Mysore
18
scattered clouds

Social Media

ಸೋಮವಾರ, 02 ಫೆಬ್ರವರಿ 2026
Light
Dark

ಉದ್ಯಮಿಯ ಪರಿಶ್ರಮದಿಂದ ಕಾಯಕಲ್ಪ ಪಡೆದ ಉದ್ಯಾನ

ತಿ.ನರಸೀಪುರ: ಪಟ್ಟಣದ ಕಪಿಲಾ ನದಿ ದಂಡೆಯ ಶ್ರೀ ಬಳ್ಳೇಶ್ವರ ಸ್ವಾಮಿ ದೇವಸ್ಥಾನದ ಬಳಿಯ ಪಾರ್ಕ್ ಹೋಟೆಲ್ ಉದ್ಯಮಿಯೊಬ್ಬರ ಪರಿಶ್ರಮದಿಂದ ಕಾಯಕಲ್ಪ ಪಡೆದು ಸಾರ್ವಜನಿಕರ ಉಪಯೋಗಕ್ಕೆ ಸಿದ್ಧವಾಗುತ್ತಿದೆ.

ಶ್ರೀ ಬಳ್ಳೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೊಂದಿಕೊಂಡಂತಿರುವ ಪಟ್ಟಣದ ಏಕೈಕ ಉದ್ಯಾನವನವಾದ ಈ ಪಾರ್ಕ್ ಈ ಹಿಂದೆ ಅರಣ್ಯದಂತೆ ಮರ-ಗಿಡಗಳಿಂದ ಆವೃತವಾಗಿ ನಿರುಪಯುಕ್ತವಾಗಿತ್ತು.

ಇದನ್ನು ನವೀಕರಣ ಮಾಡುವ ಉದ್ದೇಶದಿಂದ ಸಂಸ್ಥೆಯೊಂದು ಮುಂದೆ ಬಂದಿತ್ತಾದರೂ ಅವರಿಗೆ ನಿರ್ವಹಣೆ ಸಾಧ್ಯವಾಗಲಿಲ್ಲ. ಹಾಗಾಗಿ ಪಾರ್ಕ್‌ನಲ್ಲಿ ಮತ್ತಷ್ಟು ಗಿಡ ಮರಗಳು, ಮುಳ್ಳು ಗಿಡಗಳು ಬೆಳೆದು ನೋಡಲು ಅರಣ್ಯದಂತೆ ಕಾಣಿಸುತ್ತಿತ್ತು. ಜೊತೆಗೆ ಪಾರ್ಕಿನ ತುಂಬಾ ಹಾವು-ಚೇಳುಗಳ ಓಡಾಟ ಕಂಡು ಬಂದಿತ್ತು. ಬಿಡಾಡಿ ಹಸುಗಳು ಪಾಕ್ ಅನ್ನು ನೆಲೆಯಾಗಿ ಮಾಡಿಕೊಂಡಿದ್ದವು. ಕಳೆಗುಂದಿದ ಪಾರ್ಕ್‌ಗೆ ಕಾಯಕಲ್ಪ ನೀಡಬೇಕೆಂಬ ಉದ್ದೇಶ ಹೊಂದಿದ್ದ ಪಟ್ಟಣದ ಹರೀಶ್ ಮಿಲ್ಟ್ರಿ ಹೋಟೆಲ್ ಮಾಲೀಕರಾದ ಸದಾಶಿವ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಅರಣ್ಯದಂತೆ ಬೆಳೆದು ನಿಂತಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ, ಉದ್ಯಾನವನ್ನು ಅಂದಗೊಳಿಸಿದ್ದಾರೆ.

ಅಲ್ಲದೆ, ಪಾರ್ಕ್‌ನಲ್ಲಿ ವಾಕಿಂಗ್ ಪಾತ್ ನಿರ್ಮಾಣದ ಜೊತೆಗೆ ಅಲಂಕಾರಿಕ ಗಿಡಗಳನ್ನೂ ನೆಡಲಾಗಿದೆ. ಕೆಲ ಗಿಡಗಳ ಸುತ್ತ ಕಾಂಕ್ರೀಟ್ ಹಾಕಿ ಸಾರ್ವಜನಿಕರು ಕೂರಲು ವ್ಯವಸ್ಥೆ ಕಲ್ಪಿಸಲಾಗಿದೆ.

ಸುಂದರವಾದ ಫಲಕಗಳನ್ನು ಅಳವಡಿಸಿ ಪಾರ್ಕಿನ ಅಂದವನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಅಲ್ಲದೆ ಉದ್ಯಾನಕ್ಕೆ ನೀರಿನ ಸಂಪರ್ಕ ಕಲ್ಪಿಸಿ, ಅಲಂಕಾರಿಕ ಹುಲ್ಲು ಹಾಸನ್ನು ಬೆಳೆಸಲು ಮುಂದಾಗಿದ್ದಾರೆ.

ಪಟ್ಟಣದಲ್ಲಿ ಸಾರ್ವಜನಿಕರಿಗೆ ಉತ್ತಮವಾದ ಯಾವುದೇ ಒಂದು ಪಾರ್ಕ್ ಇಲ್ಲ. ಇರುವ ಪಾರ್ಕ್ ನಿರ್ವಹಣೆ ಯನ್ನೂ ಯಾರೂ ಮಾಡುತ್ತಿಲ್ಲ. ಸಾರ್ವಜನಿಕರು ಸ್ವಲ್ಪ ಮಟ್ಟಿನ ವಿಶ್ರಾಂತಿ ಪಡೆಯಬೇಕೆಂದು ಇಲ್ಲಿಗೆ ಬರುತ್ತಾರೆ.

ಹಾಗಾಗಿ ಪಾರ್ಕ್‌ನ ನವೀಕರಣ ಕಾರ್ಯಕ್ಕೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸೌಲಭ್ಯಗಳನ್ನು ಒದಗಿಸಿ ಕೊಡಲು ಪ್ರಯತ್ನ ಮಾಡುತ್ತೇನೆ ಎಂದು ಸದಾಶಿವ ಪತ್ರಿಕೆಗೆ ತಿಳಿಸಿದರು.

Tags:
error: Content is protected !!