ಗಮನ ಸೆಳೆಯುತ್ತಿದೆ.

ಪಟ್ಟಣ ಸಮೀಪದ ಕಿರಗಂದೂರು ಗ್ರಾಮದ ಗೌತಮ್ ಕಿರಗಂದೂರು ಹಾಗೂ ಸುಮನಾ ಗೌತಮ್ ದಂಪತಿ ನಾವು ಪ್ರತಿಷ್ಠಾನ ಎಂಬ ಸಂಸ್ಥೆಯೊಂದಿಗೆ ಈ ಅಭಿಯಾನ ನಡೆಸುತ್ತಿದ್ದು, ಕೆಲ ವರ್ಷಗಳಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಾನವನ ಸ್ವಾರ್ಥ, ದುರಾಸೆ, ಕ್ರೂರತೆಯಿಂದಾಗಿ ಈಗ ಎಷ್ಟೋ ಜೀವಿಗಳು ಕಣ್ಮರೆಯಾಗಿವೆ. ಮೊಬೈಲ್ ಟವರ್, ಜನಸಂಖ್ಯಾ ಸ್ಛೋಟ, ನಗರೀಕರಣ, ಆಧುನಿಕ ಬೇಸಾಯ ಕ್ರಮ, ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆ, ಮನೆಗಳ ವಿನ್ಯಾಸ ಹಾಗೂ ಬದಲಾವಣೆ ಗುಬ್ಬಚ್ಚಿ ಸೇರಿದಂತೆ ಎಷ್ಟೋ ಪಕ್ಷಿ ಸಂಕುಲಗಳ ವಿನಾಶಕ್ಕೆ ಕಾರಣವಾಗಿದೆ.

ಕೊಡಗು ಜಿಲ್ಲೆಯಲ್ಲಿ ಒಟ್ಟು ೩೦೦ಕ್ಕೂ ಹೆಚ್ಚು ವಿವಿಧ ಜಾತಿಯ ಪಕ್ಷಿಗಳಿವೆ. ಕೊಕ್ಕರೆ, ಮರಕುಟುಕ, ಗುಬ್ಬಚ್ಚಿ, ಮಳೆ ಪಕ್ಷಿ, ನೀರುಕಾಗೆ, ಗಿಡುಗ, ಗಿಳಿ, ಪಾರಿವಾಳ ಕಾಣಸಿಗುತ್ತವೆ. ಆದರೆ ಈ ಪಕ್ಷಿ ಸಂಕುಲದ ಉಳಿವು ನಮ್ಮ ಕೈಯಲ್ಲೇ ಇದೆ ಎನ್ನುವ ಉದ್ದೇಶದೊಂದಿಗೆ ಗೌತಮ್ ಹಾಗೂ ಸುಮನಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ವಿಪರೀತ ಬಿಸಿಲಿನಿಂದ ಕೆರೆ ಕೊಳ್ಳಗಳು ಬತ್ತುತ್ತಿದ್ದು, ಪಕ್ಷಿಗಳಿಗೆ ಕುಡಿಯಲು ನೀರು ಸಿಗದಂತಹ ಪರಿಸ್ಥಿಯೂ ಇದೆ.  ಈ ಸಂದರ್ಭದಲ್ಲಿ ಪ್ರತಿ ಮನೆಗಳ ತಾರಸಿ ಅಥವಾ ಅಂಗಳದಲ್ಲಿ ಪಾತ್ರೆಯಲ್ಲಿ ನೀರು ಇಟ್ಟರೆ ಬಾಯಾರಿಕೆ ಆದಾಗ ಪಕ್ಷಿಗಳು ಕುಡಿಯುತ್ತವೆ. ಇಂತಹ ಅಭಿಯಾನವನ್ನು ಕಳೆದ ಮೂರು ವರ್ಷಗಳಿಂದ ನಡೆಸುತ್ತಿತ್ತು. ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮಾ.೨೦ರಿಂದ ಹಕ್ಕಿಗೊಂದು ಗುಟುಕು ಅಭಿಯಾನ ಪ್ರಾರಂಭವಾಗಿ, ಏ.೨೨ರಂದು ಮುಕ್ತಾಯವಾಗಲಿದೆ.

ಮಕ್ಕಳು, ಸಾರ್ವಜನಿಕರು ಪಕ್ಷಿಗಳಿಗೆ ನೀರು ಇಟ್ಟ ಸೆಲಿ ಫೋಟೊವನ್ನು ಮೊ.ಸಂಖ್ಯೆ ೯೮೮೦೦೫೦೮೮೧ಕ್ಕೆ ಕಳುಹಿಸಿದರೆ ಆಯ್ದ ಚಿತ್ರಗಳಿಗೆ ಬಹುಮಾನ ನೀಡಲಾಗುತ್ತದೆ. ಸ್ಪರ್ಧೆ ದಿನಾಂಕದ ನಂತರವೂ ಬೇಸಿಗೆ ಮುಗಿಯುವವರೆಗೆ ಹಕ್ಕಿಗೊಂದು ಗುಟುಕು ಅಭಿಯಾನ ಮುಂದುವರಿಯಲಿದೆ.

