ಕೆ.ಬಿ.ರಮೇಶನಾಯಕ
ಡಿಸೆಂಬರ್ ತಿಂಗಳ ಅಂತ್ಯಕ್ಕೆ ಪ್ರಾರಂಭಿಸಲು ಅಧಿಕಾರಿಗಳಿಂದ ಅಗತ್ಯ ಸಿದ್ಧತೆ
ಮೈಸೂರು: ಮುಂದಿನ ೩೦-೫೦ ವರ್ಷಗಳಲ್ಲಿ ಘನ ತ್ಯಾಜ್ಯ ನಿರ್ವಹಣೆಯ ಸಮಸ್ಯೆಯನ್ನು ದೂರ ಮಾಡಲು ಹಾಗೂ ವೈಜ್ಙಾನಿಕವಾಗಿ ಕಸ ವಿಲೇವಾರಿ ಮಾಡಲು ವಿದ್ಯಾರಣ್ಯಪುರಂ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿಡಿಸೆಂಬರ್ ತಿಂಗಳಲ್ಲಿ ೨೦೦ ಟನ್ ಸಾಮರ್ಥ್ಯದ ಘನ ತ್ಯಾಜ್ಯ ವಿಲೇವಾರಿ ಘಟಕ ಕಾರ್ಯಾರಂಭ ಮಾಡಲಿದೆ.
ಹಲವಾರು ವರ್ಷಗಳಿಂದ ವಿದ್ಯಾರಣ್ಯಪುರಂನಲ್ಲಿರುವ ಪಾರಂಪರಿಕ ತ್ಯಾಜ್ಯವನ್ನು ವಿಲೇವಾರಿ ಮಾಡುವ ಕೆಲಸ ನಡೆಯುತ್ತಿರುವ ಹೊತ್ತಲ್ಲೇ ಘನತ್ಯಾಜ್ಯ ವಿಲೇವಾರಿ ಘಟಕ ಶುರುವಾಗಲಿದೆ. ಈಗಾಗಲೇ ಘಟಕವನ್ನು ನಿರ್ಮಾಣ ಮಾಡಿ ಯಂತ್ರೋಪಕರಣಗಳನ್ನು ಅಳವಡಿಸಿದ್ದು, ಡಿಸೆಂಬರ್ ಅಂತ್ಯದಲ್ಲಿ ಶುರುವಾಗಲಿದೆ. ಇದರಿಂದಾಗಿ ನಗರದ ಹೃದಯ ಭಾಗದಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಯನ್ನು ತಕ್ಕಮಟ್ಟಿಗೆ ದೂರ ಮಾಡುವ ದಿನಗಳು ಸಮೀಪಿಸಿವೆ.
ಮೈಸೂರು ನಗರದಲ್ಲಿ ದಶಕಗಳ ಹಿಂದೆ ನಿತ್ಯ ೩೦೦ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿತ್ತು. ಇದೀಗ ಮೈಸೂರಿನ ಹೊರವಲಯದ ಹೂಟಗಳ್ಳಿ ನಗರಸಭೆ, ಶ್ರೀರಾಂಪುರ, ಬೋಗಾದಿ, ರಮ್ಮನಹಳ್ಳಿ, ಕಡಕೊಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸ ಸೇರಿದಂತೆ ನಿತ್ಯ ೫೫೦ ಟನ್ ತ್ಯಾಜ್ಯಉತ್ಪತ್ತಿಯಾಗುತ್ತಿದೆ. ಇದರಿಂದಾಗಿ ವಿದ್ಯಾರಣ್ಯಪುರಂನಲ್ಲಿರುವ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ೭ಲಕ್ಷಕ್ಕೂ ಹೆಚ್ಚು ಟನ್ ವಿಲೇವಾರಿಯಾಗದೆ ಬೆಟ್ಟದಷ್ಟು ರಾಶಿಯಾಗಲು ಕಾರಣವಾಗಿತ್ತು. ಹೀಗಾಗಿ, ಇದನ್ನು ವಿಲೇವಾರಿ ಮಾಡಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ನೆರವಿನಡಿ ಗುಜರಾತ್ ಮೂಲದ ಕಂಪೆನಿಗೆ ಟೆಂಡರ್ ನೀಡಲಾಗಿತ್ತು. ಇದೀಗ ಮೈಸೂರು ನಗರ ಪಾಲಿಕೆಯು ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿಗೆ ಮುಂದಾಗಿ ೨೦೦ ಟನ್ ಸಾಮರ್ಥ್ಯದ ಘಟಕವನ್ನು ನಿರ್ಮಾಣ ಮಾಡಿದೆ.
