Mysore
30
scattered clouds

Social Media

ಶನಿವಾರ, 21 ಫೆಬ್ರವರಿ 2026
Light
Dark

ಶತಮಾನದ ಸರ್ಕಾರಿ ಶಾಲೆಗೆ ಬೇಕಿದೆ ಕಾಯಕಲ್ಪ

ಆರ್.ಶ್ರೀನಿವಾಸ್

ಬೀಳುವ ಹಂತದಲ್ಲಿರುವ ಅಗ್ರಹಾರಬಾಚಹಳ್ಳಿ ಶಾಲೆ ಕಟ್ಟಡ; ದುರಸ್ತಿಗೆ ಸಾರ್ವಜನಿಕರ ಒತ್ತಾಯ 

ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಅಗ್ರಹಾರಬಾಚಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯು ೧೯೨೬ರಲ್ಲಿ ಆರಂಭಗೊಂಡಿದ್ದು, ೨೦೨೬ಕ್ಕೆ ೧೦೦ ವರ್ಷಗಳು ತುಂಬಲಿದೆ. ಆದರೆ, ಶಾಲೆಯ ಹಲವು ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ದುರಸ್ತಿ ಕಾಣದೆ ವಿದ್ಯಾರ್ಥಿಗಳು ಆತಂಕದಲ್ಲೇ ಪಾಠ ಕಲಿಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಶಾಲೆಯ ಮೇಲ್ಚಾವಣಿಯ ಮರದ ಜಂತಿಗಳು, ಕಿಟಕಿಗಳು, ಬಾಗಿಲುಗಳು ಮುರಿದು ಬಿದ್ದಿವೆ. ಇವುಗಳನ್ನು ಗೆದ್ದಿಲು ಹುಳಗಳು ತಿಂದು ಹಾಳು ಮಾಡಿವೆ. ಸುಮಾರು ೪೦ ವರ್ಷಗಳ ಹಿಂದೆ ನಿರ್ಮಿಸಿರುವ ನಾಲ್ಕು ಕೊಠಡಿಗಳೂ ಶಿಥಿಲಗೊಂಡು ದುರಸ್ತಿ ಕಾಣದೇ ಗೋಡೆಗಳು ಬೀಳುವ ಹಂತದಲ್ಲಿವೆ. ಕೊಠಡಿಗಳು ದುರಸ್ತಿ ಆಗದೆ ಇರುವ ಕಾರಣ ವಿದ್ಯಾರ್ಥಿಗಳು ಭಯದಲ್ಲೇ ಪಾಠ ಕೇಳುವ ಪರಿಸ್ಥಿತಿ ಉಂಟಾಗಿದೆ. ಶಾಲಾ ಕಟ್ಟಡವು ಶಿಥಿಲ ಗೊಂಡಿರುವ ಬಗ್ಗೆ ಶಾಲೆಯ ಶಿಕ್ಷಕರು ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತಂದರೂ ಕೂಡ ಸರ್ಕಾರ ದಿಂದ ಅನುದಾನ ಬಿಡುಗಡೆ ಆಗಿಲ್ಲ. ಇದರಿಂದ ಕೊಠಡಿಗಳು ದುರಸ್ತಿ ಕಾಣದೇ ಶಿಥಿಲಗೊಳ್ಳುತ್ತಿವೆ.

ವಿದ್ಯಾರ್ಥಿಗಳು ಮಳೆಗಾಲದಲ್ಲಿ ಮಳೆ ನೀರಿನ ಸಮಸ್ಯೆ, ಬೇಸಿಗೆ ಕಾಲದಲ್ಲಿ ಬಿಸಿಲಿನ ಸಮಸ್ಯೆಯೊಂದಿಗೆ ಪಾಠ ಕಲಿಯಬೇಕಾಗಿದೆ. ಹಾಗಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಅಥವಾ ಕ್ಷೇತ್ರದ ಶಾಸಕರು ಕೂಡಲೇ ಅನುದಾನ ಬಿಡುಗಡೆ ಮಾಡಿಕೊಡುವ ಮೂಲಕ ಶಾಲಾ ಕೊಠಡಿಗಳ ದುರಸ್ತಿಗೆ ಕ್ರಮ ಕೈಗೊಂಡು ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಅಗ್ರಹಾರಬಾಚಹಳ್ಳಿ ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