” ಹಕ್ಕಿಗೊಂದು ಗುಟುಕು ಅಭಿಯಾನಕ್ಕೆ ಇಡೀ ರಾಜ್ಯದಾದ್ಯಂತ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನೂ ಹೆಚ್ಚಾಗಿ ಮಕ್ಕಳು, ಶಾಲೆಗಳು, ಸಂಘ-ಸಂಸ್ಥೆಗಳು ಈ ಅಭಿಯಾನದಲ್ಲಿ ಭಾಗವಹಿಸುವಂತಾ ಗಬೇಕು. ಪಕ್ಷಿ ಸಂಕುಲ ಉಳಿಸುವಲ್ಲಿ ಎಲ್ಲರೂ ಕೈಜೋಡಿಸಬೇಕು. ಪಕ್ಷಿಗಳು ಒಂದೆಡೆಯಿಂದ ಆಹಾರಕ್ಕಾಗಿ ಮತ್ತೊಂದೆಡೆಗೆ ಹೋಗುವುದು ಸಾಮಾನ್ಯ, ಆದರೆ, ಈಗ ನೀರಿಗಾಗಿಯೂ ಬಹುದೂರಕ್ಕೆ ಹೋಗಬೇಕಾದ ಸನ್ನವೇಶ ಬಂದಿದೆ. ಹಾಗಾಗಿ, ಮನೆಯ ಮುಂದೆ ಇಲ್ಲವೇ ತಾರಸಿಯ ಮೇಲೆ ಪಕ್ಷಿಗಳಿಗಾಗಿಯೇ ಒಂದು ಬಟ್ಟಲಿನಲ್ಲಿ ಒಂದಿಷ್ಟು ನೀರು, ಕಾಳು ಇಡಬೇಕು.”

-ಗೌತಮ್ ಕಿರಗಂದೂರು, ಸಂಸ್ಥಾಪಕರು , ನಾವು ಪ್ರತಿಷ್ಠಾನ, ಕೊಡಗು

” ಮೂರು ವರ್ಷಗಳಿಂದ ವಿದ್ಯಾಭ್ಯಾಸದ ಬಿಡುವಿನ ಸಮಯದಲ್ಲಿ ಹಕ್ಕಿಗಳಿಗೆ ನೀರು ಹಾಗೂ ಆಹಾರ ನೀಡುವ ಸಮಾಜಮುಖಿ ಕೆಲಸದಲ್ಲಿ ನಾನು ತೊಡಗಿಸಿಕೊಂಡಿದ್ದೇನೆ. ಗುಟುಕು ನೀರಿಗಾಗಿ ಪಕ್ಷಿಗಳು ಪರಿತಪಿಸುತ್ತಿರುವ ದೃಶ್ಯಗಳನ್ನು ಬಿಸಿಲು ಹೆಚ್ಚಿರುವ ಕಡೆ ಗಮನಿಸಬಹುದು. ಬಹುತೇಕ ಭಾಗಗಳಲ್ಲಿ ಸಣ್ಣಪುಟ್ಟ ಕೊಳಗಳು ಬತ್ತಿಹೋಗಿವೆ. ಹಳ್ಳ, ಕೊಳ್ಳಗಳು ಬರಿದಾಗಿವೆ. ಈ ನಿಟ್ಟಿನಲ್ಲಿ ಎಲ್ಲರೂ ಹಕ್ಕಿಗೊಂದು ಗುಟುಕು ಅಭಿಯಾನದಲ್ಲಿ ತೊಡಗಿಸಿಕೊಳ್ಳಬೇಕು.”

-ಸುಶೃತ್ ಎಸ್.ನಂದಿಗಟ್ಟಿ, ಧಾರವಾಡ 

” ಒಂದು ಸಣ್ಣ ಆಲೋಚನೆ ಈಗ ಹಕ್ಕಿಗೊಂದು ಗುಟುಕು ಅಭಿಯಾನವಾಗಿ ಬಹು ದೊಡ್ಡ ಮಟ್ಟದಲ್ಲಿ ವಿಸ್ತಾರವಾಗಿದೆ. ಇದು ಜನರಿಗಿರುವ ಪರಿಸರ ಕಾಳಜಿಗೆ ಹಿಡಿದ ಕೈಗನ್ನಡಿ. ಪರಿಸರದ ಸಮತೋಲನದಲ್ಲಿ ಹಕ್ಕಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳ ರಕ್ಷಣೆ ಮತ್ತು ಪೋಷಣೆ ನಮ್ಮೆಲ್ಲರ ಹೊಣೆ.”

-ಸುಮನಾ ಗೌತಮ್, ಸಂಸ್ಥಾಪಕರು, ನಾವು ಪ್ರತಿಷ್ಠಾನ ಕೊಡಗು

Tags:
error: Content is protected !!