ಬೆಂಗಳೂರು– : ಕಳೆದ ಆ.21ರಿಂದ ಆರಂಭವಾದ ಮಳೆ ಬಹಳಷ್ಟು ಕಡೆ ಅವಾಂತರ ಸೃಷ್ಟಿಸಿದ್ದು, ಇನ್ನೂ ಐದು ದಿನಗಳ ಕಾಲ ಮಳೆ ಮುಂದುವರೆಯುವ ಮುನ್ಸೂಚನೆಗಳಿವೆ.
ಬಂಗಾಳ ಕೊಲ್ಲಿಯ ಶ್ರೀಲಂಕಾ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಹಾಗೂ ಒಡಿಸ್ಸಾವರೆಗೂ ಟ್ರಫ್ ನಿರ್ಮಾಣವಾಗಿರುವ ಪ್ರಭಾವದಿಂದಾಗಿ ರಾಜ್ಯದಲ್ಲಿ ಮೋಡ ಕವಿದ ವಾತಾವರಣವಿದೆ.
ಕೆಲವೆಡೆ ಮಳೆಯಾಗುತ್ತಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಅಬ್ಬರ ತಗ್ಗಿದೆ. ಆದರೆ, ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಮುಂದುವರೆದಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ
ಮಧ್ಯಾಹ್ನದಿಂದಲೂ ಮಳೆಯಾಗಿದೆ.ನಿರಂತರ ಮಳೆಯಿಂದಾಗಿ ಹಲವೆಡೆ ಅತಿವೃಷ್ಟಿ ಸೃಷ್ಟಿಯಾಗಿದೆ. ಸಾಕಷ್ಟು ಬೆಳೆ ಹಾನಿಯಾಗಿದ್ದು, ಮುಂಗಾರು ಹಂಗಾಮಿನ ಆಹಾರಧಾನ್ಯ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ.
ನಿನ್ನೆ ಸಂಜೆ ಹಾಗೂ ರಾತ್ರಿ ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಗದಗ, ಧಾರವಾಡ ಜಿಲ್ಲೆಯ ಕೆಲವೆಡೆ ಭಾರೀ ಮಳೆಯಾದ ವರದಿಯಾಗಿದೆ.
ರಾಮನಗರ, ದಾವಣಗೆರೆ, ಹಾಸನ, ಚಿಕ್ಕ ಮಗಳೂರು, ಹಾಸನ, ಕೋಲಾರ, ಚಿಕ್ಕ ಬಳ್ಳಾಪುರ, ತುಮಕೂರು, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಳೆ ಮುಂದುವರಿದೆ. ಉಳಿದಂತೆ ಸಾಧಾರಣ ಮಳೆಯಾಗಿದೆ.
ಹವಾಮಾನ ಮುನ್ಸೂಚನೆ ಪ್ರಕಾರ ಮೋಡ ಕವಿದ ವಾತಾವರಣವಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಚುದುರಿದಂತೆ ಮಳೆಯಾಗಲಿದೆ. ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಕಡಿಮೆಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಸೆ.5 ರಿಂದ 10ರ ವರೆಗೆ ಮತ್ತೊಂದು ಸುತ್ತು ರಾಜ್ಯದಲ್ಲಿ ಮಳೆಯಾಗಲಿದೆ. ಮುಂದಿನ 10 ದಿನಗಳಲ್ಲಿ ಸರಾಸರಿ 100 ಮಿಮೀವರೆಗೂ ಮಳೆಯಾಗುವ ಸಾಧ್ಯತೆಗಳಿವೆ ಬೆಂಗಳೂರು 111, ತುಮಕೂರು 127, ಕೋಲಾರ 87, ಚನ್ನಪಟ್ಟಣ 114, ಮಧುಗಿರಿ 108, ಹಿರಿಯೂರು 138, ಚಿತ್ರದುರ್ಗ 120, ಚಿಕ್ಕಮಗಳೂರು 138, ಮೈಸೂರು 95, ಎಚ್ಡಿ ಕೋಟೆ 103, ಉಡುಪಿ 210, ಕಾರವಾರ 191, ಬೀದರ್ 130, ರಾಯಚೂರು 90, ವಿಜಯಪುರ 123, ಯಾದಗಿರಿ 122, ಬಾಗಲಕೋಟೆ 100, ಕಲಬುರಗಿ 134, ಬೆಳಗಾವಿ 196, ಹುಬ್ಬಳ್ಳಿ 141, ಕೊಪ್ಪಳ 106, ಗದಗ 108, ಬಳ್ಳಾರಿ 71, ಶಿವಮೊಗ್ಗ 120, ಚಿಕ್ಕಮಗಳೂರು 130, ಶೃಂಗೇರಿ 221ಮಿಮೀ ವರೆಗೆ ಮುಂದಿನ 10 ದಿನಗಳಲ್ಲಿ ಒಟ್ಟಾರೆ ಸಂಚಿತ ಮಳೆಯಾಗಲಿದೆ.