” ಶಾಲೆಯ ಕೊಠಡಿಗಳು ಶಿಥಿಲಗೊಂಡು ಬೋಧನೆಗೆ ಮತ್ತು ಕಲಿಕೆಗೆ ತೊಂದರೆಯಾಗಿರುವ ಬಗ್ಗೆ ಶಿಕ್ಷಣ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಜೊತೆಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಗಮನಕ್ಕೂ ತರಲಾಗಿದೆ. ಅನುದಾನ ಬಂದ ಕೂಡಲೇ ದುರಸ್ತಿ ಮಾಡಿಸಿ ಶಿಥಿಲ ಕೊಠಡಿಯಲ್ಲಿ ಭಯದಿಂದ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಶೈಕ್ಷಣಿಕೆ ಕಲಿಕೆಗೆ ಒತ್ತು ನೀಡಲಾಗುವುದು.”

-ಎ.ಎಚ್.ಯೋಗೇಶ್, ಮುಖ್ಯ ಶಿಕ್ಷಕರು, ಅಗ್ರಹಾರಬಾಚಹಳ್ಳಿ

” ೧೦೦ ವರ್ಷಗಳನ್ನು ಪೂರೈಸುತ್ತಿರುವ ಅಗ್ರಹಾರಬಾಚಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಗ್ರಾಮ ಪಂಚಾಯಿತಿ ವತಿಯಿಂದ ಶೌಚಾಲಯ ವ್ಯವಸ್ಥೆ, ಕಾಂಪೌಂಡ್ ನಿರ್ಮಿಸಲು ಅಗತ್ಯಕ್ರಮ ವಹಿಸಲಾಗುವುದು. ಮುಂದಿನ ವರ್ಷ ಶಾಲೆಯ ವತಿಯಿಂದ ಹಮ್ಮಿಕೊಳ್ಳುವ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು.”

-ಎ.ಸಿ.ದಿವಿಕುಮಾರ್, ಅಧ್ಯಕ್ಷರು, ಅಗ್ರಹಾರಬಾಚಹಳ್ಳಿ ಗ್ರಾಪಂ

” ಅಗ್ರಹಾರಬಾಚಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಲವು ಕೊಠಡಿಗಳು ಶಿಥಿಲಗೊಂಡಿದ್ದು, ಮಕ್ಕಳು ಜೀವಭಯದಲ್ಲೇ ಪಾಠ ಕೇಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರವು ಕೂಡಲೇ ಸೂಕ್ತ ಅನುದಾನ ನೀಡಿ ಶಾಲೆಯ ದುರಸ್ತಿಗೆ ಅವಕಾಶ ನೀಡಬೇಕು. ಮುಂದಿನ ವರ್ಷ ಈ ಶಾಲೆ ಆರಂಭವಾಗಿ ೧೦೦ ವರ್ಷಗಳು ತುಂಬುತ್ತದೆ. ಆಗ ಶಾಲೆಯ ಶತಮಾನೋತ್ಸವ ಆಚರಣೆ ಮಾಡಲು ಗ್ರಾಮಸ್ಥರು ಮುಂದಾಗಿದ್ದೇವೆ. ಅಷ್ಟರೊಳಗೆ ಸೂಕ್ತ ಅನುದಾನ ನೀಡಿ ಕೊಠಡಿಗಳ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಬೇಕು.”

-ಎ.ಎಸ್.ಸಂತೋಷ್, ಎಸ್.ಡಿ.ಎಂ.ಸಿ ಅಧ್ಯಕ್ಷರು, ಅಗ್ರಹಾರಬಾಚಹಳ್ಳಿ 

Tags:
error: Content is protected !!