ವಿರಾಜಪೇಟೆ: ಐತಿಹಾಸಿಕ ನಾಡಬ್ಬ ದಸರಾವನ್ನು ಆಚಾರ ವಿಚಾರಗಳಿಗೆ ಧಕ್ಕೆ ಬಾರದಂತೆ ಭಕ್ತಿಯಿಂದ ಎಲ್ಲ ಕಡೆಗಳಲ್ಲಿ ಆಚರಿಸಲಾಗುತ್ತಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದರು.
ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ ೧೫ನೇ ವರ್ಷದ ಆುುಂಧ ಪೂಜೆ ಅಂಗವಾಗಿ ವಿರಾಜಪೇಟೆ ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಉತ್ಸವಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಈ ವರ್ಷ ಯಾವುದೇ ಅತಂಕಗಳಿಲ್ಲದೆ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಮಾತನಾಡಿ, ಆಯುಧ ಪೂಜೆ ನಾಡಹಬ್ಬ ದಸರಾ ಹಿಂದೂ ಸಂಸ್ಕೃತಿಯ ಹಬ್ಬವಾಗಿದ್ದು, ಕೊಡಗಿನ ಎಲ್ಲಾ ಕಡೆಗಳಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ದೇವರು ಎಲ್ಲರಿಗೂ ಸುಖ ಶಾಂತಿ ನೆಮ್ಮದಿ ನೀಡುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ಬಿಜೆಪಿ ತೇಲಪಂಡ ಶಿವಕುವಾರ್ ಮಾತನಾಡಿದರು. ಕೊಡಗು ಖಾಸಗಿ ಬಸ್ ಕಾರ್ಮಿಕ ಸಂಘದ ಅಧ್ಯಕ್ಷ ಕುಂಬೆಯಂಡ ಸುರೇಶ್ ದೇವಯ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ನಿವೃತ್ತ ಸೈನಿಕ ಪಟ್ಟಚೇರಿರ ಪೂಣಚ್ಚ, ಚೆಂಬೆಳ್ಳೂರು ಗ್ರಾಪಂ ಸದಸ್ಯ ವಿ.ಪಿ.ಡಾಲು, ವಿನಾಯಕ ಟೂರ್ಸ್ನ ಬಿ.ವಿ.ಹೇಮಂತ್, ಉದ್ಯಮಿ ವಿ.ಎನ್.ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.

ಸಂಘದ ಹಿರಿಯ ಕಾರ್ಮಿಕರಿಗೆ ಮತ್ತು ಎಸ್ಎಸ್ಎಲ್ಸಿ, ಪಿಯುಸಿ ಮತ್ತು ಪದವಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ವಿದುಷಿ ಹೇಮಾವತಿ ನಾಟ್ಯಂಜಲಿ ನೃತ್ಯ ಸಂಸ್ಥೆ ವಿದ್ಯಾರ್ಥಿಗಳ ತಂಡ ದುರ್ಗಾದೇವಿಯ ನೃತ್ಯ, ಅಮ್ಮತ್ತಿ ರಾಜೇಶ್ ಅವರಿಂದ ಮ್ಯಾಜೀಕ್ ಶೋ ಹಾಗೂ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಹಾಗೂ ರಸಮಂಜರಿ ಕಾರ್ಯಕ್ರಮಗಳು ನಡೆಯಿತು.