೧೦.೫೦ ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ: ಮೈಸೂರಿನಲ್ಲಿ ನಿತ್ಯ ೫೫೦ ಟನ್ ತ್ಯಾಜ್ಯವನ್ನು ಸಂಗ್ರಹ ಮಾಡಲಾಗುತ್ತಿದ್ದು, ೨೦೨೩ರಲ್ಲಿ ರಾಯನಕೆರೆಯಲ್ಲಿ ೧೫೦ ಟನ್ ಸಾಮರ್ಥ್ಯ, ೨೦೨೪ರಲ್ಲಿ ಕೆಸರೆಯಲ್ಲಿ ೨೦೦ ಟನ್ ಸಾಮರ್ಥ್ಯದ ಘಟಕವನ್ನು ನಿರ್ಮಾಣ ಮಾಡಿ ಕಾಂಪೋಸ್ಟ್ ತಯಾರಿಸುವ ಕೆಲಸ ಆರಂಭಿಸಲಾಯಿತು. ಇದೀಗ ವಿದ್ಯಾರಣ್ಯಪುರಂ ಘಟಕದಲ್ಲಿ ೨೦೦ ಟನ್ ಸಾಮರ್ಥ್ಯದ ಘಟಕವನ್ನು ನಿರ್ಮಿಸಲಾಗಿದೆ. ೭.೬೫ ಕೋಟಿ ರೂ.ವೆಚ್ಚದಲ್ಲಿ ಸಿವಿಲ್ ಕಾಮಗಾರಿ, ೨.೯೫ ಕೋಟಿ ರೂ.ವೆಚ್ಚದಲ್ಲಿ ಯಂತ್ರೋಪಕರಣವನ್ನು ಅಳವಡಿಸಲಾಗಿದೆ.
ನಗರದ ಎರಡು ಕಡೆಗಳಲ್ಲಿ ತ್ಯಾಜ್ಯ ವಿಲೇವಾರಿ ಕೇಂದ್ರ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದ್ದು, ಹಳೆ ಕೆಸರೆಯ ರಿಂಗ್ ರಸ್ತೆಯ ಜಾಗ ಸೇರಿದಂತೆ ಎರಡು ಕಡೆಗಳಲ್ಲಿ ಇರುತ್ತದೆ. ಸ್ಥಳೀಯ ತ್ಯಾಜ್ಯ ಸಂಗ್ರಹವಾಹನಗಳು ಸಂಗ್ರಹಿಸಿದ ತ್ಯಾಜ್ಯವನ್ನು ದೊಡ್ಡ ವಾಹನಗಳಿಗೆ ಸಾಗಾಣಿಕೆ ಮಾಡಲಿವೆ. ನಂತರ,ಅಲ್ಲಿಂದ ನೇರವಾಗಿ ವಿಲೇವಾರಿ ಘಟಕಕ್ಕೆ ರವಾನೆಯಾಗಲಿದೆ. ತ್ಯಾಜ್ಯ ವಿಲೇವಾರಿ ಕೇಂದ್ರ(ಟ್ರಾನ್ ಫರ್ ಸ್ಟೇಷನ್)ದಲ್ಲಿ ಹಸಿ ಮತ್ತು ಒಣಕಸವನ್ನು ಬೇರ್ಪಡಿಸಿಯೇ ಮುಂದಕ್ಕೆ ಹೋಗುವಂತೆ ಮಾಡಲು ಪಾಲಿಕೆ ಪ್ಲಾನ್ ಮಾಡಿಕೊಂಡಿದೆ ಎಂದು ಹೇಳಲಾಗಿದೆ.
