Mysore
21
clear sky

Social Media

ಸೋಮವಾರ, 02 ಮಾರ್ಚ್ 2026
Light
Dark

ರಾಜಕೀಯದಿಂದ ದೂರವಾಗಿ ಕೃಷಿಯಲ್ಲಿ ಸಾಧಿಸಿದ ರೈತ

ಮಹೇಂದ್ರ ಹಸಗೂಲಿ

ಸೂರ್ಯಕಾಂತಿ, ಬಾಳೆ, ಆಲೂಗಡ್ಡೆ ಅರಿಶಿನ, ಈರುಳ್ಳಿ ಬೆಳೆದು ಸೂರ್ತಿಯಾದ ಎಚ್.ಎಂ.ನಂದೀಶ್

ಗುಂಡ್ಲುಪೇಟೆ: ತಾಲ್ಲೂಕಿನ ಹಂಗಳ ಗ್ರಾಮದ ಎಚ್. ಎಂ.ನಂದೀಶ್ ಎಂಬವರು ಮೈಸೂರಿನ ಶ್ರೀ ಜಯಚಾಮ ರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದು ನಂತರ ರಾಜಕೀಯಕ್ಕೆ ಬಂದು ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸಿ ಹಂಗಳ ಗ್ರಾಪಂ ಸದಸ್ಯರಾಗಿದ್ದರು. ಇದರ ಮಧ್ಯೆ ರಾಜಕೀಯದಿಂದ ದೂರವಾಗಿ ಕಳೆದ ಎರಡು ವರ್ಷಗಳಲ್ಲಿ ಕೃಷಿಯ ಕಡೆ ಒಲವು ತೋರಿಸಿ ಅನೇಕ ಯುವಕರಿಗೆ ಕೃಷಿಯ ಬಗ್ಗೆ ಆಸಕ್ತಿ ಮೂಡುವಂತೆ ಬೆಳೆಗಳನ್ನು ಬೆಳೆದಿದ್ದಾರೆ.

ತಾಲ್ಲೂಕಿನ ಹಂಗಳ ಗ್ರಾಮದ ಮರಿಯಪ್ಪ ಮಹ ದೇವಪ್ಪ ಅವರದ್ದು ರೈತಾಪಿ ಕುಟುಂಬ. ನಂತರದ ದಿನಗಳಲ್ಲಿ ವ್ಯವಸಾಯದ ಬಗ್ಗೆ ಆಸಕ್ತಿ ಕ್ಷೀಣಿಸಿತ್ತು. ಆದರೆ ನಂದೀಶ್ ಮತ್ತೆ ವ್ಯವಸಾಯದಲ್ಲೇ ಸಾಧನೆ ಮಾಡಬೇಕು ಎಂಬ ಸಂಕಲ್ಪ ತೊಟ್ಟು ಕೃಷಿಗೆ ಇಳಿದು ಲಕ್ಷಾಂತರ ರೂ. ಬಂಡವಾಳ ಹಾಕಿ ಕೋಟ್ಯಂತರ ರೂ. ಸಂಪಾದಿಸುತ್ತಿದ್ದಾರೆ.

ಎಚ್.ಎಂ.ನಂದೀಶ್ ಗ್ರಾಮದಲ್ಲಿ ಸುಮಾರು ಐವತ್ತು ಎಕರೆಯಷ್ಟು ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದು, ೨ ವರ್ಷಗಳಲ್ಲಿ ಒಂದೂವರೆ ಕೋಟಿ ರೂ.ಗಳನ್ನು ವ್ಯವಸಾಯದಿಂದ ಗಳಿಸಿದ್ದಾರೆ. ಕೃಷಿಗೆ ಲಕ್ಷಾಂತರ ರೂ. ವಿನಿಯೋಗಿಸಿದ್ದಾರೆ.

ಇಪ್ಪತ್ತು ಎಕರೆಯಲ್ಲಿ ಬಾಳೆ, ಅರಿಶಿನ, ಆಲೂಗಡ್ಡೆ, ಸಾಂಬಾರ್ ಸೌತೆ, ಈರುಳ್ಳಿ, ಬೀಟ್ರೂಟ್, ತೆಂಗು, ಕಲ್ಲಂಗಡಿ ಬೆಳೆಗಳನ್ನು ಬೆಳೆದು ವ್ಯವಸಾಯದಲ್ಲಿ ಕೋಟ್ಯಂತರ ರೂ. ಸಂಪಾದಿಸಬಹುದು ಎಂದು ತೋರಿಸುವ ಮೂಲಕ ವ್ಯವಸಾಯದಿಂದ ವಿಮುಖರಾಗುತ್ತಿರುವ ಯುವಕರಿಗೆ ಪ್ರೇರಣೆಯಾಗಿದ್ದಾರೆ.

