ಹೇಮಂತ್ಕುಮಾರ್
ದಾಖಲೆ ಸೃಷ್ಟಿ ; ಹಲವು ಅಚ್ಚರಿಗಳ ತಾಣವಾದ ಮೂರು ದಿನಗಳ ಮೇಳ
ಮಂಡ್ಯ: ಮೂರು ದಿನಗಳ ಕಾಲ ವಿ.ಸಿ.ಫಾರಂನಲ್ಲಿ ನಡೆದ ಕೃಷಿ ಮೇಳದಲ್ಲಿ ಲಕ್ಷಾಂತರ ಮಂದಿ ರೈತರು, ಸಾರ್ವಜನಿಕರು ಪಾಲ್ಗೊಂಡಿದ್ದು, ಈಗ ಇತಿಹಾಸ. ಕೃಷಿ ವಿಶ್ವವಿದ್ಯಾನಿಲಯವಾದ ಬಳಿಕ ಇದೇ ಪ್ರಥಮ ಬಾರಿಗೆ ಎನ್ನುವಂತೆ ಸಹಸ್ರ, ಸಹಸ್ರ ಮಂದಿ ಕೃಷಿ ಮೇಳಕ್ಕೆ ಭೇಟಿ ನೀಡಿ ವೀಕ್ಷಿಸಿದ್ದು ದಾಖಲೆಯಾಗಿದೆ.
ಮೇಳದ ಅಂತಿಮ ದಿನವಾದ ಭಾನುವಾರವೂ ಕೃಷಿ ಮೇಳ ವೀಕ್ಷಣೆಗೆ ಜನಸಾಗರ ಹರಿದು ಬಂತು. ಆರಂಭದ ದಿನ ೧.೨೫ ಲಕ್ಷ ಜನರು ಮೇಳವನ್ನುವೀಕ್ಷಿಸಿದರೆ, ೨ನೇ ದಿನ ೩.೭೫ ಲಕ್ಷ ಜನರು ಆಗಮಿಸಿದ್ದರು. ಕೊನೆಯ ದಿನವಾದ ಭಾನುವಾರ ೪ ಲಕ್ಷ ಜನರು ಕೃಷಿಮೇಳ ವೀಕ್ಷಿಸಿ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ ಎಂದು ಕೃಷಿ ವಿವಿ ಮೂಲಗಳು ತಿಳಿಸಿವೆ
ಹಲವು ಆವಿಷ್ಕಾರಗಳ ಅನಾವರಣ: ಕೃಷಿ ವಿವಿ ವ್ಯಾಪ್ತಿಯ ೫ ಜಿಲ್ಲೆಗಳೂ ಸೇರಿದಂತೆ ಹೊರ ಜಿಲ್ಲೆಗಳಿಂದಆಗಮಿಸಿದ್ದ ವಿದ್ಯಾರ್ಥಿಗಳು, ಪ್ರಗತಿಪರ ರೈತರು, ರೈತ ಮಹಿಳೆಯರು, ಗ್ರಾ.ಪಂ. ಒಕ್ಕೂಟದ ಸದಸ್ಯರು, ವಿವಿಧ ಕಂಪೆನಿಗಳ ಪ್ರತಿನಿಧಿಗಳು, ಯುವ ರೈತರು ಹಾಗೂ ಸಾರ್ವಜನಿಕರೂ ಸೇರಿದಂತೆ ೧೦ ಲಕ್ಷ ಜನರು ಮೇಳಕ್ಕೆ ಭೇಟಿ ನೀಡಿ, ಕೃಷಿ ಕ್ಷೇತ್ರದ ಆವಿಷ್ಕಾರಗಳು, ಹೊಸ ತಳಿಗಳು, ಹೈಬ್ರಿಡ್ ಬೆಳೆಗಳು, ಹೊಸ ಕೃಷಿ ಯಂತ್ರೋಪಕರಣಗಳು, ಕೀಟಗಳ ಬಗೆಗಿನ ಮಾಹಿತಿ, ಅಂತರ ಬೆಳೆಗಳ ಪ್ರಾತ್ಯಕ್ಷಿಕೆ, ಹೆಚ್ಚು ಇಳುವರಿ ನೀಡುವ ಬೆಳೆಗಳೂ ಸೇರಿದಂತೆ ವಿವಿಧ ಮಾದರಿಯ ಬೆಳೆಗಳ ಕುರಿತ ಸಮಗ್ರ ಮಾಹಿತಿ ಪಡೆದುಕೊಂಡರು.