ಗೊಬ್ಬರಕ್ಕೆ ಬೇಡಿಕೆ: ಘನತ್ಯಾಜ್ಯದಿಂದ ತಯಾರಿಸುವ ಗೊಬ್ಬರಕ್ಕೆ ಭಾರೀ ಬೇಡಿಕೆ ಉಂಟಾಗಿದೆ. ರಾಯನಕೆರೆ, ಕೆಸರೆಯಲ್ಲಿ ತಯಾರಾಗುವ ಸಂಸ್ಕರಿಸಿದ ಗೊಬ್ಬರವನ್ನು ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮಕ್ಕೆ ಕಳುಹಿಸಲಾಗುತ್ತದೆ. ನಗರಪಾಲಿಕೆ ವತಿಯಿಂದ ಖರೀದಿಸಿ,ಅಲ್ಲಿಂದ ಹೂ ತೋಟಗಳು ಸೇರಿದಂತೆ ಇನ್ನಿತರ ಬಳಕೆಗೆ ಮಾರಾಟ ಮಾಡಲಾಗುತ್ತದೆ. ಸರ್ಕಾರಿ ಸ್ವಾಮ್ಯದ ನಿಗಮವಾಗಿರುವ ಕಾರಣ ಕಡಿಮೆ ದರದಲ್ಲಿ ಮಾರಾಟವಿರುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದರು.
ಸದ್ದು ಮಾಡಿದ್ದ ಘಟಕ: ವಿದ್ಯಾರಣ್ಯಪುರಂ ಘನತ್ಯಾಜ್ಯ ಘಟಕದಲ್ಲಿ ಲಕ್ಷಾಂತರ ಟನ್ ಕಸ ಕೊಳೆತು ದುರ್ನಾತ ಬೀರುತ್ತಿದ್ದರಿಂದ ೨೦೧೭ರ ಅವಧಿಯಲ್ಲಿ ದೊಡ್ಡ ಸದ್ದು ಮಾಡಿತ್ತು. ಚಾಮುಂಡಿಪುರಂ, ಕನಕಗಿರಿ, ಗುಂಡೂರಾವ್ನಗರ, ಗೌರಿಶಂಕರನಗರ, ಜೆ.ಪಿ.ನಗರ, ದೇವ ರಾಜ ಅರಸು ಕಾಲೋನಿ, ವಿದ್ಯಾರಣ್ಯಪುರಂ ನಿವಾಸಿಗಳು ಬೃಹತ್ ಪ್ರತಿಭಟನೆ ನಡೆಸಿದ್ದರು. ಹಲವರು ರೋಗಕ್ಕೆ ತುತ್ತಾಗಿದ್ದರಿಂದ ಮನೆ ತೊರೆದಿದ್ದರು. ಇದರಿಂದಾಗಿ ನಗರಪಾಲಿಕೆ ವತಿಯಿಂದ ನಿತ್ಯ ೨೪ ಗಂಟೆಗಳ ಕಾಲ ಸ್ಪ್ರೇ ಮಾಡಿ ವಾಸನೆ ಹೊರ ಬರದಂತೆ ನೋಡಿಕೊಂಡಿದ್ದನ್ನು ಸ್ಮರಿಸಬಹುದು.
” ಮೈಸೂರಿನಲ್ಲಿ ವೈಜ್ಞಾನಿಕವಾಗಿ ಕಸ ನಿರ್ವಹಣೆ ಮತ್ತು ವಿಲೇವಾರಿ ಮಾಡಬೇಕಾಗಿದೆ. ಡಿಸೆಂಬರ್ ತಿಂಗಳ ಅಂತ್ಯಕ್ಕೆ ೨೦೦ ಟನ್ ಸಾಮರ್ಥ್ಯದ ಘನ ತ್ಯಾಜ್ಯ ವಿಲೇವಾರಿ ಘಟಕ ಕಾರ್ಯಾರಂಭ ಮಾಡಲಿದೆ. ನಿತ್ಯ ಸಂಗ್ರಹಿಸುವ ೫೫೦ ಟನ್ ಕಸವನ್ನು ರಾಯನಕೆರೆ, ಕೆಸರೆ ಹಾಗೂ ವಿದ್ಯಾರಣ್ಯಪುರಂ ಘಟಕಗಳಿಂದ ವಿಲೇವಾರಿ ಮಾಡಿ ಕಾಂಪೋಸ್ಟ್ ಮಾಡಲಾಗುವುದು.”
-ಶೇಖ್ ತನ್ವೀರ್ ಆಸಿಫ್, ಆಯುಕ್ತರು, ಮೈಸೂರು ಮಹಾನಗರಪಾಲಿಕೆ