ಭೂಮಿ ತಾಯಿ ನಂಬಿದರೆ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಕೈ ಹಿಡಿಯುತ್ತಾಳೆ. ಆದ್ದರಿಂದ ಯಾರೂ ಕೃಷಿಯ ಕುರಿತು ಬೇಸರ ಹೊಂದಬಾರದು. ಈಗಿನ ತಂತ್ರಜ್ಞಾನವನ್ನು ಬಳಸಿಕೊಂಡು ಮತ್ತು ಯಾವ ಸಮಯದಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬುದನ್ನು ಅರಿತು ಕೃಷಿ ಮಾಡಿದರೆ ಲಾಭ ಕಟ್ಟಿಟ್ಟ ಬುತ್ತಿ ಎಂದು ಪ್ರಗತಿಪರ ರೈತ ನಂದೀಶ್ ಹೇಳುತ್ತಾರೆ.

೧೦೦ ಕ್ವಿಂಟಾಲ್ ಸೂರ್ಯಕಾಂತಿ ಬೆಳೆದ ರೈತ: ಕಳೆದ ವರ್ಷ ತಮ್ಮ ಜಮೀನಿನಲ್ಲಿ ೧೦೦ ಕ್ವಿಂಟಾಲ್ ಸೂರ್ಯಕಾಂತಿ ಬೆಳೆದು ಲಕ್ಷಾಂತರ ರೂ. ಸಂಪಾದಿಸಿದ್ದರು. ಅಲ್ಲದೆ ತಾಲ್ಲೂಕಿನಲ್ಲಿ ಸೂರ್ಯಕಾಂತಿ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿದ್ದರು.

ಕಳೆದ ಒಂದೂವರೆ ವರ್ಷದಲ್ಲಿ ಏಲಕ್ಕಿ, ನೇಂದ್ರ, ಪಚ್ಚಬಾಳೆ ಹಾಕಿ ಸುಮಾರು ೩೦ ಲಕ್ಷ ರೂ.ಗಳಿಗೂ ಹೆಚ್ಚು ಹಣವನ್ನು ಗಳಿಸಿದ್ದಾರೆ. ಜೊತೆಗೆ ಕಲ್ಲಂಗಡಿ, ಬೀಟ್ರೂಟ್, ಸಾಂಬಾರ್ ಸೌತೆ, ಈರುಳ್ಳಿಯಿಂದ ಲಕ್ಷಾಂತರ ರೂ. ಸಂಪಾದಿಸಿದ್ದಾರೆ. ಜತೆಗೆ ಈ ವರ್ಷ ಜಮೀನಿನಲ್ಲಿ ೨೫೦ ಕ್ವಿಂಟಾಲ್ ಅರಿಶಿನ ಬೆಳೆದು, ಲಕ್ಷಾಂತರ ರೂ. ಸಂಪಾದಿಸಿದ್ದಾರೆ.

” ಕೃಷಿ ಮತ್ತು ತೋಟಗಾರಿಕೆಗಳ ಸಬ್ಸಿಡಿಗಳನ್ನು ಸಣ್ಣ ರೈತರಿಗೆ ಮಾತ್ರ ನೀಡುತ್ತಾರೆ. ದೊಡ್ಡಮಟ್ಟದಲ್ಲೂ ಕೃಷಿ ಮಾಡುವ ರೈತರಿಗೆ ಸಬ್ಸಿಡಿ ನೀಡಬೇಕು. ಅಲ್ಲದೆ ಪ್ರಗತಿಪರ ರೈತರ ಬೆಳವಣಿಗೆಗೆ ಸರ್ಕಾರಗಳ ಸಹಕಾರ ಅಗತ್ಯ. ಸರಿಯಾದ ಬೆಲೆ ಸಿಕ್ಕರೆ ರೈತನಿಗೆ ಸರಿಸಾಟಿ ಯಾರೂ ಇಲ್ಲ.”

-ಎಚ್.ಎಂ.ನಂದೀಶ್, ಪ್ರಗತಿಪರ ರೈತ

 

 

Tags:
error: Content is protected !!