ಗಮನ ಸೆಳೆದ ಗೋ ಉತ್ಪನ್ನಗಳು: ದೇಸಿ ತಳಿ ಗೋವುಗಳ ಪ್ರದರ್ಶನದೊಂದಿಗೆ ಅವುಗಳ ಮಹತ್ವ, ಗೋ ಉತ್ಪನ್ನಗಳ ಮಹತ್ವವನ್ನು ಕೃಷಿ ಮೇಳದಲ್ಲಿ ಪರಿಚಯಿಸಲಾಗಿತ್ತು.ಬೇಗೂರಿನ ಶ್ರೀ ಕೃಷ್ಣಗೋಶಾಲೆಯವರು ಗುಜರಾತ್ ಮೂಲದ ಗಂಗಾತೀರ, ಕಾಂಕ್ರೇಜ್, ತಾರ್ಪಾರ್ಕಾರ್, ಕಿಲಾರಿ, ಪಂಚ ಕಲ್ಯಾಣಿ ಜಫಾರಾಬಾದಿ ಎಮ್ಮೆ, ರಾಠಿ, ಮಹಾರಾಷ್ಟ್ರ ಮೂಲದ ಢಾಂಗಿ ತಳಿಗಳು ರೈತರನ್ನು ವಿಶೇಷವಾಗಿ ಆಕರ್ಷಿಸಿದವು.
ಹಲವು ವಿಶೇಷತೆಗಳ ಭತ್ತದ ತಳಿ: ೪೫ ರೀತಿಯ ಭತ್ತದ ತಳಿಗಳು, ೩ ಹೈಬ್ರಿಡ್, ೫೦ ತಾಂತ್ರಿಕತೆಗಳು, ಕಬ್ಬಿನ ೧೭ ತಳಿಗಳು, ೨೦ ತಂತ್ರಜ್ಞಾನಗಳು, ಮುಸುಕಿನ ಜೋಳದ ೪ ತಳಿಗಳು, ಮೇವಿನ ಬೆಳೆಗಳ ೪,ಸೂರ್ಯಕಾಂತಿ ಸಂಕರಣ ತಳಿ, ಚಾಮರಾಜನಗರದ ಕಪ್ಪು ಅರಿಶಿನ ತಳಿಯನ್ನು ಅಭಿವೃದ್ಧಿಪಡಿಸಿ ಪ್ರದರ್ಶನಕ್ಕಿಡಲಾಗಿತ್ತು.
