Mysore
26
haze

Social Media

ಭಾನುವಾರ, 29 ಮಾರ್ಚ್ 2026
Light
Dark

‘ಜನರ ಸೇವೆಗೆ ಎಟುಕದ ಅರಕೆರೆ ನಾಡಕಚೇರಿ’

ಸಿದ್ದೇಗೌಡ ಕೊಡಿಯಾಲ

ಸಮಯಕ್ಕೆ ಬಾರದ ಅಧಿಕಾರಿ-ಸಿಬ್ಬಂದಿ:ಜನತೆ ಹೈರಾಣ

ಶ್ರೀರಂಗಪಟ್ಟಣ: ತಾಲ್ಲೂಕಿನ ಅರಕೆರೆ ನಾಡಕಚೇರಿಯು ಅವ್ಯವಸ್ಥೆಯ ಗೂಡಾಗಿ ಮಾರ್ಪಟ್ಟಿದೆ. ಈ ನಾಡಕಚೇರಿಯಲ್ಲಿ ಹೇಳುವವರು, ಕೇಳುವವರು ಯಾರು ಇಲ್ಲದಂತಾಗಿದೆ.

ಅರಕೆರೆ, ಗೆಂಡೆಹೊಸಹಳ್ಳಿ, ಮಾಡರಹಳ್ಳಿ, ಗೊಬ್ಬರಗಾಲ, ತಡಗವಾಡಿ, ಕೊಡಿಯಾಲ, ಪಿಹಳ್ಳಿ, ಚಿಕ್ಕಹಾರೋಹಳ್ಳಿ, ದೊಡ್ಡ ಹಾರೋಹಳ್ಳಿ, ಬನ್ನಹಳ್ಳಿ, ಬೆಟ್ಟಹಳ್ಳಿ, ನೇರಲಕೆರೆ, ಮಂಡ್ಯದ ಕೊಪ್ಪಲು ಸೇರಿದಂತೆ ಹಲವಾರು ಹಳ್ಳಿಗಳಿಗೆ ಈ ನಾಡಕಚೇರಿಯೇ ಕೇಂದ್ರ ಸ್ಥಾನ. ಆದರೆ, ಸಮಯಕ್ಕೆ ಸರಿಯಾಗಿ ಅಽಕಾರಿಗಳು- ಸಿಬ್ಬಂದಿ ಕಚೇರಿಗೆ ಬಾರದ ಕಾರಣ, ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ.

ಅಂಗವಿಕಲರು, ವೃದ್ಧರು, ರೈತರು, ಮಹಿಳೆಯರು ಕಚೇರಿಗೆ ಅಲೆದಾಡಿ ಹೈರಾಣಾ ಗುತ್ತಿದ್ದಾರೆ. ಇಲ್ಲಿಗೆ ಬರುವ ಹಿರಿಯರು, ಮಹಿಳೆಯರು ನಮಗೆ ವೃದ್ಧಾಪ್ಯವೇತನ, ವಿಧವಾ ವೇತನ, ಪಿಂಚಣಿ ಸರಿಯಾದ ಸಮಯಕ್ಕೆ ಬಾರದ ಹಿನ್ನೆಲೆಯಲ್ಲಿ ನಾಡಕಚೇರಿಗೆ ಬಂದು ಆರ್‌ಐ, ವಿಎ ಯಾವಾಗ ಬರುತ್ತಾರೆ ಎಂದು ಕೇಳಿದರೆ,ಸಿಬ್ಬಂದಿ ಸಬೂಬು ಹೇಳುವುದನ್ನೇ ರೂಢಿಸಿಕೊಂಡಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. ಅಧಿಕಾರಿಗಳು ಬರುವ ಸಮಯ ಗೊತ್ತಿಲ್ಲದೆ ವಯೋವೃದ್ಧರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಇದೆ.

ಈ ನಾಡಕಚೇರಿಯಲ್ಲಿ ಆರ್‌ಟಿಸಿ, ಜನನ ಮರಣ ಪ್ರಮಾಣ ಪತ್ರ, ವಂಶವೃಕ್ಷ ಸೇರಿದಂತೆ ಇತರೇ ಸೇವೆಗಳಿಗೆ ಅರ್ಜಿ ಸಲ್ಲಿಸಲು ಬಿಸಿಲಿನಲ್ಲಿ ನಿಂತು ಗಂಟೆ ಗಟ್ಟಲೆ ಕಾಯಬೇಕಿದೆ. ಇಲ್ಲಿ ಶೌಚಾಲಯ, ಕುಡಿಯುವ ನೀರು, ನೆರಳಿನ ವ್ಯವಸ್ಥೆ ಇಲ್ಲ. ಕಚೇರಿಗೆ ಕೆಲಸಕ್ಕೆ ಬಂದವರು ನಾಡಕಚೇರಿ ಆವರಣದ ಮೆಟ್ಟಿಲುಗಳ ಮೇಲೆ, ಮರದ ನೆರಳಲ್ಲಿ ನಿಂತು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಧಿಕಾರಿಗಳು ಮಧ್ಯಾಹ್ನ ೧೨ ಗಂಟೆಯಾದರೂ ಕಚೇರಿ ಕಡೆಗೆ ತಲೆ ಹಾಕುವುದಿಲ್ಲ, ಕೇಳಿದರೆ ಮೀಟಿಂಗು, ಅದು ಇದೂ ಹೇಳುತ್ತಲೇ ಕಾಲ ಕಳೆಯುತ್ತಾರೆ. ಸಂಜೆವರೆಗೂ ಕಾಯಿಸಿ ಸತಾಯಿಸುತ್ತಿದ್ದಾರೆ. ನೀವು ಅರ್ಜಿ ಕೊಟ್ಟು ಹೋಗಿ ಎನ್ನುತ್ತಾರೆ. ಕೊಟ್ಟ ಮೇಲೆ ನೀವು ಆ ದಿನ ಬನ್ನಿ, ಈ ದಿನ ಬನ್ನಿ ಎಂದು ಅಲೆದಾಡಿಸುತ್ತಾರೆ. ನಾವು ಕೊಟ್ಟ ಅರ್ಜಿ ಯಾವ ಅಧಿಕಾರಿ ಬಳಿ ಇರುತ್ತದೆ ಎಂಬುದು ಗೊತ್ತಿಲ್ಲದೆ, ದಿನವೂ ಕಚೇರಿಗೆ ಬಂದು, ಬರಿಗೈಲಿ ವಾಪಸ್ ಹೋಗುತ್ತಿದ್ದಾರೆ. ಮತ್ತೆ ಬಂದು ಕೇಳಿದರೆ ನಿಮ್ಮ ಅರ್ಜಿ ಆರ್‌ಐ, ವಿಎ ಬಳಿ ಇದೆ ಅವರ ಹತ್ತಿರ ನೀವು ಸಹಿ ಮಾಡಿಸಿ ತೆಗೆದುಕೊಂಡು ಬನ್ನಿ ಎಂದು ಹೇಳುತ್ತಾರೆ.

ಮಾಡರಹಳ್ಳಿಯ ವಿಶೇಷಚೇತನ ರೈತರೊಬ್ಬರು ತಮ್ಮ ಪತ್ನಿಗೆ ಕಣ್ಣು ಕಾಣಿಸದು, ಪಿಂಚಣಿ ಹಣ ಬರುತ್ತಿಲ್ಲದ ಕಾರಣ ಕಚೇರಿ ಅಧಿಕಾರಿಗಳನ್ನು ಕೇಳಲು ಬಂದರೆ ಉತ್ತರಿಸುವವರೇ ಇಲ್ಲ ಎಂದು ನೊಂದು ನುಡಿದರು.

ಸರ್ಕಾರ ಸಾರ್ವಜನಿಕರನ್ನು ಸರ್ಕಾರಿ ಕಚೇರಿಗಳಿಗೆ ಅಲೆಸದೆ ಅರ್ಜಿ ಕೊಟ್ಟವರ ಮನೆಬಾಗಿಲಿಗೇ ಹೋಗಿ ಸರ್ಕಾರಿ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆದೇಶಿಸಿದ್ದರೂ ಯಾವ ಅಧಿಕಾರಿಯೂ ಸರ್ಕಾರಿ ಆದೇಶಕ್ಕೆ ಕಿಮ್ಮತ್ತು ನೀಡುತ್ತಿಲ್ಲ ಎಂದು ಜನರು ಕಿಡಿಕಾರಿದ್ದಾರೆ. ಇನ್ನಾದರೂ ಕ್ಷೇತ್ರದ ಶಾಸಕರ ತವರೂರಾದ ಅರಕೆರೆಯ ನಾಡಕಚೇರಿಯ ಅವ್ಯವಸ್ಥೆಯನ್ನು ಸರಿಪಡಿಸಿ, ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಆಗಮಿಸಿ ಸಾರ್ವಜನಿಕರ ಕೆಲಸ ಮಾಡಿಕೊಡುವಂತೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬ್ರೋಕರ್‌ಗಳ ಹಾವಳಿ: ಅರಕೆರೆ ನಾಡಕಚೇರಿಗೆ ಅರ್ಜಿ ಸಲ್ಲಿಸಲು ಬರುವ ಸಾರ್ವಜನಿಕರು ಅದರಲ್ಲೂ ಅನಕ್ಷರಸ್ಥರನ್ನು ಈ ಬ್ರೋಕರ್‌ಗಳು ತಮ್ಮ ಮಾತುಗಳಿಂದ ಮರುಳು ಮಾಡಿ, ನಿಮ್ಮ ಕೆಲಸವನ್ನು ಬೇಗ ಮಾಡಿಕೊಡುತ್ತೇವೆ, ಇಷ್ಟು ದುಡ್ಡು ಕೊಟ್ಟರೆ ನಿಮ್ಮ ಕೆಲಸ ಬೇಗ ಆಗುತ್ತದೆ ಎಂದು ನೇರವಾಗಿ ಹಣ ಕೇಳುತ್ತಾರೆ. ಶಾಸಕರು ಇತ್ತ ಗಮನಹರಿಸಬೇಕು. ಮೇಲಧಿಕಾರಿಗಳ ನಿರ್ಲಕ್ಷ ತೆಯಿಂದಲೇ ನಮ್ಮಂತಹವರ ಪಾಲಿಗೆ ಈ ನಾಡಕಚೇರಿ ಇದ್ದೂ ಇಲ್ಲದಂತಾಗಿದೆ.

ಮಾಡರಹಳ್ಳಿ ರೈತ

 

 

Tags:
error: Content is protected !!