ಒಂದೇ ಗಿಡದಲ್ಲಿ ಎರಡು ಬೆಳೆ!!: ಕೃಷಿ ಮೇಳದಲ್ಲಿ ಒಂದೇ ಗಿಡದಲ್ಲಿ ಕಸಿ ಮಾಡಿ ಬೆಳೆಸಲಾದ ಬದನೆಕಾಯಿ ಹಾಗೂಟೊಮ್ಯಾಟೋ ಬೆಳೆ ಗಮನಸೆಳೆಯಿತು. ಟೊಮ್ಯಾಟೋ ಅಥವಾ ಬದನೆಗಿಡ ಬೆಳೆದ ನಂತರ ಅದನ್ನು ಕಸಿ ಮಾಡುವ ಮೂಲಕ ಒಂದೇ ಗಿಡದಲ್ಲಿ ಎರಡೂ ಬೆಳೆಗಳನ್ನು ಬೆಳೆಯುವ ಹೊಸ ವಿಧಾನವನ್ನು ರೈತರಿಗೆ ಪರಿಚಯಿಸಲಾಗಿತ್ತು. ಕೃಷಿ ಮೇಳವನ್ನು ನೋಡಲು ಬಂದ ಸಾರ್ವಜನಿಕರಿಗೆ ನೀಡಲಾಗುತ್ತಿದ್ದ ಊಟಕ್ಕೆಸೀಮಿತ ಶುಲ್ಕವನ್ನು ನಿಗದಿಪಡಿಸಲಾಗಿತ್ತಾದರೂ ಕೇಂದ್ರಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಎರಡು ದಿನಗಳ ಊಟದ ವೆಚ್ಚವನ್ನು ತಾವೇ ಭರಿಸುವ ಮೂಲಕ ಎಲ್ಲರಿಗೂ ಊಟ ಸಿಗುವಂತೆ ಮಾಡಿದ್ದರು.
” ಒಟ್ಟಾರೆ ಮೂರು ದಿನಗಳ ಕೃಷಿ ಮೇಳಕ್ಕೆ ಸುಮಾರು ೮ ಲಕ್ಷ ಜನರು ಭಾಗವಹಿಸಬಹುದು ಎಂದು ಕೃಷಿ ವಿಶ್ವವಿದ್ಯಾನಿಲಯದ ಅಽಕಾರಿಗಳು ನಿರೀಕ್ಷಿಸಿದ್ದರಾದರೂ ೧೦ ಲಕ್ಷ ಜನರು ಭಾಗವಹಿಸುವುದರೊಂದಿಗೆ ಕೃಷಿ ಮೇಳವನ್ನು ಯಶಸ್ವಿಗೊಳಿಸಿ ಹೊಸ ದಾಖಲೆಯೇ ಸೃಷ್ಟಿಯಾಗಿರುವುದು ಜಿಲ್ಲೆಯ ಹೆಮ್ಮೆ ಎನಿಸಿದೆ.”
ಜನಾಕರ್ಷಿಸಿದ ೩೦ ಲೀಟರ್ ಹಾಲು ನೀಡುವ ಜಫರಾಬಾದಿ ಎಮ್ಮೆ!
ಗುಜರಾತ್ನ ಪೋರ್ಬಂದರ್ನ ಜಫರಾಬಾದಿ ಎಮ್ಮೆ ನಿತ್ಯ ೨೫ ರಿಂದ ೩೦ ಲೀಟರ್ ಹಾಲು ನೀಡುತ್ತದೆ. ದೈತ್ಯಾಕಾರದ ಎಮ್ಮೆಯ ಬೆಲೆ ೫ ರಿಂದ ೬ ಲಕ್ಷ ರೂ.ಗಳಾಗಿವೆ. ದೇಸಿ ತಳಿ ಗೋವುಗಳು ಕೂಡ ನಿತ್ಯ ೨೦ ರಿಂದ ೨೫ ಲೀಟರ್ ಹಾಲನ್ನುನೀಡುತ್ತವೆ. ಮತ್ತೆ ಕೆಲವು ದೇಸಿ ಗೋವುಗಳಾದ ರುದ್ರಂ, ಲಕ್ಷ್ಮಿ ತಳಿಯ ಹಸುಗಳು ನಿತ್ಯ ೬ ರಿಂದ ೭ ಲೀಟರ್ ಹಾಲನ್ನು ನೀಡುತ್ತವೆ. ಈ ಕುರಿತು ಮೇಳದಲ್ಲಿ ಮಾಹಿತಿ ಒದಗಿಸಲಾಗಿತ್ತು. ದೇಸಿಗೋವುಗಳ ಮೂತ್ರ, ಸಗಣಿ ಉತ್ಪನ್ನಗಳನ್ನು ಮಾರಾಟಕ್ಕೆ ಇಡಲಾಗಿತ್ತು





